ರಾಷ್ಟ್ರಪತಿ, ಉಪರಾಷ್ಟ್ರಪತಿ ಅಲ್ಲ, ಉಷಾಪತಿ ಆಗಿರೋದ್ರಲ್ಲೇ ಖುಷಿ
ನವದೆಹಲಿ, ಮೇ 30: ಕೇಂದ್ರ ಸಚಿವ ಎಂ ವೆಂಕಯ್ಯ ನಾಯ್ಡು ಅವರ ಹೆಸರು ರಾಷ್ಟ್ರಪತಿ ಹಾಗೂ ಉಪ ರಾಷ್ಟ್ರಪತಿ ಹುದ್ದೆಗೆ ಕೇಳಿಬರುತ್ತಿತ್ತು. ಇದೀಗ ಆ ವರದಿಗಳನ್ನೆಲ್ಲ ನಿವಾಳಿಸುವುದಕ್ಕೆ ತಮಾಷೆ ಧಾಟಿಯಲ್ಲಿ ನಾಯ್ಡು ಉತ್ತರಿಸಿದ್ದಾರೆ. ನನಗೂ ರಾಷ್ಟ್ರಪತಿ ಆಗೋದು ಬೇಡ, ಉಪರಾಷ್ಟ್ರಪತಿ ಆಗೋದು ಬೇಡ, ಉಷಾ ಪತಿ (ವೆಂಕಯ್ಯ ನಾಯ್ಡು ಪತ್ನಿ ಹೆಸರು ಉಷಾ) ಆಗಿರೋದರಲ್ಲೇ ಸಂತೋಷವಿದೆ ಎಂದು ಉತ್ತರಿಸಿದ್ದಾರೆ.
ಆಂಧ್ರ ಹಾಗೂ ತೆಲಂಗಾಣದಲ್ಲಿ ಬಿಜೆಪಿ ಪಾಲಿಗೆ ಹೊಸ ರಸ್ತೆ ತೆಗೆದುಕೊಳ್ಳಲು ವೆಂಕಯ್ಯ ನಾಯ್ಡು ಅವರನ್ನು ಆಯ್ಕೆ ಮಾಡುವುದರಿಂದ ಅನುಕೂಲವಾಗುತ್ತದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಕಳೆದ ವಾರ, ರಾಷ್ಟ್ರಪತಿ ಸ್ಥಾನಕ್ಕೆ ಬಿಜೆಪಿಯ ಆಯ್ಕೆ ಯಾರು ಎಂಬುದನ್ನು ಕಾದು ನೋಡಲು ವಿಪಕ್ಷಗಳು ನಿರ್ಧರಿಸಿದ್ದವು.[ರಾಷ್ಟ್ರಪತಿ ಚುನಾವಣೆಗೆ ಅಭ್ಯರ್ಥಿಯಾಗಲು ದೇವೇಗೌಡರಿಗೆ ಆಫರ್!]
ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರ ಅವಧಿ ಈ ವರ್ಷದ ಜುಲೈಗೆ ಕೊನೆಯಾಗಲಿದೆ. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಆವರನ್ನು ರಾಷ್ಟ್ರಪತಿ ಹುದ್ದೆಗೆ ಪ್ರತಿ ಪಕ್ಷದ ಒಮ್ಮತದ ಅಭ್ಯರ್ಥಿಯಾಗಿ ಸ್ಪರ್ಧಿಸುವಂತೆ ಮನವಿ ಮಾಡಿದ್ದರು. ಆದರೆ ಗೌಡರು ತಾವು ರಾಜ್ಯ ರಾಜಕಾರಣದಲ್ಲಿ ಮುಂದುವರಿಯುವುದಾಗಿ ತಿಳಿಸಿದ್ದನ್ನು ಸ್ಮರಿಸಬಹುದು.