'ಬಿಜೆಪಿಗೂ ಸೇರಲ್ಲ, ಕಾಂಗ್ರೆಸ್ನಲ್ಲೂ ಉಳಿಯಲ್ಲ' ಎಂದ ಅಮರೀಂದರ್ ಸಿಂಗ್
ನವದೆಹಲಿ, ಸೆಪ್ಟೆಂಬರ್ 30: ಪಂಜಾಬ್ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್, ಕೇಂದ್ರ ಗೃಹ ಸಚಿವ ಅಮಿತ್ ಶಾರನ್ನು ಬುಧವಾರವಷ್ಟೇ ಭೇಟಿಯಾಗಿದ್ದಾರೆ. ಅಮರೀಂದರ್ ಸಿಂಗ್ ತನ್ನ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ಬಳಿಕ ಬಿಜೆಪಿ ಸೇರುತ್ತಾರೆಯೇ ಎಂಬ ಅನುಮಾನಗಳಿಗೆ ಈ ಭೇಟಿಯು ಮತ್ತಷ್ಟು ಪುಷ್ಠಿ ನೀಡಿತ್ತು. ಆದರೆ ಈ ಊಹಾಪೋಹಗಳಿಗೆ ತೆರೆ ಎಳೆದಿರುವ ಕಾಪ್ಟನ್ ಅಮರೀಂದರ್ ಸಿಂಗ್ "ನಾನು ಭಾರತೀಯ ಜನತಾ ಪಕ್ಷ (ಬಿಜೆಪಿ) ಗೆ ಸೇರ್ಪಡೆಯಾಗುವುದಿಲ್ಲ," ಎಂದು ಸ್ಪಷ್ಟನೆ ನೀಡಿದ್ದಾರೆ.
ಈ ಬಗ್ಗೆ ಮಾಧ್ಯಮವೊಂದರ ಜೊತೆ ಸಂದರ್ಶನದಲ್ಲಿ ಮಾತನಾಡಿದ ಅಮರೀಂದರ್ ಸಿಂಗ್, "ಈವರೆಗೂ ನಾನು ಕಾಂಗ್ರೆಸ್ ಆಗಿಯೇ ಇದ್ದೇನೆ. ಆದರೆ ನಾನು ಕಾಂಗ್ರೆಸ್ ಆಗಿಯೇ ಉಳಿಯಲಾರೆ. ಆದರೆ ನಾನು ಬಿಜೆಪಿಗೂ ಕೂಡಾ ಸೇರ್ಪಡೆಯಾಗುವುದಿಲ್ಲ. ನನ್ನನ್ನು ಈ ರೀತಿ ನಡೆಸಿಕೊಳ್ಳಲು ಇನ್ನು ಆಗದು," ತಿಳಿಸಿದ್ದಾರೆ.
ಅಮಿತ್ ಶಾ ಭೇಟಿಯಾದ ಅಮರಿಂದರ್ ಸಿಂಗ್
ಪಶ್ಚಿಮ ಬಂಗಾಳದಲ್ಲಿ ತಾನು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಹಲವಾರು ಶಾಸಕರು, ಸಚಿವರುಗಳು ತನ್ನ ನಾಯಕತ್ವದ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಂತೆ ಪಂಜಾಬ್ ರಾಜ್ಯದ ಮುಖ್ಯಮಂತ್ರಿ ಸ್ಥಾನಕ್ಕೆ ಅಮರೀಂದರ್ ಸಿಂಗ್ ರಾಜೀನಾಮೆಯನ್ನು ಈ ತಿಂಗಳ ಆರಂಭದಲ್ಲಿ ನೀಡಿದ್ದಾರೆ. ಈ ನಡುವೆ ಅಮರೀಂದರ್ ಸಿಂಗ್ ನವದೆಹಲಿಗೆ ಪ್ರಯಾಣ ಮಾಡಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಜೆ ಪಿ ನಡ್ಡಾ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾರನ್ನು ಭೇಟಿಯಾಗಲು ದೆಹಲಿಗೆ ಅಮರೀಂದರ್ ಸಿಂಗ್ ತೆರಳುತ್ತಿದ್ದಾರೆ ಎಂದು ವರದಿಯಾಗಿತ್ತು. ಈ ಬೆನ್ನಲ್ಲೇ ಕೇಂದ್ರ ಗೃಹ ಸಚಿವ ಅಮಿತ್ ಶಾರನ್ನು ಅಮರೀಂದರ್ ಸಿಂಗ್ ಭೇಟಿಯಾಗಿದ್ದಾರೆ. ಈ ಹಿನ್ನೆಲೆ ಅಮರೀಂದರ್ ಸಿಂಗ್ ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಎಂಬ ಸುದ್ದಿಗಳು ಹರಡಿದವು.
ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ರನ್ನು ಭೇಟಿಯಾದ ಅಮರೀಂದರ್
ಬುಧವಾರ ಕೇಂದ್ರ ಗೃಹ ಸಚಿವ ಅಮಿತ್ ಶಾರನ್ನು ಭೇಟಿಯಾಗಿದ್ದ, ಪಂಜಾಬ್ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಗುರುವಾರ ರಾಷ್ಟ್ರೀಯ ಭದ್ರತಾ ಸಲಹೆಗಾರ (ಎನ್ಎಸ್ಎ) ಅಜಿತ್ ದೋವಲ್ ಅವರನ್ನು ದೆಹಲಿಯ ಅವರ ನಿವಾಸದಲ್ಲಿ ಭೇಟಿ ಮಾಡಿದ್ದಾರೆ. ಇದೀಗ ರಾಜಕೀಯ ವಲಯದಲ್ಲಿ ಸಂಚಲನಕ್ಕೆ ಕಾರಣವಾಗಿದೆ. ಈ ಹಿಂದೆ ಬಿಜೆಪಿ ನಾಯಕರನ್ನು ಭೇಟಿಯಾಗುವ ಯಾವುದೇ ಉದ್ದೇಶವಿಲ್ಲ ಎಂದು ಹೇಳಿದ್ದರೂ ಅಮಿತ್ ಶಾರನ್ನು ಅಮರೀಂದರ್ ಸಿಂಗ್ ಭೇಟಿಯಾಗಿದ್ದಾರೆ. ಈ ನಡುವೆ ಅಜಿತ್ ದೋವಲ್ರನ್ನು ಕೂಡಾ ಇಂದು ಭೇಟಿಯಾಗಿರುವುದು ಕೂತೂಹಲಕ್ಕೆ ಕಾರಣವಾಗಿದೆ. ಆದರೆ ಪಾಕಿಸ್ತಾನದ ಗಡಿ ಭಾಗದಲ್ಲಿರುವ ಪಂಜಾಬ್ಗೆ ಬೆದರಿಕೆಗಳ ಬಗ್ಗೆ ಮಾತುಕತೆ ನಡೆಸಿರಬಹುದು ಎಂದು ಹೇಳಲಾಗುತ್ತಿದೆ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿ ಚರಣ್ಜೀತ್ ಸಿಂಗ್ ಚನ್ನಿ ನೇಮಕವಾದ ಸಂದರ್ಭದಲ್ಲೂ ರಾಜ್ಯದ ಗಡಿಯ ಬಗ್ಗೆ ಅಧಿಕ ಮುತುವರ್ಜಿ ವಹಿಸುವಂತೆ ಅಮರೀಂದರ್ ಸಲಹೆಯನ್ನು ನೀಡಿದ್ದರು.
ಪಂಜಾಬ್ ಮಾಜಿ ಸಿಎಂ ಅಮರೀಂದರ್ ಇಂದು ಶಾ, ನಡ್ಡಾರನ್ನು ಭೇಟಿ ಸಾಧ್ಯತೆ: ಬಿಜೆಪಿ ಸೇರ್ಪಡೆ?
ಕೃಷಿ ಕಾಯ್ದೆಯ ಬಗ್ಗೆ ಚರ್ಚೆ
ಇನ್ನು ಅಮಿತ್ ಶಾರನ್ನು ಭೇಟಿಯಾದ ಬಳಿಕ ಈ ಬಗ್ಗೆ ಅಮರೀಂದರ್ ಸಿಂಗ್ ಟ್ವೀಟ್ ಕೂಡಾ ಮಾಡಿದ್ದರು. "ದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾರನ್ನು ನಾನು ಭೇಟಿಯಾದೆ. ಕೃಷಿ ಕಾಯ್ದೆಯ ಬಗ್ಗೆ ರೈತರಲ್ಲಿ ಇರುವ ಆತಂಕಗಳ ಬಗ್ಗೆ ಮಾತನಾಡಿದೆ. ಈ ಸಮಸ್ಯೆಯನ್ನು ಶೀಘ್ರವೇ ಬಗೆಹರಿಸುವಂತೆ ನಾನು ಒತ್ತಾಯ ಮಾಡಿದ್ದೇನೆ. ಕನಿಷ್ಠ ಬೆಂಬಲ ಬೆಲೆಯ ಬಗ್ಗೆ ದೃಢಪಡಿಸಲು ತಿಳಿಸಿದೆ," ಎಂದು ಹೇಳಿದ್ದರು ರೈತರಿಲ್ಲದೆ ಆಹಾರವಿಲ್ಲ ಎಂದು ಹ್ಯಾಷ್ ಟ್ಯಾಗ್ ಅನ್ನೂ ಹಾಕಿದ್ದರು.
ಪಂಜಾಬ್ ರಾಜಕೀಯವು ಕಳೆದ ಹಲವು ದಿನಗಳಿಂದ ಭಾರೀ ಚರ್ಚೆಯ ವಿಚಾರವಾಗಿದೆ. ನವ್ಜೋತ್ ಸಿಂಗ್ ಸಿಧು ಕೂಡಾ ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ನಡುವೆ ಕಾಂಗ್ರೆಸ್ ಹೈಕಮಾಂಡ್ ವಿರುದ್ದ ಕಾಂಗ್ರೆಸ್ ನಾಯಕರು ವಾಗ್ದಾಳಿ ನಡೆಸುತ್ತಿದ್ದಾರೆ. ಇತ್ತ ಕೆಲವು ರಾಜ್ಯಗಳಲ್ಲಿ ಕಾಂಗ್ರೆಸ್ನಲ್ಲಿ ಬಿರುಕು ಕಾಣಿಸಿಕೊಳ್ಳುತ್ತಿದೆ. ವಿಧಾನಸಭೆ ಚುನಾವಣೆ ಇನ್ನು ಕೆಲವೇ ತಿಂಗಳುಗಳಲ್ಲಿ ಇರುವ ಕಾರಣದಿಂದಾಗಿ ಈ ರಾಜಕೀಯದಲ್ಲಿ ಗೊಂದಲ ಪ್ರಮುಖ ಪಾತ್ರವನ್ನು ವಹಿಸಿದೆ.
(ಒನ್ಇಂಡಿಯಾ ಸುದ್ದಿ)