ದೆಹಲಿಗೆ ಬಂದಾಗಲೆಲ್ಲಾ ಸೋನಿಯಾರನ್ನು ಭೇಟಿಯಾಗೋ ಅಗತ್ಯವೇನಿದೆ?: ಮಮತಾ
ನವದೆಹಲಿ, ನವೆಂಬರ್ 25: ''ದೆಹಲಿಗೆ ಬಂದಾಗಲೆಲ್ಲಾ ಗಾಂಧಿ ಕುಟುಂಬವನ್ನು ಭೇಟಿಯಾಗುವ ಅಗತ್ಯವೇನಿದೆ?'' ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡುವ ಯೋಜನೆ ಕುರಿತು ಮಮತಾ ಬ್ಯಾನರ್ಜಿ ನೀಡಿರುವ ಉತ್ತರ ಉಭಯ ನಾಯಕರು ಮತ್ತು ಪಕ್ಷಗಳ ನಡುವಿನ ಸಂಬಂಧದ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕುತ್ತಿದೆ.
ತ್ರಿಪುರಾ ಹಿಂಸಾಚಾರ, ಬಿಎಸ್ಎಫ್ ಬಗ್ಗೆ ಮೋದಿಯೊಂದಿಗೆ ಚರ್ಚಿಸಿದ ಮಮತಾ ಬ್ಯಾನರ್ಜಿ
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ತಮ್ಮ ಪಕ್ಷದ ತೃಣಮೂಲ ಕಾಂಗ್ರೆಸ್ನ ವಿಸ್ತರಣೆ ಕಾರ್ಯಕ್ರಮವನ್ನು ಮುಂದುವರಿಸುವುದಾಗಿ ಬುಧವಾರ ಸೂಚಿಸಿದ್ದಾರೆ. ಈ ನಿಟ್ಟಿನಲ್ಲಿ ಅವರು ಪ್ರಧಾನಿ ನರೇಂದ್ರ ಮೋದಿಯವರ ಸಂಸದೀಯ ಕ್ಷೇತ್ರವಾದ ವಾರಣಾಸಿ ಮತ್ತು ಮಹಾರಾಷ್ಟ್ರಕ್ಕೂ ಭೇಟಿ ನೀಡಲಿದ್ದಾರೆ ಎಂದು ಅವರು ಹೇಳಿದ್ದಾರೆ.
ನಾಲ್ಕು ದಿನಗಳ ಭೇಟಿಗಾಗಿ ದೆಹಲಿ ಪ್ರವಾಸ ಕೈಗೊಂಡಿದ್ದ ಮಮತಾ ಬ್ಯಾನರ್ಜಿ ಅವರು ಗುರುವಾರ ಪಶ್ಚಿಮ ಬಂಗಾಳಕ್ಕೆ ಹಿಂದಿರುಗುತ್ತಿದ್ದಾರೆ. ಅದಕ್ಕೂ ಮುನ್ನ ಮೊದಲು ಕಾಂಗ್ರೆಸ್ ನಾಯಕಿಯನ್ನು ಭೇಟಿ ಮಾಡುವಿರಾ ಎಂಬ ಮಾಧ್ಯಮದ ಪ್ರಶ್ನೆಗೆ ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ ನಂತರ, ಮಮತಾ ಬ್ಯಾನರ್ಜಿ ಅವರನ್ನು ಸೋನಿಯಾ ಗಾಂಧಿ ಭೇಟಿಯ ಕುರಿತು ಕೇಳಿದಾಗ, ಅಂತಹ ಯಾವುದೇ ಯೋಜನೆ ಇಲ್ಲ, ಅವರು ಪಂಜಾಬ್ ಚುನಾವಣೆಯಲ್ಲಿ ಬ್ಯುಸಿಯಾಗಿದ್ದಾರೆ ಎಂದು ಹೇಳಿದರು. ಅಲ್ಲದೇ "ನಾವು ಪ್ರತಿ ಬಾರಿ ಸೋನಿಯಾರನ್ನು ಏಕೆ ಭೇಟಿಯಾಗಬೇಕು? ಇದು ಸಾಂವಿಧಾನಿಕವಾಗಿ ಕಡ್ಡಾಯವಲ್ಲ " ಎಂದಿದ್ದಾರೆ.
ಮಮತಾ ಬ್ಯಾನರ್ಜಿ ಮತ್ತು ಸೋನಿಯಾ ಗಾಂಧಿ ನಡುವಿನ ಸಂಬಂಧವು ತುಂಬಾ ಉತ್ತಮವಾಗಿದೆ ಎಂದು ಪರಿಗಣಿಸಲಾಗಿದೆ, ಆದಾಗ್ಯೂ ಪಶ್ಚಿಮ ಬಂಗಾಳದಲ್ಲಿ ಎರಡು ಪಕ್ಷಗಳ ನಡುವಿನ ಸಂಬಂಧವು ನಿರಂತರವಾಗಿ ಹದಗೆಟ್ಟಿದೆ. ಕಾಂಗ್ರೆಸ್ ನಾಯಕ ಕೀರ್ತಿ ಆಜಾದ್ ಮತ್ತು ಮಾಜಿ ಕಾಂಗ್ರೆಸ್ ಹರಿಯಾಣ ಘಟಕದ ಅಧ್ಯಕ್ಷ ಅಶೋಕ್ ತನ್ವಾರ್ ಮಂಗಳವಾರ ತೃಣಮೂಲ ಕಾಂಗ್ರೆಸ್ಗೆ ಸೇರ್ಪಡೆಗೊಂಡಿದ್ದಾರೆ ಎಂಬುವುದು ನೆನಪಿಸಿಕೊಳ್ಳಬೇಕಾದ ವಿಚಾರ ಎಂದು ಹೇಳಿದ್ದಾರೆ.
ಡಿಸೆಂಬರ್ 1ರಂದು ಮುಂಬೈಗೆ ತೆರಳುತ್ತಿದ್ದು, ಅಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹಾಗೂ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ಶರದ್ ಪವಾರ್ ಅವರನ್ನು ಭೇಟಿಯಾಗುತ್ತೇನೆ ಎಂದರು.
''ಕೇಂದ್ರದಿಂದ ಬಾಕಿ ಉಳಿದಿರುವ 96,655 ಕೋಟಿ ರೂ. ಕೇಂದ್ರವು ಅವರಿಗೆ ಬಾಕಿಯನ್ನು ನೀಡದಿದ್ದಾಗ ರಾಜ್ಯಗಳು ತಮ್ಮ ಕೆಲಸವನ್ನು ಹೇಗೆ ಮಾಡುತ್ತವೆ? ನಮ್ಮ ಸಿದ್ಧಾಂತಗಳು ವಿಭಿನ್ನವಾಗಿರಬಹುದು ಆದರೆ ಇದರಿಂದಾಗಿ ಕೇಂದ್ರ-ರಾಜ್ಯ ಸಂಬಂಧಗಳಿಗೆ ಧಕ್ಕೆಯಾಗಬಾರದು. ರಾಜ್ಯಗಳು ಅಭಿವೃದ್ಧಿಯಾದರೆ ಕೇಂದ್ರವೂ ಅಭಿವೃದ್ಧಿಯಾಗುತ್ತದೆ ಎಂದಿದ್ದಾರೆ.
ತ್ರಿಪುರಾದಲ್ಲಿ ನಡೆದ ಹಿಂಸಾಚಾರದ ವಿಷಯವನ್ನೂ ದೀದಿ ಮೋದಿ ಜೊತೆ ಪ್ರಸ್ತಾಪಿಸಿದರು, ಇದರಲ್ಲಿ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಭಾರತೀಯ ಜನತಾ ಪಕ್ಷದ (ಬಿಜೆಪಿ) ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಇಬ್ಬರು ಹಿರಿಯ ಕಾಂಗ್ರೆಸ್ ನಾಯಕರು ತೃಣಮೂಲ ಕಾಂಗ್ರೆಸ್ಗೆ ಸೇರ್ಪಡೆಯಾದ ಒಂದು ದಿನದ ನಂತರ, ಮಮತಾ ಬ್ಯಾನರ್ಜಿ ಅವರು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡುವ ಯಾವುದೇ ಯೋಜನೆ ಹೊಂದಿಲ್ಲ ಎಂದು ಹೇಳಿದ್ದಾರೆ.
ಉತ್ತರ ಪ್ರದೇಶದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯ ಬಗ್ಗೆ ಕೇಳಿದಾಗ, ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷಕ್ಕೆ ಸಹಾಯ ಮಾಡಲು ತಮ್ಮ ಪಕ್ಷ ಸಿದ್ಧವಿದೆ ಎಂದು ಹೇಳಿದರು.
"ಉತ್ತರ ಪ್ರದೇಶದಲ್ಲಿ ಬಿಜೆಪಿಯನ್ನು ಸೋಲಿಸಲು ತೃಣಮೂಲ ಕಾಂಗ್ರೆಸ್ ಸಹಾಯ ಬೇಕಾದರೆ, ನಾವು ಹೋಗುತ್ತೇವೆ. ಅಖಿಲೇಶ್ ಯಾದವ್ ನಮ್ಮ ಸಹಾಯ ಬಯಸಿದರೆ ನಾವು ಸಹಾಯ ಮಾಡುತ್ತೇವೆ" ಎಂದು ಅವರು ಹೇಳಿದರು.
ಗೋವಾದಲ್ಲಿ ತಮ್ಮ ಪಕ್ಷ ಆರಂಭವಾಗಿದ್ದು, ಕೆಲವು ರಾಜ್ಯಗಳಲ್ಲೂ ಪ್ರಾದೇಶಿಕ ಪಕ್ಷಗಳು ತೀವ್ರ ಹೋರಾಟ ನಡೆಸಬೇಕು ಎಂದು ಮುಖ್ಯಮಂತ್ರಿ ಹೇಳಿದರು. "ನಾವು ಗೋವಾ ಮತ್ತು ಹರಿಯಾಣದಲ್ಲಿ ಪ್ರಾರಂಭಿಸಿದ್ದೇವೆ.
ಆದರೆ ಪ್ರಾದೇಶಿಕ ಪಕ್ಷಗಳು ಕೆಲವು ಸ್ಥಳಗಳಲ್ಲಿ ಹೋರಾಡಬೇಕು ಎಂದು ನಾನು ನಂಬುತ್ತೇನೆ. ನಾವು ಅವರ ಪರವಾಗಿ ಪ್ರಚಾರ ಮಾಡಬೇಕೆಂದು ಅವರು ಬಯಸಿದರೆ, ನಾವು ಮಾಡುತ್ತೇವೆ ಎಂದೂ ಉಚ್ಛರಿಸಿದ್ದಾರೆ.
ಜುಲೈನಲ್ಲಿ ದೆಹಲಿಗೆ ಭೇಟಿ ನೀಡಿದ್ದ ಮಮತಾ ಅವರು ಕಾಂಗ್ರೆಸ್ನ ವರಿಷ್ಠರನ್ನು ಭೇಟಿಯಾಗಿ ತೆರಳಿದ್ದರು. ಸೋಮವಾರ ದೆಹಲಿಗೆ ಆಗಮಿಸಿದ್ದ ಮಮತಾ ಮಂಗಳವಾರ ಕಾಂಗ್ರೆಸ್ ನಾಯಕರನ್ನು ಭೇಟಿಯಾಗುವ ಸಾಧ್ಯತೆಗಳಿದ್ದವು ಆದರೆ ಮಂಗಳವಾರ ಬುಧವಾರ ಎರಡೂ ದಿನವೂ ಭೇಟಿಯಾಗಿಲ್ಲ.
Recommended Video