ದೆಹಲಿ ಗಲಭೆ: ಜೆಎನ್ಯು ಕಾರ್ಯಕರ್ತ ಉಮರ್ ಖಾಲೀದ್ ಬಂಧನ
ನವದೆಹಲಿ, ಸೆಪ್ಟೆಂಬರ್ 14: ಈಶಾನ್ಯ ದೆಹಲಿಯಲ್ಲಿ ನಡೆದಿದ್ದ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಜವಹರಲಾಲ್ ನೆಹರೂ ವಿಶ್ವವಿದ್ಯಾಲಯ ವಿದ್ಯಾರ್ಥಿ ಒಕ್ಕೂಟದ (ಜೆಎನ್ಯುಎಸ್ಯು) ಮಾಜಿ ಸದಸ್ಯ ಉಮರ್ ಖಾಲೀದ್ ಅವರನ್ನು ದೆಹಲಿ ಪೊಲೀಸರು ಭಾನುವಾರ ಬಂಧಿಸಿದ್ದಾರೆ.
ಉಮರ್ ಖಾಲೀದ್ ಅವರನ್ನು ಕಾನೂನು ವಿರೋಧಿ ಚಟುವಟಿಕೆಗಳ (ತಡೆ) ಕಾಯ್ದೆಯ (ಯುಎಪಿಎ) ಸಂಬಂಧಿತ ಸೆಕ್ಷನ್ಗಳಲ್ಲಿ ಬಂಧಿಸಲಾಗಿದೆ. ವಿಶೇಷ ಘಟಕವು ದೆಹಲಿ ಹಿಂಸಾಚಾರದ ಕುರಿತು ವಿಚಾರಣೆಗಾಗಿ ಖಾಲೀದ್ ಅವರನ್ನು ಕರೆಸಿತ್ತು. ಕೆಲವು ಗಂಟೆಗಳ ವಿಚಾರಣೆ ಬಳಿಕ ಪೊಲೀಸರು ಅವರನ್ನು ಬಂಧಿಸಿದ್ದಾರೆ.
ಹಿಂಸಾಚಾರಕ್ಕೂ ಕೆಲವು ದಿನಗಳ ಮುನ್ನ ಶಾಹೀನ್ ಬಾಗ್ನಲ್ಲಿ ನಡೆದ ಸಭೆಯಲ್ಲಿ ಖಾಲೀದ್ ಸೈಫಿ ಹಾಗೂ ಉಮರ್ ಖಾಲೀದ್ ಪ್ರಚೋದನಾಕಾರಿ ಭಾಷಣ ಮಾಡಿದ್ದರು ಎಂಬ ಆರೋಪದಡಿ ಅವರನ್ನು ಪೊಲೀಸರು ಪ್ರಶ್ನಿಸಿದ್ದಾರೆ.
ಯುನೈಟೆಡ್ ಆಗೈನ್ಸ್ಟ್ ಹೇಟ್ ಎಂಬ ಸಂಘಟನೆಯ ಸಹ ಸಂಸ್ಥಾಪಕನಾದ ಖಾಲೀದ್ ಸೈಫಿಯನ್ನು ಜೂನ್ನಲ್ಲಿ ಬಂಧಿಸಲಾಗಿದ್ದು. ಉಮರ್ ಖಾಲೀದ್ ಈ ಸಂಘಟನೆಯ ಸದಸ್ಯರೂ ಹೌದು. ಉಮರ್ ಖಾಲೀದ್ ಹಾಗೂ ಹಿಂಸಾಚಾರ ಪ್ರಕರಣದಲ್ಲಿ ಈಗಾಗಲೇ ಬಂಧಿತನಾಗಿರುವ ಎಎಪಿಯ ಅಮಾನತುಗೊಂಡ ಕೌನ್ಸಿಲರ್ ತಾಹೀರ್ ಹುಸೇನ್ ನಡುವೆ ಮಹತ್ವದ ಸಭೆಗಳನ್ನು ಸೈಫಿ ಆಯೋಜಿಸುತ್ತಿದ್ದ ಎನ್ನಲಾಗಿದೆ.