ಗಾಂಧಿ-ನೆಹರು ಇಲ್ಲದೆಯೂ ಕಾಂಗ್ರೆಸ್ ಉಳಿಯುತ್ತದೆ, ಆದರೆ: ಅಯ್ಯರ್
ನವದೆಹಲಿ, ಜೂನ್ 24: "ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನದಲ್ಲಿ ನೆಹರೂ-ಗಾಂಧಿ ಕುಟುಂಬಸ್ಥರಲ್ಲದವರಿದ್ದರೂ ಪಕ್ಷ ಉಳಿಯುತ್ತದೆ. ಆದರೆ ಅವರು ಅಧ್ಯಕ್ಷ ಸ್ಥಾನದಲ್ಲಿಲ್ಲದಿದ್ದರೂ ಪಕ್ಷದ ಜವಾಬ್ದಾರಿ ಹೊರಬೇಕು. ಇಲ್ಲವೆಂದರೆ ಪಕ್ಷದಲ್ಲಿ ಆಂತರಿಕ ಭಿನ್ನಾಭಿಪ್ರಾಯಗಳು ಹೆಚ್ಚಾಗುತ್ತವೆ" ಎಂದು ಕಾಂಗ್ರೆಸ್ ಮುಖಂಡ ಮಣಿ ಶಂಕರ್ ಅಯ್ಯರ್ ಹೇಳಿದ್ದಾರೆ.
ರಾಹುಲ್ ಗಾಂಧಿ ಅವರು ಪಕ್ಷಾಧ್ಯಕ್ಷರಾಗಿ ಮುಂದುವರಿಯಲು ಸಿದ್ಧರಿಲ್ಲದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, "ರಾಹುಲ್ ಗಾಂಧಿ ಅವರೇ ಪಕ್ಷಾಧ್ಯಕ್ಷರಾಗಿ ಮುಂದುವರಿದರೆ ಬಹಳ ಒಳ್ಳೆಯದು. ಆದರೆ ಅದೇ ಸಮಯದಲ್ಲಿ ನಾನು ಅವರ ವೈಯಕ್ತಿಕ ನಿರ್ಧಾರಗಳಿಗೂ ಮನ್ನಣೆ ನೀಡುತ್ತೇನೆ" ಎಂದು ಅಯ್ಯರ್ ಹೇಳಿದರು.
ರಿಪೋರ್ಟರ್ ಮೇಲೆ ಹಲ್ಲೆ ಮಾಡುವುದಾಗಿ ಮಣಿ ಶಂಕರ್ ಅಯ್ಯರ್ ಬೆದರಿಕೆ
"ನನಗೆ ಗೊತ್ತು ಗಾಂಧಿ ಅಥವಾ ನೆಹರು ಕುಟುಂಬದವರು ಅಧ್ಯಕ್ಷ ಸ್ಥಾನದಲ್ಲಿ ಇರದಿದ್ದರೂ ಕಾಂಗ್ರೆಸ್ ಉಳಿಯುತ್ತದೆ. ಆದರೆ ಪಕ್ಷದ ಭಿನ್ನಾಭಿಪ್ರಾಯ ಸರಿಪಡಿಸಲು ಗಾಂಧಿ-ನೆಹರು ಕುಟುಂಬಸ್ಥರು ಸದಾ ಸಹಕಾರ ನೀಡಬೇಕಾಗುತ್ತದೆ" ಎಂದು ಅವರು ಹೇಳಿದರು.
"ಕಾಂಗ್ರೆಸ್ ಅನ್ನು ಗಾಂಧಿ ಮುಕ್ತ ಮಾಡುವುದು ಮತ್ತು ಭಾರತವನ್ನು ಕಾಂಗ್ರೆಸ್ ಮುಕ್ತ ಮಾಡುವುದು ಬಿಜೆಪಿ ಗುರಿ. ಅದು ಹೆಣೆದ ಬಲೆಗೆ ನಾವು ಬೀಳಬಾರದು" ಎಂದು ಅವರು ಹೇಳಿದರು.
'ಐ ಲವ್ ಪಾಕಿಸ್ತಾನ್' ಎಂದ ಮಣಿಶಂಕರ್ ಅಯ್ಯರ್
ಲೋಕಸಭೆ ಚುನಾವಣೆಯ ಫಲಿತಾಂಶದ ನಂತರ ಕಾಂಗ್ರೆಸ್ ನ ಕಳಪೆ ಪ್ರದರ್ಶನದಿಂದಾಗಿ ಮುಜುಗರ ಅನುಭವಿಸಿದ ರಾಹುಲ್ ಗಾಂಧಿ, ಪಕ್ಷಾಧ್ಯಕ್ಷ ಸ್ಥಾನದಿಂದ ಕೆಳಗಿಳಿಯುವ ನಿರ್ಧಾರ ಮಾಡಿದ್ದರು. ಆದರೆ ಅವರನ್ನು ಮನವೊಲಿಸುವ ಪ್ರಯತ್ನ ಇನ್ನೂ ನಡೆಯುತ್ತಿದ್ದು, ರಾಹುಲ್ ಗಾಂಧಿ ಅವರೇ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಯಬೇಕೆಂದು ಒಕ್ಕೊರಲಿನಿಂದ ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ಧ್ವನಿ ಮೂಡಿಸಿದ್ದಾರೆ.