ಮೋದಿಯನ್ನು ಹಾಡಿ ಹೊಗಳಿದ ನೊಬೆಲ್ ಪುರಸ್ಕೃತ ಅಭಿಜಿತ್
ನವದೆಹಲಿ, ಅಕ್ಟೋಬರ್ 22: ಪ್ರಧಾನಿ ನರೇಂದ್ರ ಮೋದಿಯನ್ನು ಮಂಗಳವಾರ ಭೇಟಿಯಾದ ನೊಬೆಲ್ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಭಿಜಿತ್ ಬ್ಯಾನರ್ಜಿ, ತಮ್ಮ ಮಾತುಕತೆ ಜೋಕ್ನಿಂದ ಆರಂಭವಾಗಿತ್ತು, ಅದೂ ನಿಮ್ಮ (ಮಾಧ್ಯಮಗಳು) ಕುರಿತಾಗಿತ್ತು ಎಂದರು.
'ಮೋದಿ ವಿರೋಧಿ ಸಂಗತಿಗಳಲ್ಲಿ ಮಾಧ್ಯಮಗಳು ನಿಮ್ಮನ್ನು ಸಿಲುಕಿಸಲು ಹೇಗೆ ಪ್ರಯತ್ನಿಸುತ್ತಿವೆ' ಎಂದು ಪ್ರಧಾನಿ ಮೋದಿ ಆರಂಭದಲ್ಲಿಯೇ ತಮಾಷೆ ಮಾಡಿದ್ದರು ಎಂದು ಅಭಿಜಿತ್ ಬ್ಯಾನರ್ಜಿ ಹೇಳಿದರು.
ಅಭಿಜಿತ್ ಬ್ಯಾನರ್ಜಿ ಸಾಧನೆಗಳ ಬಗ್ಗೆ ಭಾರತಕ್ಕೆ ಹೆಮ್ಮೆಯಿದೆ: ಮೋದಿ
ಪ್ರಧಾನಿ ಮೋದಿ ಭೇಟಿಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಬ್ಯಾನರ್ಜಿ, ಅವರು (ಮೋದಿ) ಟಿವಿ ವೀಕ್ಷಿಸುತ್ತಾರೆ, ಅವರು ನಿಮ್ಮನ್ನೆಲ್ಲ ನೋಡುತ್ತಿದ್ದಾರೆ, ನೀವು ಏನು ಮಾಡಲು ಪ್ರಯತ್ನಿಸುತ್ತಿದ್ದೀರಿ ಎನ್ನುವುದು ಅವರಿಗೆ ಗೊತ್ತಿದೆ' ಎಂದರು.
ಮೋದಿ ಅವರು ತಮಗೆ ಎಚ್ಚರಿಕೆ ನೀಡಿರುವುದರಿಂದ ವಿವಾದಾತ್ಮಕ ಹೇಳಿಕೆಗಳ ಸುಳಿಯೊಳಗೆ ಬೀಳುವುದಿಲ್ಲ ಎಂದು ಹೇಳಿದರು. ಬಳಿಕ ತಮ್ಮ ಹಾಗೂ ಮೋದಿ ನಡುವೆ ನಡೆದ ಮಾತುಕತೆಗಳ ಕೆಲವು ಅಂಶಗಳನ್ನು ಹಂಚಿಕೊಂಡರು.
ನೀತಿಗಳ ಹಿಂದಿನ ಆಲೋಚನೆ ತಿಳಿಸಿದರು
ಪ್ರಧಾನಿ ಮೋದಿ ಅವರ ನಿಲುವುಗಳನ್ನು ಪ್ರಶಂಸಿಸಿದ ಮುಖರ್ಜಿ, ತಾವು ಭಾರತದ ಕುರಿತು ಯೋಚಿಸುವ ರೀತಿಯ ಕುರಿತು ಮಾತನಾಡಿದರು ಎಂದು ತಿಳಿಸಿದರು. 'ನನಗೆ ಸಾಕಷ್ಟು ಸಮಯ ನೀಡುವಷ್ಟು ಪ್ರಧಾನಿ ದಯಾಳುವಾಗಿದ್ದರು. ಭಾರತೆಡೆಗಿನ ತಮ್ಮ ಯೋಚನೆಯ ಬಗೆಯ ಕುರಿತು ತುಂಬಾ ಮಾತನಾಡಿದರು. ಅದು ಬಹಳ ವಿಶಿಷ್ಟವಾಗಿತ್ತು. ಏಕೆಂದರೆ ಕೆಲವರು ನೀತಿಗಳ ಬಗ್ಗೆ ಕೇಳುತ್ತಾರೆ, ಆದರೆ ಅವುಗಳ ಹಿಂದಿನ ಆಲೋಚನೆಗಳ ಬಗ್ಗೆ ಕೆಲವರು ಮಾತ್ರವೇ ಕೇಳುತ್ತಾರೆ ಎಂದರು.
ಆಡಳಿತದ ಕುರಿತು ಮೋದಿ ಮಾತು
ನಿರ್ದಿಷ್ಟವಾಗಿ ಆಡಳಿತವನ್ನು ಹೇಗೆ ನೋಡುತ್ತೇನೆ ಎಂಬ ಬಗ್ಗೆ ಅವರು ಮಾತನಾಡಿದರು. ನಮ್ಮ ಆಡಳಿತದ ಬಗ್ಗೆ ಜನರಲ್ಲಿ ಏಕೆ ಅಪನಂಬಿಕೆ ಇರಬಹುದು ಮತ್ತು ಹೇಗೆ ಅದು ಆಡಳಿತ ಪ್ರಕ್ರಿಯೆಯ ಮೇಲೆ ಉನ್ನತ ನಿಯಂತ್ರಣವನ್ನು ಹೊಂದಿರಬಹುದು ಎಂದು ವಿವರಿಸಿದರು. ಜನರ ಅಭಿಪ್ರಾಯಗಳನ್ನು ಅರ್ಥಮಾಡಿಕೊಂಡು ಆಡಳಿತವನ್ನು ಹೆಚ್ಚು ಜವಾಬ್ದಾರಿಯುತವನ್ನಾಗಿ ಮಾಡಲು ಹೇಗೆ ಪ್ರಯತ್ನಿಸುತ್ತಿದ್ದೇನೆ ಎಂಬುದನ್ನು ಚೆನ್ನಾಗಿ ತಿಳಿಸಿದರು. ಪ್ರಧಾನಿ ಅವರಿಗೆ ಧನ್ಯವಾದಗಳು. ಅದು ಬಹಳ ವಿಶಿಷ್ಟ ಅನುಭವವಾಗಿತ್ತು ಎಂದು ಹೇಳಿದರು.
ಭಾರತ ಅರ್ಥವ್ಯವಸ್ಥೆ ವೇಗವಾಗಿ ಕುಸಿಯುತ್ತಿದೆ: ನೊಬೆಲ್ ವಿಜೇತ ಅಭಿಜಿತ್
ಆರ್ಥಿಕ ಬಿಕ್ಕಟ್ಟು ಚಿಂತಾಜನಕ
ಆರ್ಥಿಕ ಬಿಕ್ಕಟ್ಟಿನ ಕುರಿತು ಮಾತನಾಡಿದ ಅವರು, 'ಆರ್ಥಿಕ ಸಂಕಷ್ಟ ಚಿಂತಾಜನಕವಾಗಿದೆ ಮತ್ತು ನಡುಕ ಹುಟ್ಟಿಸುವಂತಿದೆ. ಅದರ ಬಗ್ಗೆ ನಾವು ಯೋಚಿಸಲೇಬೇಕಾಗಿದೆ. ನಾವು ಕೆಲವು ಮಹತ್ವದ ಹಾಗೂ ಆಕ್ರಮಣಕಾರಿ ಬದಲಾವಣೆಗಳನ್ನು ಮಾಡಬೇಕಿದೆ' ಎಂದು ಅಭಿಪ್ರಾಯಪಟ್ಟರು.
ಸಿವಿಸಿ ನಿಯಂತ್ರಣ ಸಲ್ಲ
ಕೇಂದ್ರ ಜಾಗೃತಾ ಆಯೋಗವನ್ನು (ಸಿವಿಸಿ) ಕಟುವಾಗಿ ಟೀಕಿಸಿದ ಬ್ಯಾನರ್ಜಿ, ಸಾರ್ವಜನಿಕ ವಲಯದ ಬ್ಯಾಂಕುಗಳಲ್ಲಿನ ಸರ್ಕಾರದ ಷೇರುಗಳನ್ನು ಶೇ 50ಕ್ಕಿಂತಲೂ ಕಡಿಮೆ ಮಾಡಬೇಕು. ಇದರಿಂದ ಸಿವಿಸಿಯು ಬ್ಯಾಂಕುಗಳನ್ನು ನಿಯಂತ್ರಿಸಲು ಮತ್ತು ಅದರಲ್ಲಿ ಹಸ್ತಕ್ಷೇಪ ಮಾಡಲು ಸಾಧ್ಯವಾಗುವುದಿಲ್ಲ ಎಂದರು.
ತಪಾಸಣೆಗಳು ಮತ್ತು ಪರಿಶೀಲನೆ ಅಗತ್ಯ ನಿಜ. ಆದರೆ ಸಿವಿಸಿ ಸಾರ್ವಜನಿಕ ವಲಯದ ಬ್ಯಾಂಕುಗಳನ್ನು ಹಾಳು ಮಾಡಲು ಕಾರಣವಾಗುತ್ತಿವೆ. ಜತೆಗೆ ಅವು ಕುಸಿಯುವವರೆಗೂ ಸಾಲ ನೀಡುವಂತೆ ಮಾಡುತ್ತವೆ ಎಂದು ಆರೋಪಿಸಿದರು.