ಭಾರತದಲ್ಲಿ ಕೊವಿಡ್-19 ಚಿಕಿತ್ಸೆಗೆ ಆಕ್ಸಿಜನ್ ಕೊರತೆ ಇದೆಯೇ?
ನವದೆಹಲಿ, ಸಪ್ಟೆಂಬರ್,15: ಭಾರತದಲ್ಲಿ ಕೊರೊನಾವೈರಸ್ ಸೋಂಕು ಹರಡುವಿಕೆ ನಡುವೆ ಆಕ್ಸಿಜನ್ ಪೂರೈಕೆಯಲ್ಲಿ ಯಾವುದೇ ಕೊರತೆಯಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ರಾಜೇಶ್ ಭೂಷಣ್ ತಿಳಿಸಿದ್ದಾರೆ.
ಗಂಭೀರ ಸ್ಥಿತಿಯಲ್ಲಿರುವ ಕೊರೊನಾವೈರಸ್ ಸೋಂಕಿತರಿಗೆ ಚಿಕಿತ್ಸೆ ನೀಡುವುದಕ್ಕೆ ಆಮ್ಲಜನಕವನ್ನು ಬಳಸಿಕೊಳ್ಳುವುದು ಕೂಡಾ ಒಂದು ವಿಧಾನವಾಗಿದೆ. ಈ ಹಿನ್ನೆಲೆ ದೇಶದಲ್ಲಿ ಪ್ರತಿನಿತ್ಯ 6,900 ಮೆಟ್ರಿಕ್ ಟನ್ ಗಿಂತ ಹೆಚ್ಚು ಆಮ್ಲಜನಕವನ್ನು ಪೂರೈಕೆ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಭಾರತದಲ್ಲಿ ಕೊವಿಡ್-19 ಸೋಂಕಿತರಿಗೆ ಆಕ್ಸಿಜನ್ ಕೊರತೆ ಆತಂಕ
ಮಂಗಳವಾರ ಬೆಳಗ್ಗೆ ದೊರೆತ ಅಂಕಿ-ಅಂಶಗಳ ಪ್ರಕಾರ, ಒಟ್ಟು ಶೇ.3.69ರಷ್ಟು ಕೊರೊನಾವೈರಸ್ ಸೋಂಕಿತರು ಆಕ್ಸಿಜನ್ ಸಪೋರ್ಟ್ ನಿಂದ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಶೇ.2.17ರಷ್ಟು ಸೋಂಕಿತರು ಐಸಿಯುನಲ್ಲಿ ಆಮ್ಲಜನಕದ ಪೂರೈಕೆಯಿಂದ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಶೇ.0.36ರಷ್ಟು ಕೊವಿಡ್-19 ಸೋಂಕಿತರು ವೆಂಟಿಲೇಟರ್ ಮತ್ತು ಆಕ್ಸಿಜನ್ ಸಪೋರ್ಟ್ ನಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ರಾಜೇಶ್ ಭೂಷಣ್ ತಿಳಿಸಿದ್ದಾರೆ.
ದೇಶಾದ್ಯಂತ ನಿತ್ಯ 5000 ಮೆಟ್ರಿಕ್ ಟನ್ ಆಕ್ಸಿಜನ್ ಬಳಕೆ
ಭಾರತದಲ್ಲಿ ಪ್ರತಿನಿತ್ಯ ವಿವಿಧ ವಲಯಗಳಲ್ಲಿ 5000 ಮೆಟ್ರಿಕ್ ಟನ್ ಆಮ್ಲಜನಕವನ್ನು ಬಳಸಿಕೊಳ್ಳಲಾಗುತ್ತಿದೆ. ಕೊರೊನಾವೈರಸ್ ಸೋಂಕಿತರ ಚಿಕಿತ್ಸೆ ಮತ್ತು ಇತರೆ ರೋಗಿಗಳಿಗೆ ಚಿಕಿತ್ಸೆ ನೀಡುವುದಕ್ಕಾಗಿ ಪ್ರತಿನಿತ್ಯ 2800 ಮೆಟ್ರಿಕ್ ಟನ್ ಆಕ್ಸಿಜನ್ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಉಳಿದಂತೆ ವಾಣಿಜ್ಯ ಉದ್ದೇಶಗಳಿಗಾಗಿ 2200 ಮೆಟ್ರಿಕ್ ಟನ್ ಆಮ್ಲಜನಕವನ್ನು ಪೂರೈಕೆ ಮಾಡಲಾಗುತ್ತಿದೆ. 1900 ಮೆಟ್ರಿಕ್ ಟನ್ ಆಮ್ಲಜನಕವನ್ನು ಹೆಚ್ಚುವರಿಯಾಗಿ ಪೂರೈಸಲಾಗುತ್ತಿದೆ ಎಂದು ರಾಜೇಶ್ ಭೂಷಣ್ ತಿಳಿಸಿದ್ದಾರೆ.
ಆಕ್ಸಿಜನ್ ಪೂರೈಕೆ ಕೊರತೆಯಿದ್ದಲ್ಲಿ ಕೇಂದ್ರಕ್ಕೆ ಮಾಹಿತಿ ನೀಡಿ
ಕೊರೊನಾವೈರಸ್ ಸೋಂಕಿತರಿಗೆ ಚಿಕಿತ್ಸೆ ನೀಡುವುದಕ್ಕೆ ಆಮ್ಲಜನಕದ ಕೊರತೆ ಕಂಡು ಬಂದಲ್ಲಿ ತಕ್ಷಣ ಕೇಂದ್ರ ಸರ್ಕಾರಕ್ಕೆ ಈ ಬಗ್ಗೆ ಮಾಹಿತಿ ನೀಡಿದೆ. ರಾಜ್ಯ ಸರ್ಕಾರಗಳು ಸಲ್ಲಿಸಿದ ಮನವಿ ಮೇರೆಗೆ ಆಮ್ಲಜನಕವನ್ನು ಪೂರೈಕೆ ಮಾಡಲಾಗುತ್ತದೆ. ಆಕ್ಸಿಜನ್ ಪೂರೈಕೆಯಲ್ಲಿ ಯಾವುದೇ ಕೊರತೆಯನ್ನು ಎದುರಿಸಲಾಗುತ್ತಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ರಾಜೇಶ್ ಭೂಷಣ್ ಸ್ಪಷ್ಟಪಡಿಸಿದ್ದಾರೆ.
ಎಲ್ಲ ರಾಜ್ಯಗಳಲ್ಲೂ ಸಹಾಯವಾಣಿ ತೆರೆಯಲು ತೀರ್ಮಾನ
"ಕೊರೊನಾವೈರಸ್ ಸೋಂಕಿತರಿಗೆ ಚಿಕಿತ್ಸೆ ನೀಡಲು ಆಕ್ಸಿಜನ್ ಅಗತ್ಯವಾಗಿದೆ. ಈ ಹಿನ್ನೆಲೆ ಆಕ್ಸಿಜನ್ ಪೂರೈಕೆ ಮತ್ತು ಕೊರತೆ ಬಗ್ಗೆ ಅರಿತುಕೊಳ್ಳುವುದಕ್ಕೆ ಮತ್ತು ಮಾಹಿತಿ ಸಂಗ್ರಹಿಸುವುದಕ್ಕೆ ಪ್ರತಿಯೊಂದು ರಾಜ್ಯಗಳಲ್ಲೂ ಸಹಾಯವಾಣಿ ಕೇಂದ್ರಗಳನ್ನು ತೆರೆಯುವುದಕ್ಕೆ ತೀರ್ಮಾನಿಸಲಾಗಿದೆ. ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಆಮ್ಲಜನಕ ಉತ್ಪಾದನಾ ಕೇಂದ್ರಗಳ ಜೊತೆಗೆ ಪರಿಣಾಮಕಾರಿ ಸಹಕಾರವನ್ನು ನೀಡುವಂತೆ ಕೇಂದ್ರ ಸರ್ಕಾರವು ನಿರ್ದೇಶನ ನೀಡಿದೆ. ದಿನಕ್ಕೆ 6400 MT ಆಕ್ಸಿಜನ್ ಉತ್ಪಾದನೆ ಮಾಡುತ್ತಿದ್ದ ಕೇಂದ್ರಗಳಲ್ಲಿ ಹೆಚ್ಚುವರಿಯಾಗಿ 550 MT ಆಮ್ಲಜನಕವನ್ನು ಉತ್ಪಾದಿಸಿ ಪೂರೈಸುವಂತೆ ಸೂಚಿಸಲಾಗಿದೆ" ಎಂದು ಅವರು ತಿಳಿಸಿದ್ದಾರೆ.
Recommended Video
ಆಕ್ಸಿಜನ್ ಪೂರೈಕೆ ಅಭಾವವಾಗುತ್ತಿದೆ ಎಂದಿದ್ದ ವೈದ್ಯರು
"ಭಾರತದ ವಾಣಿಜ್ಯ ನಗರಿ ಎನಿಸಿರುವ ಮುಂಬೈನಲ್ಲೇ ಇರುವ ಪನ್ವೆಲ್ ಪ್ರದೇಶ ಸೇರಿದಂತೆ ಕೆಲವು ಪ್ರದೇಶಗಳಲ್ಲಿನ ಆಸ್ಪತ್ರೆಗಳಲ್ಲಿ ಆಮ್ಲಜನಕ ಕೊರತೆ ತೀವ್ರವಾಗಿದ್ದು, ಅದನ್ನು ಪತ್ತೆ ಮಾಡುವುದೇ ಕಷ್ಟಕರವಾಗುತ್ತಿದೆ ಎಂದು ನಿರಮಯಾ ಆಸ್ಪತ್ರೆ ವೈದ್ಯಕೀಯ ನಿರ್ದೇಶಕ ಡಾ. ಅಮಿತ್ ಥದಾನಿ ತಿಳಿಸಿದ್ದಾರೆ. ಆಮ್ಲಜನಕ ಭರ್ತಿ ಮಾಡುವ ಕೇಂದ್ರಗಳಲ್ಲಿ ಉತ್ಪಾದಕರಿಂದಲೇ ಆಕ್ಸಿಜನ್ ಪಡೆದುಕೊಳ್ಳಲಾಗುತ್ತಿಲ್ಲ. ಇದರಿಂದ ಸರಬರಾಜು ಪ್ರಮಾಣದಲ್ಲಿ ಅತ್ಯಂತ ಇಳಿಕೆ ಕಂಡು ಬಂದಿದೆ. ಒಂದು ವೇಳೆ 50 ಆಕ್ಸಿಜನ್ ಸಿಲಿಂಡರ್ ಕೇಳಿದರೆ ನಮಗೆ 5 ರಿಂದ 7 ಆಕ್ಸಿಜನ್ ಸಿಲಿಂಡರ್ ಗಳನ್ನು ಪೂರೈಕೆ ಮಾಡಲಾಗುತ್ತಿದೆ" ಎಂದು ನಿರಮಯಾ ಆಸ್ಪತ್ರೆ ವೈದ್ಯಕೀಯ ನಿರ್ದೇಶಕ ಡಾ. ಅಮಿತ್ ಥದಾನಿ ಹೇಳಿದ್ದರು.