ಮುಂಗಾರು ಅಧಿವೇಶನದಲ್ಲಿ ಪ್ರಶ್ನಾವಳಿ ಅವಧಿಗಿಲ್ಲ ಅವಕಾಶ
ನವದೆಹಲಿ, ಸಪ್ಟೆಂಬರ್.02: ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಹಿನ್ನೆಲೆ ಈ ಬಾರಿ ನಡೆಯುವ ಮುಂಗಾರು ಸಂಸತ್ ಅಧಿವೇಶನದಲ್ಲಿ ಪ್ರಶ್ನಾವಳಿ ಅವಧಿ ಇರುವುದಿಲ್ಲ ಎಂದು ರಾಜ್ಯಸಭಾ ಕಾರ್ಯದರ್ಶಿ ಅಧಿಸೂಚನೆ ಹೊರಡಿಸಿದ್ದಾರೆ.
Recommended Video
ಸಪ್ಟೆಂಬರ್.14ರಿಂದ ಸಂಸತ್ ಉಭಯ ಕಲಾಪಗಳ ಅಧಿವೇಶನ ಆರಂಭವಾಗಲಿದ್ದು, ಆಕ್ಟೋಬರ್.01ರವರೆಗೂ ನಡೆಯಲಿದೆ. ಈ ಬಾರಿ ಖಾಸಗಿ ವ್ಯಕ್ತಿಗಳಿಗೂ ಕಲಾಪದಲ್ಲಿ ಪ್ರವೇಶ ಇರುವುದಿಲ್ಲ. ಶೂನ್ಯ ವೇಳೆ ಚರ್ಚೆ ಸೇರಿದಂತೆ ಉಳಿದ ಕಾರ್ಯಕಲಾಪಗಳು ನಿಗದಿಯಂತೆ ನಡೆಯಲಿವೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಸೆಪ್ಟೆಂಬರ್ 14 ರಿಂದ ಸಂಸತ್ ಮುಂಗಾರು ಅಧಿವೇಶನ
ಸಂಸತ್ ಅಧಿವೇಶನಕ್ಕೆ ಹಾಜರಾಗುವ ಪ್ರತಿಯೊಬ್ಬ ಸದಸ್ಯರು ಕೂಡಾ ಕೊರೊನಾವೈರಸ್ ಮಾರ್ಗಸೂಚಿಯ ಶಿಷ್ಟಾಚಾರವನ್ನು ಪಾಲನೆ ಮಾಡಬೇಕು. ಮುಂಗಾರು ಅಧಿವೇಶನಕ್ಕೆ ಹಾಜರಾಗುವ 72 ಗಂಟೆಗಳಿಗೂ ಮೊದಲು ಸದಸ್ಯರು ಕೊವಿಡ್-19 ಸೋಂಕಿನ ತಪಾಸಣೆಗೆ ಒಳಗಾಗಿರಬೇಕು.
ಉಭಯ ಸದನಗಳ ಕಲಾಪದ ಸಮಯ:
ನವದೆಹಲಿಯಲ್ಲಿ ಸಪ್ಟೆಂಬರ್.14ರಿಂದ ಸಂಸತ್ ಉಭಯ ಕಲಾಪಗಳು ಆರಂಭವಾಗಲಿವೆ. ಮೊದಲ ದಿನ ಲೋಕಸಭೆ ಕಲಾಪ ಬೆಳಗ್ಗೆ 1 ರಿಂದ 3 ಗಂಟೆವರೆಗೂ ನಡೆಯಲಿದ್ದು, ರಾಜ್ಯಸಭಾ ಕಲಾಪ ಮಧ್ಯಾಹ್ನ 3 ರಿಂದ 7 ಗಂಟೆವರೆಗೂ ನಡೆಯಲಿದೆ. ಸಪ್ಟೆಂಬರ್.14ರ ನಂತರದಲ್ಲಿ ರಾಜ್ಯಸಭಾ ಕಲಾಪವು ಬೆಳಗ್ಗೆ 1 ರಿಂದ 3 ಗಂಟೆವರಗೂ ಹಾಗೂ ಲೋಕಸಭಾ ಕಲಾಪವು ಮಧ್ಯಾಹ್ನ 3 ರಿಂದ 7 ಗಂಟೆವರೆಗೂ ನಡೆಸಲು ಸಮಯ ನಿಗದಿಗೊಳಿಸಲಾಗಿದೆ.
ಪ್ರತಿನಿತ್ಯ ಕೊರೊನಾವೈರಸ್ ಸೋಂಕಿನ ನಿಯಂತ್ರಣ ಕ್ರಮಗಳೊಂದಿಗೆ ನಾಲ್ಕು ಗಂಟೆಗಳ ಕಾಲ ಸಂಸತ್ ಕಲಾಪ ನಡೆಸಲಾಗುತ್ತದೆ. ಸಾಂಕ್ರಾಮಿಕ ಪಿಡುಗಿನ ಹಿನ್ನೆಲೆ ಅಗತ್ಯವಾಗಿರುವ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಆರೋಗ್ಯ ಸಚಿವಾಲಯವು ಹೊರಡಿಸಿರುವ ಮಾರ್ಗಸೂಚಿಗಳೊಂದಿಗೆ ಯಾವ ರೀತಿ ಶಿಸ್ತುಕ್ರಮಗಳನ್ನು ಪಾಲನೆ ಮಾಡಬೇಕು ಎನ್ನುವುದರ ಕುರಿತು ಹಿರಿಯ ಅಧಿಕಾರಿಗಳಿಗೆ ಲೋಕಸಭೆ ಸ್ಪೀಕರ್ ಮತ್ತು ರಾಜ್ಯಸಭೆ ಚೇರ್ಮನ್ ನಿರ್ದೇಶನ ನೀಡಿದ್ದಾರೆ.