ಕೊರೊನಾ ಏರಿಕೆ; ರೈಲು ಸಂಚಾರದ ಕುರಿತು ರೈಲ್ವೆ ಇಲಾಖೆ ಸ್ಪಷ್ಟನೆ
ನವದೆಹಲಿ, ಏಪ್ರಿಲ್ 9: ದೇಶದಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ಏರಿಕೆಯಾಗುತ್ತಿವೆ. ಈ ಬೆನ್ನಲ್ಲೇ ರೈಲು ಸಂಚಾರ ಸ್ಥಗಿತಗೊಳ್ಳಬಹುದಾದ ಆತಂಕ ಎದುರಾಗಿದ್ದು, ಇದಕ್ಕೆ ರೈಲ್ವೆ ಇಲಾಖೆ ಸ್ಪಷ್ಟನೆ ನೀಡಿದೆ. ರೈಲು ಸೇವೆಯನ್ನು ಸ್ಥಗಿತಗೊಳಿಸುವ ಯಾವುದೇ ಯೋಜನೆ ಸದ್ಯಕ್ಕೆ ಇಲಾಖೆಗೆ ಇಲ್ಲ. ಬೇಡಿಕೆಗೆ ತಕ್ಕಂತೆ ರೈಲು ಸೇವೆ ಒದಗಿಸಲಾಗುತ್ತದೆ ಎಂದು ಭರವಸೆ ನೀಡಿದೆ.
ರೈಲು ಸೇವೆ ಸ್ಥಗಿತಗೊಳಿಸಿ ಅಥವಾ ರೈಲುಗಳ ಸಂಖ್ಯೆಯನ್ನು ತಗ್ಗಿಸಿ ಪ್ರಯಾಣಿಕರಿಗೆ ಸಮಸ್ಯೆ ಮಾಡುವುದಿಲ್ಲ ಎಂದು ರೈಲ್ವೆ ಮಂಡಳಿ ಅಧ್ಯಕ್ಷ ಸುನೀತ್ ಶರ್ಮಾ ತಿಳಿಸಿದ್ದಾರೆ. ಎಷ್ಟು ಸಾಧ್ಯವೋ ಅಷ್ಟು ಹೆಚ್ಚು ರೈಲುಗಳನ್ನು ಒದಗಿಸಲಾಗುತ್ತದೆ. ಯಾರೂ ಆತಂಕ ಪಡುವ ಅಗತ್ಯವಿಲ್ಲ. ಬೇಸಿಗೆ ಸಮಯದಲ್ಲಿ ರೈಲುಗಳಲ್ಲಿ ಇಷ್ಟು ದಟ್ಟಣೆ ಇರುವುದು ಸಹಜ. ಈ ದಟ್ಟಣೆಯನ್ನು ಕಡಿಮೆ ಮಾಡುವಂತೆ ಈಗಾಗಲೇ ಎಲ್ಲಾ ಸ್ಥಳಗಳಲ್ಲಿ ಘೋಷಣೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ದೇಶದಲ್ಲಿ ಕೊರೊನಾ ಪ್ರಕರಣಗಳು ಏರಿಕೆಯಾಗುತ್ತಿರುವ ಬೆನ್ನಲ್ಲೇ ಲಾಕ್ಡೌನ್ ಸಾಧ್ಯತೆ ಭೀತಿಯಿಂದ ವಲಸೆ ಕಾರ್ಮಿಕರನ್ನೊಳಗೊಂಡು ಹಲವರು ತಮ್ಮ ಗ್ರಾಮಗಳಿಗೆ ಮರಳುತ್ತಿದ್ದಾರೆ. ಹೀಗಾಗಿ ದೇಶಾದ್ಯಂತ ಕಳೆದ ಕೆಲವು ದಿನಗಳಿಂದ ರೈಲುಗಳಲ್ಲಿ ಏಕಾಏಕಿ ಪ್ರಯಾಣಿಕರ ಸಂಖ್ಯೆ ಏರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಇಲಾಖೆ ಸ್ಪಷ್ಟನೆ ನೀಡಿದೆ.
ಲಾಕ್ಡೌನ್ ಭೀತಿ; ಮತ್ತೆ ಊರಿನತ್ತ ಗಂಟುಮೂಟೆ ಕಟ್ಟುತ್ತಿರುವ ಕಾರ್ಮಿಕರು
ರೈಲುಗಳ ಸಂಖ್ಯೆಯನ್ನು ಕಡಿಮೆ ಮಾಡುವುದಿಲ್ಲ. ಬೇಡಿಕೆಗೆ ತಕ್ಕಂತೆ ರೈಲುಗಳನ್ನು ಒದಗಿಸಲಾಗುವುದು ಎಂದು ಭರವಸೆ ನೀಡುವುದರೊಂದಿಗೆ ರೈಲು ಪ್ರಯಾಣಕ್ಕೆ ಕೋವಿಡ್ ನೆಗೆಟಿವ್ ವರದಿಯ ಅವಶ್ಯಕತೆ ಇಲ್ಲ ಎಂದು ತಿಳಿಸಿದರು.