ಪಶ್ಚಿಮ ಬಂಗಾಳದಲ್ಲಿ ದೊಡ್ಡ ಚುನಾವಣಾ ಸಮಾವೇಶ ನಡೆಸುವುದಿಲ್ಲವೆಂದ ಬಿಜೆಪಿ
ನವದೆಹಲಿ, ಏಪ್ರಿಲ್ 19: ಕೊರೊನಾ ಸೋಂಕಿನ ಪ್ರಕರಣಗಳು ಮಿತಿ ಮೀರುತ್ತಿರುವ ಕಾರಣ ಪಶ್ಚಿಮ ಬಂಗಾಳದಲ್ಲಿ ಪ್ರಧಾನಿ ಮೋದಿ ಅವರನ್ನೊಳಗೊಂಡಂತೆ ಪಕ್ಷದ ಯಾವುದೇ ಸದಸ್ಯರು ದೊಡ್ಡ ಮಟ್ಟದಲ್ಲಿ ಚುನಾವಣಾ ಸಮಾವೇಶ, ಸಾರ್ವಜನಿಕ ಸಭೆಯನ್ನು ಹಮ್ಮಿಕೊಳ್ಳದಿರಲು ತೀರ್ಮಾನಿಸಿರುವುದಾಗಿ ಸೋಮವಾರ ಬಿಜೆಪಿ ಘೋಷಿಸಿದೆ.
ಪಶ್ಚಿಮ ಬಂಗಾಳದಲ್ಲಿ ಏರುತ್ತಿರುವ ಕೊರೊನಾ ಪ್ರಕರಣಗಳ ನಡುವೆಯೂ ಬಿಜೆಪಿ ಸಮಾವೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರಿದ್ದರ ಕುರಿತು ವಿರೋಧಗಳು ಕೇಳಿಬಂದಿದ್ದು, ನಂತರ ಪಕ್ಷ ಈ ನಿರ್ಧಾರ ಕೈಗೊಂಡಿರುವುದಾಗಿ ತಿಳಿದುಬಂದಿದೆ.
ಸದ್ಯಕ್ಕೆ ಕೊರೊನಾ ನಿಯಂತ್ರಣವೇ ತುರ್ತಾಗಿರುವ ಕಾರಣ ಇಂಥ ಬಿಕ್ಕಟ್ಟಿನ ಸಂದರ್ಭದಲ್ಲಿ ತಮ್ಮ ನಾಯಕರ ಮಾತುಗಳನ್ನು ಜನರಿಗೆ ತಲುಪಿಸಲು ಡಿಜಿಟಲ್ ಮಾಧ್ಯಮವನ್ನು ಬಳಸಿಕೊಳ್ಳುವುದಾಗಿ ಬಿಜೆಪಿ ಐಟಿ ವಿಭಾಗದ ಅಧ್ಯಕ್ಷ ಅಮಿತ್ ಮಾಲ್ವಿಯಾ ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಹಾಗೂ ಇತರೆ ಪ್ರಮುಖ ನಾಯಕರ ಸಮಾವೇಶದಲ್ಲಿ ಗರಿಷ್ಠ 500 ಮಂದಿ ಸೇರಲಷ್ಟೆ ಅವಕಾಶವಿದೆ. ಜೊತೆಗೆ ಸಣ್ಣ ಮಟ್ಟದಲ್ಲಿ ಪ್ರಚಾರ ಕಾರ್ಯ ಹಮ್ಮಿಕೊಳ್ಳುವರು ಎಂದು ಪಕ್ಷ ಹೇಳಿಕೆ ಬಿಡುಗಡೆ ಮಾಡಿದೆ.
ಈಗಾಗಲೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ರಾಜ್ಯದಲ್ಲಿ ಚುನಾವಣಾ ಸಮಾವೇಶವನ್ನು ರದ್ದುಗೊಳಿಸಿದ್ದಾರೆ. ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಹಾಗೂ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕೂಡ ಕೋಲ್ಕತ್ತಾದಲ್ಲಿ ಸಣ್ಣ ಮಟ್ಟದಲ್ಲಷ್ಟೇ ಪ್ರಚಾರ ನಡೆಸುವುದಾಗಿ ಘೋಷಿಸಿದ್ದಾರೆ.
ಹೆಚ್ಚು ಲಸಿಕೆ, ಔಷಧಿಗಳಿಗೆ ಮೋದಿ ಬಳಿ ಮಮತಾ ಬ್ಯಾನರ್ಜಿ ಮನವಿ
ಇದೀಗ, ತೆರೆದ ಜಾಗದಲ್ಲಿ ಬಿಜೆಪಿ ಪ್ರಚಾರ ಕಾರ್ಯ ಹಮ್ಮಿಕೊಳ್ಳಲಿದ್ದು, ಕೊರೊನಾ ಮಾರ್ಗಸೂಚಿಯನ್ವಯ ಸಭೆ ನಡೆಸಲಾಗುತ್ತದೆ. ರಾಜ್ಯದಲ್ಲಿ ಆರು ಲಕ್ಷ ಮಾಸ್ಕ್ ಹಾಗೂ ಸ್ಯಾನಿಟೈಸರ್ಗಳನ್ನು ವಿತರಣೆ ಮಾಡಲಾಗುತ್ತದೆ ಎಂದು ತಿಳಿಸಿದೆ.
ಮೋದಿ ಅವರ ಆಡಳಿತದಲ್ಲಿ ಕೊರೊನಾ ಮೊದಲ ಅಲೆಯಿಂದ ದೇಶ ಹೊರಬಂದಿತ್ತು. ಈ ಎರಡನೇ ಅಲೆಯಲ್ಲಿಯೂ ಸವಾಲನ್ನು ಎದುರಿಸಲು ಸರ್ಕಾರ ಸಿದ್ಧವಿದೆ ಎಂದು ಮಾಲ್ವಿಯಾ ಹೇಳಿದ್ದಾರೆ.