ಮೋದಿ ಅಲೆ ಮಾಧ್ಯಮದ ಸೃಷ್ಟಿ : ಸಿಂಗ್ ಉವಾಚ
ಗೌಹಾತಿ, ಏ. 24 : "ದೇಶದಲ್ಲಿ ಮೋದಿ ಅಲೆ ಇದೆ ಎಂದು ನನಗೆ ಅನಿಸುತ್ತಿಲ್ಲ. ಇದೆಲ್ಲ ಮಾಧ್ಯಮದ ಸೃಷ್ಟಿ. ಮೋದಿ ಅಲೆಯಿಂದ ದೇಶವೇನು ಕೊಚ್ಚಿ ಹೋಗುತ್ತಿಲ್ಲ" ಎಂದು ಹತ್ತು ವರ್ಷ ಪ್ರಧಾನಿಯಾಗಿ ದೇಶ ಆಳಿದ ನಂತರ ತೆರೆಮರೆಗೆ ಸರಿಯುತ್ತಿರುವ ಡಾ. ಮನಮೋಹನ ಸಿಂಗ್ ಅವರು, ಮತದಾನ ಮಾಡಿದ ನಂತರ ಪ್ರತಿಕ್ರಿಯಿಸಿದ್ದಾರೆ.
ದೇಶಾದ್ಯಂತ ಲೋಕಸಭೆ ಚುನಾವಣೆಯ ಪ್ರಚಾರ, ಹಲವಾರು ರಾಜ್ಯಗಳಲ್ಲಿ ಮತದಾನ ನಡೆಯುತ್ತಿದ್ದರೂ ಒಂದೇ ಒಂದು ಪ್ರಚಾರ ಸಭೆಗಳಲ್ಲಿ ಪಾಲ್ಗೊಳ್ಳದ, ಕಾಂಗ್ರೆಸ್ಸಿಗೆ ಒಂದೇ ಒಂದು ಮತ ನೀಡಿ ಎಂದು ಕೇಳದ ಪ್ರಧಾನಿ ಡಾ. ಮನಮೋಹನ ಸಿಂಗ್ ಅವರು, ಮತದಾನ ನಡೆಸಿದ ನಂತರ ಮೊದಲ ಬಾರಿ ಮೋದಿ ಅಲೆಯ ಬಗ್ಗೆ ಮಾತನಾಡಿದ್ದಾರೆ. [ಜನಪ್ರವಾಹದ ನಡುವೆ ಮೋದಿ ನಾಮಪತ್ರ ಸಲ್ಲಿಕೆ]
ತಮ್ಮ ಪತ್ನಿ ಗುರುಶರಣ್ ಸಿಂಗ್ ಜೊತೆ ದಿಸ್ಪುರ ಸರಕಾರಿ ಮಾಧ್ಯಮಿಕ ಶಾಲೆಯಲ್ಲಿ ಮತದಾನ ಮಾಡಿದ ನಂತರ ಸಿಂಗ್ ಅವರು ಪತ್ರಕರ್ತರೊಡನೆ ಕೆಲಸಮಯ ಹರಟಿದರು. ಪ್ರಶ್ನೆಯೊಂದಕ್ಕೆ, "ದೇಶದಲ್ಲಿ ಕಾಂಗ್ರೆಸ್ ತನ್ನ ನೆಲೆ ಕಳೆದುಕೊಳ್ಳುತ್ತಿದೆ ಎಂದು ನನಗೆ ಅನಿಸುತ್ತಿಲ್ಲ. ಮೇ 16ರಂದು ಫಲಿತಾಂಶ ಬರುವವರೆಗೆ ಕಾದುನೋಡಿ. ಕಾಂಗ್ರೆಸ್ ಖಂಡಿತ ಬಹುಮತ ಗಳಿಸುತ್ತದೆ" ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
1991ರಿಂದ ರಾಜ್ಯಸಭೆಯಲ್ಲಿ ಆಸ್ಸಾಂ ರಾಜ್ಯವನ್ನು ಡಾ. ಮನಮೋಹನ ಸಿಂಗ್ ಅವರು ಪ್ರತಿನಿಧಿಸುತ್ತಿದ್ದಾರೆ. ಮಾಜಿ ಮುಖ್ಯಮಂತ್ರಿ ದಿ. ಹಿತೇಶ್ವರ್ ಸೈಕಿಯಾ ಅವರ ಪತ್ನಿ ಹೆಮೋಪ್ರವಾ ಸೈಕಿಯಾ ಅವರಿಗೆ ಸೇರಿದ ಸರುಮೊಟೋರಿಯಾ ಪ್ರದೇಶದಲ್ಲಿರುವ ಅಪಾರ್ಟ್ ಮೆಂಟ್ ನಲ್ಲಿ ಸಿಂಗ್ ಅವರು ಬಾಡಿಗೆಗಿದ್ದಾರೆ ಎಂದು ದಾಖಲೆಯಲ್ಲಿ ತೋರಿಸಲಾಗಿದೆ.
ದೆಹಲಿಯಿಂದ ತಮ್ಮ ಪತ್ನಿಯ ಜೊತೆಗೆ ಐಎಎಫ್ ನ ವಿಶೇಷ ವಿಮಾನದಲ್ಲಿ ಗೌಹಾತಿಯ ಲೋಕಪ್ರಿಯ ಗೋಪಿನಾಥ್ ಬೊರ್ಡೊಲೋಯ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದ ಅವರು, ಐಎಎಫ್ ನ ಹೆಲಿಕಾಪ್ಟರ್ ಮುಖಾಂತರ ಖಾನಾಪರಕ್ಕೆ ಬಂದಿಳಿದರು. ಮುಖ್ಯಮಂತ್ರಿ ತರುಣ್ ಗೊಗೊಯ್ ಅವರು ಸಿಂಗ್ ದಂಪತಿಗಳನ್ನು ಬರಮಾಡಿಕೊಂಡರು.
ದೇಶದ ಎಲ್ಲ ನಾಗರಿಕರು ಈ ಮಹಾ ಚುನಾವಣೆಯಲ್ಲಿ ತಪ್ಪದೆ ಮತ ಚಲಾಯಿಸಬೇಕೆಂದು ಡಾ. ಮನಮೋಹನ ಸಿಂಗ್ ಅವರು ಆಗ್ರಹಿಸಿದ್ದಾರೆ. (ಪಿಟಿಐ)