ಕೊರೊನಾ ಲಸಿಕೆ ಪಡೆಯುವವರಿಗೆ ಯಾವುದೇ ವಿಮೆ ನೀಡುವುದಿಲ್ಲ; ಚೌಬೆ
ನವದೆಹಲಿ, ಫೆಬ್ರುವರಿ 09: ಕೊರೊನಾ ಲಸಿಕೆ ಪಡೆದುಕೊಂಡವರಲ್ಲಿ ಯಾವುದೇ ಆರೋಗ್ಯ ಸಮಸ್ಯೆ ಉಂಟಾದರೆ ಅದಕ್ಕೆ ವಿಮೆ ಪರಿಹಾರ ನೀಡಲು ಸಾಧ್ಯವಿಲ್ಲ ಎಂದು ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ರಾಜ್ಯ ಸಚಿವ ಅಶ್ವಿನಿ ಕುಮಾರ್ ಚೌಬೆ ಸ್ಪಷ್ಟನೆ ನೀಡಿದ್ದಾರೆ.
ಮಂಗಳವಾರ ರಾಜ್ಯ ಸಭೆಯಲ್ಲಿ ಈ ಕುರಿತು ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, "ಕೊರೊನಾ ಲಸಿಕೆಯಿಂದ ಅಡ್ಡ ಪರಿಣಾಮವಾದರೆ ಅಥವಾ ಆರೋಗ್ಯ ಸಮಸ್ಯೆ ಕಾಣಿಸಿಕೊಂಡರೆ ಅದಕ್ಕೆ ವಿಮೆ ನೀಡಲಾಗದು. ಕೊರೊನಾ ಲಸಿಕೆ ಪಡೆಯುವುದು ಸ್ವಯಂಪ್ರೇರಿತವಾಗಿರುವ ಕಾರಣ ವಿಮೆ ಸೌಲಭ್ಯ ನೀಡಲಾಗುವುದಿಲ್ಲ" ಎಂದಿದ್ದಾರೆ.
"ಕೊರೊನಾ ಲಸಿಕಾ ಅಭಿಯಾನಕ್ಕೆ ಪಿಎಂ ಪರಿಹಾರ ನಿಧಿ ಬಳಕೆ"
ಕೊರೊನಾ ಲಸಿಕೆ ಪಡೆದ ನಂತರ ವ್ಯಕ್ತಿಯನ್ನು ನಿಗಾ ಘಟಕದಲ್ಲಿ ಮೂವತ್ತು ನಿಮಿಷಗಳವರೆಗೆ ಇರಿಸಲಾಗುತ್ತದೆ. ಅನಾಫಿಲಾಕ್ಸಿಸ್ ಕಿಟ್ ಅನ್ನು ಪ್ರತಿ ಕೊರೊನಾ ಲಸಿಕಾ ಕೇಂದ್ರದಲ್ಲಿ ನೀಡಲಾಗಿದೆ. ಲಸಿಕೆ ಪಡೆದ ನಂತರ ಅಡ್ಡಪರಿಣಾಮ ಕಾಣಿಸಿಕೊಂಡರೆ ಉಚಿತ ಚಿಕಿತ್ಸೆ ನೀಡಲಾಗುತ್ತದೆ ಎಂದು ಹೇಳಿದ್ದಾರೆ.
ಭಾರತದಲ್ಲಿ ಕೋವ್ಯಾಕ್ಸಿನ್ ಹಾಗೂ ಕೋವಿಶೀಲ್ಡ್ ಲಸಿಕೆ ಪಡೆದವರಲ್ಲಿ ಅಡ್ಡ ಪರಿಣಾಮ ಕಾಣಿಸಿಕೊಂಡಿಲ್ಲ. ಕಾಣಿಸಿಕೊಂಡರೂ ಅಷ್ಟು ಗಂಭೀರವಾಗಿಲ್ಲ. ಫೆಬ್ರುವರಿ 4ರವರೆಗೂ 81 ಮಂದಿಯಲ್ಲಿ ಅಡ್ಡಪರಿಣಾಮ ಕಂಡುಬಂದಿದ್ದು, ಅದರ ಪ್ರಮಾಣ 0.096% ಇದೆ. ಕೋವಿಶೀಲ್ಡ್ ಲಸಿಕೆ ಪಡೆದವವರಲ್ಲಿ ಒಟ್ಟಾರೆ 8,402 ಅಡ್ಡಪರಿಣಾಮ ಪ್ರಕರಣಗಳು ಕಂಡುಬಂದಿದ್ದು, ಪ್ರಮಾಣವು 0.192% ಇದೆ ಅಷ್ಟೆ ಎಂದು ವಿವರಿಸಿದ್ದಾರೆ.