'ಕೋವಿಡ್ ಲಾಕ್ಡೌನ್ನಿಂದ ಮಕ್ಕಳ ಮೇಲಿನ ದೌರ್ಜನ್ಯ ಹೆಚ್ಚಳ ಬಗ್ಗೆ ಮಾಹಿತಿಯಿಲ್ಲ': ಕೇಂದ್ರ ಸಚಿವೆ
ನವದೆಹಲಿ, ಜು.22: ''ಕೋವಿಡ್ ಸಂಬಂಧಿತ ಲಾಕ್ಡೌನ್ ಸನ್ನಿವೇಶಗಳಿಂದಾಗಿ ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳ ಹೆಚ್ಚಳ ಬಗ್ಗೆ ಯಾವುದೇ ಮಾಹಿತಿ ಇಲ್ಲ,'' ಎಂದು ಕೇಂದ್ರ ಸರ್ಕಾರ ಗುರುವಾರ ತಿಳಿಸಿದೆ.
ಹಾಗೆಯೇ ''ಕೊರೊನಾವೈರಸ್ ಕಾರಣದಿಂದಾಗಿ ಉಂಟಾದ ಆರ್ಥಿಕ ಸಮಸ್ಯೆಯಿಂದಾಗಿ ದೇಶಾದ್ಯಂತ ಬಾಲ್ಯ ವಿವಾಹ ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆ ಯಾವುದೇ ಮಾಹಿತಿಯಿಲ್ಲ,'' ಎಂದು ಸರ್ಕಾರ ಹೇಳಿದೆ.
ರಾಜ್ಯದಲ್ಲಿ 48 ಮಕ್ಕಳನ್ನು ಅನಾಥರನ್ನಾಗಿಸಿದ ಕೋವಿಡ್: ಇಬ್ಬರೂ ಪೋಷಕರು ಸೋಂಕಿಗೆ ಬಲಿ
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ರಾಜ್ಯಸಭೆಯಲ್ಲಿ ಲಿಖಿತ ಉತ್ತರದಲ್ಲಿ ಈ ಹೇಳಿಕೆ ನೀಡಿದ್ದಾರೆ. ಸಾಂಕ್ರಾಮಿಕ ಸಮಯದಲ್ಲಿ ಮಕ್ಕಳ ಆರೈಕೆ ಮತ್ತು ರಕ್ಷಣೆಗಾಗಿ ರಾಜ್ಯ ಸರ್ಕಾರಗಳು ಮತ್ತು ಕೇಂದ್ರ ಪ್ರದೇಶದ ಆಡಳಿತಗಳಿಗೆ ತಮ್ಮ ಸಚಿವಾಲಯವು ಸಲಹೆಗಳು ಮತ್ತು ಮಾರ್ಗಸೂಚಿಗಳನ್ನು ನೀಡಿದೆ ಎಂದು ಕೂಡಾ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
"ನ್ಯಾಷನಲ್ ಕ್ರೈಮ್ ರೆಕಾರ್ಡ್ಸ್ ಬ್ಯೂರೋ (ಎನ್ಸಿಆರ್ಬಿ) ಒದಗಿಸಿದ ಮಾಹಿತಿಯ ಪ್ರಕಾರ, ಕೋವಿಡ್ ಸಂಬಂಧಿತ ಲಾಕ್ಡೌನ್ನಿಂದಾಗಿ ಮಕ್ಕಳ ಮೇಲಿನ ದೌರ್ಜನ್ಯ ಹೆಚ್ಚಾಗಿರುವ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಹಾಗೆಯೇ ಕೋವಿಡ್ನಿಂದ ಉಂಟಾದ ಆರ್ಥಿಕ ತೊಂದರೆಗಳಿಂದ ದೇಶದಲ್ಲಿ ಬಾಲ್ಯ ವಿವಾಹ ಪ್ರಕರಣಗಳ ಹೆಚ್ಚಳದ ಮಾಹಿತಿಯೂ ಇಲ್ಲ," ಎಂದಿದ್ದಾರೆ.
ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ಸಚಿವೆ ಇರಾನಿ, ಕಳೆದ ಐದು ವರ್ಷಗಳಲ್ಲಿ ಎನ್ಸಿಪಿಸಿಆರ್ ಸ್ವೀಕರಿಸಿದ ಮತ್ತು ವಿಲೇವಾರಿ ಮಾಡಿದ ದೂರುಗಳ ಬಗ್ಗೆ ಮಾಹಿತಿ ನೀಡಿದರು. ಅಂಕಿಅಂಶಗಳ ಪ್ರಕಾರ, 2016-17 ರಿಂದ 2020-21ರವರೆಗಿನ ಕಳೆದ ಐದು ವರ್ಷಗಳಲ್ಲಿ ಮಕ್ಕಳ ರಕ್ಷಣೆಗಾಗಿ ರಾಷ್ಟ್ರೀಯ ಆಯೋಗವು 50,857 ದೂರುಗಳನ್ನು ಸ್ವೀಕರಿಸಿದೆ. ಅದರಲ್ಲಿ 20,836 ವಿಲೇವಾರಿ ಮಾಡಲಾಗಿದೆ. ಮಧ್ಯಪ್ರದೇಶದಿಂದ 9,572, ಉತ್ತರ ಪ್ರದೇಶ 5,340, ಛತ್ತೀಸ್ಗಢದಿಂದ 4,685 ಮತ್ತು ಒಡಿಶಾ 4,276 ಕ್ಕೆ ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು ದಾಖಲಾಗಿದ್ದು, ಇದು ಅಧಿಕ ಪ್ರಕರಣಗಳು ಆಗಿದೆ.
ಹೆತ್ತವರನ್ನೇ ಕಿತ್ತುಕೊಂಡ ಕೊರೊನಾ, ಭಾರತದಲ್ಲಿ ಅನಾಥರಾದ ಮಕ್ಕಳೆಷ್ಟು?
ಈ ನಡುವೆ ಕೊರೊನಾ ಸೋಂಕು ಆರಂಭವಾದ 14 ತಿಂಗಳುಗಳಲ್ಲಿ 21 ದೇಶದಗಳಲ್ಲಿ ಸುಮಾರು 1.5 ಮಿಲಿಯನ್ ಮಕ್ಕಳು ಪೋಷಕರನ್ನು ಕಳೆದುಕೊಂಡಿದ್ದಾರೆ. ಈ ಪೈಕಿ 1,90,000 ಮಕ್ಕಳು ಭಾರತದಲ್ಲಿದ್ದಾರೆ ಎಂದು ಲ್ಯಾನ್ಸೆಟ್ ವರದಿ ಹೇಳಿದೆ. ಭಾರತದಲ್ಲಿ 2,898 ಮಕ್ಕಳು ತಮ್ಮ ಪಾಲನೆ ಮಾಡುತ್ತಿದ್ದ ಅಜ್ಜಿಯಂದಿರನ್ನು ಕಳೆದುಕೊಂಡಿದ್ದರೆ, 9 ಮಕ್ಕಳು ಅಜ್ಜಿ ಅಜ್ಜ ಇಬ್ಬರನ್ನೂ ಕಳೆದುಕೊಂಡಿದ್ದಾರೆ.
(ಒನ್ಇಂಡಿಯಾ ಸುದ್ದಿ)