"ನಟಿ ಖುಷ್ಬೂ ಸುಂದರ್ ರಾಜೀನಾಮೆಯಿಂದ ಕಾಂಗ್ರೆಸ್ ಗೆ ನಷ್ಟವಿಲ್ಲ"
ನವದೆಹಲಿ, ಅಕ್ಟೋಬರ್.12: ದಕ್ಷಿಣ ಭಾರತದ ಖ್ಯಾತನಟಿ ಖುಷ್ಬೂ ಸುಂದರ್ ಕಾಂಗ್ರೆಸ್ ಬಿಟ್ಟು ಹೋಗಿದ್ದು, ತಮಿಳುನಾಡಿನಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಯಾವುದೇ ರೀತಿ ಪರಿಣಾಮ ಬೀರುವುದಿಲ್ಲ ಎಂದು ಕಾಂಗ್ರೆಸ್ ಹೇಳಿದೆ.
ಕಾಂಗ್ರೆಸ್ ನಲ್ಲಿ ಕೆಳಮಟ್ಟದ ನಾಯಕರ ಮೇಲೆ ಮೇಲ್ಮಟ್ಟದಲ್ಲಿ ಕುಳಿತ ನಾಯಕರು ತುಳಿಯುತ್ತಿದ್ದು, ಹತ್ತಿಕ್ಕುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿರುವ ನಟಿ ಖುಷ್ಬೂ ಸುಂದರ್ ಅವರು ದಿಢೀರ್ ರಾಜಕೀಯ ಬೆಳಣಿಗೆಯಲ್ಲಿ ಪಕ್ಷವನ್ನು ತೊರೆದು ಹೋಗಿದ್ದಾರೆ.
ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಖ್ಯಾತನಟಿ ಖುಷ್ಬೂ
ಕಾಂಗ್ರೆಸ್ ಪಕ್ಷದಿಂದ ಖುಷ್ಬೂ ಸುಂದರ್ ಹೊರ ಹೋಗಿರುವುದರಿಂದ ಪಕ್ಷಕ್ಕೆ ಯಾವುದೇ ತೊಂದರೆ ಆಗುವುದಿಲ್ಲ. ತಮಿಳುನಾಡು ಚುನಾವಣೆಯಲ್ಲಿ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ತಮಿಳುನಾಡು ರಾಜ್ಯದ ಕಾಂಗ್ರೆಸ್ ಉಸ್ತುವಾರಿ ವಹಿಸಿಕೊಂಡಿರುವ ದಿನೇಶ್ ಗುಂಡೂರಾವ್ ಪಿಟಿಐಗೆ ಹೇಳಿದ್ದಾರೆ.
ಕಾಂಗ್ರೆಸ್ ನಲ್ಲಿ ಹತ್ತಿಕ್ಕುವ ಕೆಲಸ ನಡೆದಿಲ್ಲ:
ನಟಿ ಖುಷ್ಬೂ ಸುಂದರ್ ಆರೋಪಿಸುವಂತೆ ಕಾಂಗ್ರೆಸ್ ನಲ್ಲಿ ಯಾರನ್ನೂ ಹತ್ತಿಕ್ಕುವ ಮತ್ತು ತುಳಿಯುವ ಕೆಲಸ ಆಗುತ್ತಿಲ್ಲ. ಅದಾಗ್ಯೂ ನಡೆಯುತ್ತಿರುವ ಇತ್ತೀಚಿನ ರಾಜಕೀಯ ಬೆಳವಣಿಗೆ ಮುಂಬರುವ ತಮಿಳುನಾಡು ಚುನಾವಣೆ ಮೇಲೆ ಯಾವುದೇ ರೀತಿ ಪ್ರಭಾವ ಬೀರುವುದಿಲ್ಲ. ಅವರು ಖ್ಯಾತ ನಟಿ ಆಗಿರುವುದರಿಂದ ಈ ವಿಚಾರ ಸ್ವಲ್ಪ ದಿನಗಳವರೆಗೂ ಚರ್ಚೆಯಲ್ಲಿ ಇರುತ್ತದೆ. ಬಳಿಕ ಜನರು ಈ ವಿಚಾರವನ್ನು ಮರೆತು ಬಿಡುತ್ತಾರೆ ಎಂದು ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಬಿಜೆಪಿಗೆ ಸೇರ್ಪಡೆಯಾದ ನಟಿ ಖುಷ್ಬೂ ಸುಂದರ್:
ನವದೆಹಲಿಯ ಪಕ್ಷದ ಕಚೇರಿಯಲ್ಲಿ ಭಾರತೀಯ ಜನತಾ ಪಕ್ಷದ ಜನರಲ್ ಸೆಕ್ರೆಟರಿ ಸಿ.ಟಿ.ರವಿ ಮತ್ತು ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ ಸೇರಿದಂತೆ ಹಲವು ಕಾರ್ಯಕರ್ತರ ಸಮ್ಮುಖದಲ್ಲಿ ನಟಿ ಖುಷ್ಬೂ ಸುಂದರ್ ಅವರು ಪಕ್ಷಕ್ಕೆ ಸೇರ್ಪಡೆಯಾದರು. ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ ಕೆಲವೇ ಗಂಟೆಗಳಲ್ಲಿ ನಟಿ ಖುಷ್ಬೂ ಅವರು ಬಿಜೆಪಿಗೆ ಸೇರಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕಾರ್ಯವೈಖರಿಯನ್ನು ಹಾಡಿ ಹೊಗಳಿದ್ದಾರೆ. ಬಿಜೆಪಿಗೆ ಸೇರಿದ ನಂತರ ಮಾತನಾಡಿದ ಖುಷ್ಬೂ ಸುಂದರ್ ಅವರು, "ದೇಶವನ್ನು ಸರಿಯಾದ ದಿಕ್ಕಿನಲ್ಲಿ ನಡೆಸಲು ಪ್ರಧಾನಮಂತ್ರಿ ನರೇಂದ್ರ ಮೋದಿಯಂತಹ ನಾಯಕರು ಬೇಕು. ಈ ವಿಷಯವನ್ನು ನಾನು ಕಾಲಾನಂತರದಲ್ಲಿ ಅರಿತುಕೊಂಡಿದ್ದೇನೆ" ಎಂದು ತಿಳಿಸಿದ್ದಾರೆ.