ಅಣ್ವಸ್ತ್ರ ಬಳಕೆ: ಸಂಚಲನ ಮೂಡಿಸಿದ ರಾಜನಾಥ್ ಸಿಂಗ್ ಹೇಳಿಕೆ
ನವದೆಹಲಿ, ಆಗಸ್ಟ್ 16: ಪಾಕಿಸ್ತಾನದೊಂದಿಗಿನ ಸಂಬಂಧ ಮತ್ತಷ್ಟು ಹಳಸಿ, ಆತಂಕದ ಸನ್ನಿವೇಶ ಸೃಷ್ಟಿಯಾಗಿರುವ ಸಂದರ್ಭದಲ್ಲಿಯೇ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ನೀಡಿರುವ ಹೇಳಿಕೆ ತೀವ್ರ ಸಂಚಲನ ಮೂಡಿಸಿದೆ.
'ನಾವು ಮೊದಲು ಅಣ್ವಸ್ತ್ರ ಬಳಕೆ ಮಾಡುವುದಿಲ್ಲ' ಎಂಬ ನೀತಿಯನ್ನು ಭವಿಷ್ಯದಲ್ಲಿಯೂ ಅನುಸರಿಸುತ್ತೇವೆ ಎಂದು ಹೇಳಲಾಗದು. ಮುಂದೆ ಅದು ಬದಲಾಗಬಹುದು ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.
ಪೋಖ್ರಾನ್ನಲ್ಲಿ ಶುಕ್ರವಾರ ಮಾತನಾಡಿದ ಅವರು, ''ಇಂದಿನವರೆಗೂ ನಮ್ಮ ಪರಮಾಣು ನೀತಿಯು 'ಮೊದಲು ಬಳಕೆ ಇಲ್ಲ' ಎಂಬುದಾಗಿತ್ತು. ಮುಂದೆ ಆಗುವುದು ಭವಿಷ್ಯದ ಸನ್ನಿವೇಶಗಳನ್ನು ಅವಲಂಬಿಸಿರುತ್ತದೆ'' ಎಂದು ಹೇಳಿದ್ದಾರೆ.
ಬಳಿಕ ಟ್ವೀಟ್ ಮಾಡಿರುವ ರಾಜನಾಥ್ ಸಿಂಗ್, ''ಪೋಖ್ರಾನ್ ಪ್ರದೇಶವು ಅಟಲ್ಜಿ ಅವರು ಭಾರತವನ್ನು ಪರಮಾಣು ಶಕ್ತಿಯ ದೇಶವನ್ನಾಗಿ ಮಾಡುವ ಅಚಲ ನಿಲುವಿಗೆ ಸಾಕ್ಷಿಯಾಗಿತ್ತು. ಈಗಲೂ ನಾವು ಅಣ್ವಸ್ತ್ರದ ಮೊದಲ ಬಳಕೆ ಮಾಡುವುದಿಲ್ಲ ಎಂಬ ನಿಲುವಿಗೆ ದೃಢವಾಗಿ ಅಂಟಿಕೊಂಡಿದ್ದೇವೆ. ಈ ನೀತಿಗೆ ಭಾರತ ಕಠಿಣವಾಗಿ ಬದ್ಧವಾಗಿರುತ್ತದೆ. ಭವಿಷ್ಯದಲ್ಲಿ ನಡೆಯುವುದು ಸನ್ನಿವೇಶಗಳ ಮೇಲೆ ಅವಲಂಬಿತವಾಗಿರುತ್ತದೆ'' ಎಂದು ಹೇಳಿದ್ದಾರೆ.
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಮೊದಲ ವರ್ಷದ ಪುಣ್ಯತಿಥಿಯಂದು ಅವರಿಗೆ ಗೌರವ ಸಲ್ಲಿಸಲು ರಾಜನಾಥ್ ಸಿಂಗ್ ಅವರು ಶುಕ್ರವಾರ ಬೆಳಿಗ್ಗೆ ಪೋಖ್ರಾನ್ಗೆ ಭೇಟಿ ನೀಡಿದ್ದರು.
''ಭಾರತವು ಅಣ್ವಸ್ತ್ರವುಳ್ಳ ಜವಾಬ್ದಾರಿಯುತ ದೇಶವೆಂಬ ಮಾನ್ಯತೆ ಪಡೆದುಕೊಂಡಿರುವುದು ಈ ದೇಶದ ಪ್ರತಿಯೊಬ್ಬ ಪ್ರಜೆಗೂ ರಾಷ್ಟ್ರೀಯ ಹೆಮ್ಮೆಯ ವಿಚಾರವಾಗಿದೆ. ಅಟಲ್ಜಿ ಅವರ ಮಹಾನ್ ಚೇತನಕ್ಕೆ ಭಾರತ ಸದಾ ಋಣಿಯಾಗಿರುತ್ತದೆ'' ಎಂದು ರಾಜನಾಥ್ ಹೇಳಿದ್ದಾರೆ.
ನರೇಂದ್ರ ಮೋದಿ ಸರ್ಕಾರದ ಮೊದಲ ಅವಧಿಯಲ್ಲಿ ರಕ್ಷಣಾ ಸಚಿವರಾಗಿದ್ದ ಮನೋಹರ್ ಪರಿಕ್ಕರ್ ಅವರು 2016ರಲ್ಲಿ ಇದೇ ರೀತಿಯ ಹೇಳಿಕೆ ನೀಡಿದ್ದರು. ಭಾರತವು 'ಅಣ್ವಸ್ತ್ರ ಮೊದಲು ಬಳಸುವುದಿಲ್ಲ' ಎಂಬ ನೀತಿಯನ್ನು ಏಕೆ ಪಾಲಿಸಬೇಕು? ಎನ್ನುವ ಮೂಲಕ ವಿವಾದ ಸೃಷ್ಟಿಸಿದ್ದರು.