ಜೆಎನ್ ಯು ತಿಕ್ಕಾಟ: ಕುಲಪತಿ ರಾಜೀನಾಮೆ ನಂತರವೇ ವಿದ್ಯಾರ್ಥಿಗಳಿಗೆ ಪಾಠ
ನವದೆಹಲಿ, ಜನವರಿ.14: ಜವಾಹರ್ ಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ಮಳೆ ನಿಂತರೂ ಮರದ ಹನಿ ನಿಲ್ಲದು ಎನ್ನುವಂತಾ ಪರಿಸ್ಥಿತಿ ನಿರ್ಮಾಣವಾಗಿದೆ. ಜೆಎನ್ ಯು ಕುಲಪತಿ ಮಮಿದಲ್ ಜಗದೀಶ್ ಕುಮಾರ್ ರಾಜೀನಾಮೆ ಸಲ್ಲಿಸದ ಹೊರತು ವಿದ್ಯಾರ್ಥಿಗಳಿಗೆ ಪಾಠ ಮಾಡದಿರಲು ಪ್ರಾದ್ಯಾಪಕರು ತೀರ್ಮಾನಿಸಿದ್ದಾರೆ.
ಜನವರಿ.13ರ ಸೋಮವಾರದಿಂದಲೇ ಜವಾಹಾರ್ ಲಾಲ್ ನೆಹರೂ ವಿವಿಯಲ್ಲಿ ಆಡಳಿತಾತ್ಮಕ ಹಾಗೂ ಶೈಕ್ಷಣಿಕ ಚಟುವಟಿಕೆಗಳು ಆರಂಭವಾಗಬೇಕಿತ್ತು. ಆದರೆ, ಜೆಎನ್ ಯು ಟೀಸರ್ಚ್ ಅಸೋಸಿಯೇಷನ್ ವಿವಿ ಕುಲಪತಿ ವಿರುದ್ಧ ಸಮರ ಸಾರಿದೆ. ವಿಸಿ ಜಗದೀಶ್ ಕುಮಾರ್ ರಾಜೀನಾಮೆ ಸಲ್ಲಿಸುವವರೆಗೂ ತರಗತಿಗಳನ್ನು ಆರಂಭಿಸುವುದಿಲ್ಲ ಎಂದು ಹೇಳುತ್ತಿದ್ದಾರೆ.
ಜೆಎನ್ ಯು ಹಿಂಸಾಚಾರ: ಫೇಸ್ ಬುಕ್, ವಾಟ್ಸಾಪ್ ಗೆ ಹೈಕೋರ್ಟ್ ನೋಟಿಸ್
ಜನವರಿ.05ರಂದು ಜೆಎನ್ ಯುನಲ್ಲಿ ನಡೆದ ಹಿಂಸಾಚಾರಕ್ಕೆ ಪ್ರಾಧ್ಯಾಪಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತರಗತಿಯನ್ನು ಬಹಷ್ಕರಿಸುವ ಪ್ರಾಧ್ಯಾಪಕರ ಹೋರಾಟಕ್ಕೆ ವಿದ್ಯಾರ್ಥಿಗಳು ಕೂಡಾ ಕೈ ಜೋಡಿಸಿದ್ದಾರೆ. ಕುಲಪತಿಯನ್ನು ಜೆಎನ್ ಯುನಿಂದ ತೆಗೆದು ಹಾಕುವವರೆಗೂ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಜೆಎನ್ ಯುನಲ್ಲಿ ಸಹೋದ್ಯೋಗಿಗಳ ಮೇಲೆ ದೌರ್ಜನ್ಯ:
ಕಳೆದ ಜನವರಿ.05ರಂದು ಜೆಎನ್ ಯುನಲ್ಲಿ ನಡೆದ ಹಿಂಸಾಚಾರದಲ್ಲಿ ತಮ್ಮ ಸಹೋದ್ಯೋಗಿಗಳ ಮೇಲೆ ದೌರ್ಜನ್ಯ ನಡೆಸಲಾಗಿದೆ. ಎಲ್ಲದರ ಬಗ್ಗೆ ತಿಳಿದಿದ್ದರೂ ಕುಲಪತಿ ಮಮಿದಲ್ ಜಗದೀಶ್ ಕುಮಾರ್ ಯಾರೊಬ್ಬರ ಬಗ್ಗೆಯೂ ಕಾಳಜಿ ತೋರಲಿಲ್ಲ. ಕನಿಷ್ಠ ಏನಾಗಿದೆ ಎಂಬುದರ ಬಗ್ಗೆಯೂ ವಿಚಾರಿಸುವ ಮುತುವರ್ತಿ ವಹಿಸಲಿಲ್ಲ ಎಂದು ಪ್ರಾಧ್ಯಾಪಕರು ಆರೋಪಿಸಿದ್ದಾರೆ.
ಕುಲಪತಿಗಳ ದಿವ್ಯ ನಿರ್ಲಕ್ಷ್ಯದ ವಿರುದ್ಧ ಕಳೆದ ಜನವರಿ.11ರಂದು ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯಕ್ಕೆ ಜೆಎನ್ ಯು ಪ್ರಾಧ್ಯಾಪಕರ ಸಂಘ ಹಾಗೂ ವಿದ್ಯಾರ್ಥಿಗಳ ಸಂಘದ ವತಿಯಿಂದ ದಸ್ತಾವೇಜು ಸಲ್ಲಿಸಲಾಗಿತ್ತು.