ಏಪ್ರಿಲ್ ನಿಂದ 3 ಲಕ್ಷ ರುಪಾಯಿ ಮೇಲಿನ ನಗದು ವ್ಯವಹಾರಕ್ಕೆ ಬ್ರೇಕ್!
ನವದೆಹಲಿ, ಫೆಬ್ರವರಿ 1: ತೆರಿಗೆ ಕದಿಯುವುದನ್ನು ತಡೆಯುವುದಕ್ಕೆ ಹಾಗೂ ಭ್ರಷ್ಟಾಚಾರ ತಡೆಗಾಗಿ 3 ಲಕ್ಷ ರುಪಾಯಿ ಮೇಲ್ಪಟ್ಟ ನಗದು ವ್ಯವಹಾರ ಮಾಡುವಂತಿಲ್ಲ ಎಂದು ಬಜೆಟ್ ನಲ್ಲಿ ಘೋಷಣೆ ಮಾಡಲಾಗಿದೆ. ಏಪ್ರಿಲ್ ನಿಂದ ಮೂರು ಲಕ್ಷ ರುಪಾಯಿ ಮೇಲಿನ ನಗದು ವ್ಯವಹಾರ ಮಾಡುವಂತಿಲ್ಲ.
ವಿಶೇಷ ಕಾರ್ಯಾಚರಣೆ ತಂಡದ ಶಿಫಾರಸನ್ನು ಕೇಂದ್ರ ಸರಕಾರ ಗಂಭೀರವಾಗಿ ಪರಿಗಣಿಸಿ, ಜಾರಿಗೆ ತಂದಿದೆ. ಈ ತಂಡದ ನೇತೃತ್ವವನ್ನು ಮಾಜಿ ನ್ಯಾಯಾಧೀಶ ಎಂ.ಬಿ.ಷಾ ವಹಿಸಿದ್ದರು. ಮತ್ತು ವರದಿಯನ್ನು ಸುಪ್ರೀಂ ಕೋರ್ಟ್ ಗೆ ಸಲ್ಲಿಸಿದ್ದರು. ವಿವಿಧ ದೇಶಗಳಲ್ಲಿ ನಗದು ವ್ಯವಹಾರಕ್ಕೆ ಇರುವ ನಿಯಮಗಳು ಹಾಗೂ ವಿವಿಧ ವರದಿಗಳನ್ನು ಗಮನಿಸಿ ಈ ಶಿಫಾರಸು ಮಾಡಲಾಗಿದೆ.
ಅರುಣ್ ಜೇಟ್ಲಿ ಅವರು ಹೇಳಿದ ಪ್ರಕಾರ, ಮೂರು ಲಕ್ಷ ಮತ್ತು ಹೆಚ್ಚು ಮೊತ್ತದ ನಗದು ವ್ಯವಹಾರ ಪೂರ್ತಿ ನಿಷೇಧಿಸಲು ವಿಶೇಷ ಕಾರ್ಯಾಚರಣೆ ತಂಡ ಶಿಫಾರಸು ಮಾಡಿತ್ತು. ಅದನ್ನು ಸರಕಾರ ಅನುಮೋದಿಸಿದೆ. ಇನ್ನು ರಾಜಕೀಯ ಪಕ್ಷಗಳು ವಂತಿಗೆ ಸಂಗ್ರಹವನ್ನು ಎರಡು ಸಾವಿರ ರುಪಾಯಿ ಮೊತ್ತ ಇದ್ದರೂ ಚೆಕ್ ಅಥವಾ ಡಿಜಿಟಲ್ ವ್ಯವಹಾರದ ಮೂಲಕವೇ ಪಡೆಯಬೇಕು. ಈ ಹಿಂದೆ ಆ ಮೊತ್ತ ಇಪ್ಪತ್ತು ಸಾವಿರ ಇತ್ತು. ಅಷ್ಟರವರೆಗೆ ಮೂಲ ತಿಳಿಸುವ ಅಗತ್ಯ ಇರಲಿಲ್ಲ.