ಆರು ವರ್ಷಗಳ ನಂತರ ಸೋನಿಯಾ ಗಾಂಧಿ, ನಿತೀಶ್ ಕುಮಾರ್, ಲಾಲು ಯಾದವ್ ಭೇಟಿ ನಿಗದಿ
ನವದೆಹಲಿ, ಸೆ. 23: ಬಿಹಾರದ ಮಹಾಮೈತ್ರಿಕೂಟದ ಇಬ್ಬರು ಉನ್ನತ ನಾಯಕರಾದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ರಾಷ್ಟ್ರೀಯ ಜನತಾ ದಳದ ಲಾಲು ಪ್ರಸಾದ್ ಯಾದವ್ ಅವರು ಭಾನುವಾರ ಸಂಜೆ ದೆಹಲಿಯಲ್ಲಿ ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಆರು ವರ್ಷಗಳ ನಂತರ ಇದು ಅವರ ಮೊದಲ ಭೇಟಿಯಾಗಿದೆ. ರಾಹುಲ್ ಗಾಂಧಿ ಸಭೆಗೆ ಹಾಜರಾಗುತ್ತಾರೆ ಎಂದು ಬಿಹಾರದ ಇಬ್ಬರು ನಾಯಕರು ಆಶಿಸಿದ್ದರು ಎಂದು ಮೂಲಗಳು ತಿಳಿಸಿವೆ.
ಕಾಂಗ್ರೆಸ್ ಅಧ್ಯಕ್ಷರಾದರೆ ಅಶೋಕ್ ಗೆಹ್ಲೋಟ್ ಪಾಲಿಗಿಲ್ಲ ಸಿಎಂ ಕುರ್ಚಿ!
ಆದರೆ, ಭಾರತ್ ಜೋಡೋ ಯಾತ್ರೆಯ ಅಂಗವಾಗಿ ರಾಹುಲ್ ಗಾಂಧಿಯವರು ಕೇರಳದಲ್ಲಿದ್ದಾರೆ. ಕಾಂಗ್ರೆಸ್ನ ಐಕ್ಯತಾ ಪಾದಯಾತ್ರೆ ಜೋಡೋ ಯಾತ್ರೆಯನ್ನು ಕನ್ಯಾಕುಮಾರಿಯಿಂದ ಕಾಶ್ಮೀರಕ್ಕೆ ಮುನ್ನಡೆಸುತ್ತಿದ್ದಾರೆ.
2015 ರ ಚುನಾವಣೆಯ ಮೊದಲು ಭೇಟಿಯಾಗಿದ್ದ ಸೋನಿಯಾ, ನಿತೀಶ್
ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಸೋನಿಯಾ ಗಾಂಧಿ ಅವರು 2015 ರ ಬಿಹಾರ ಚುನಾವಣೆಯ ಮೊದಲು ಇಫ್ತಾರ್ನಲ್ಲಿ ಕೊನೆಯ ಬಾರಿ ಭೇಟಿಯಾಗಿದ್ದರು.
ಬಿಹಾರ ಮುಖ್ಯಮಂತ್ರಿ ಅವರು ಈ ತಿಂಗಳ ಆರಂಭದಲ್ಲಿ ತಮ್ಮ ಕೊನೆಯ ದೆಹಲಿ ಭೇಟಿಯ ಸಂದರ್ಭದಲ್ಲಿ ರಾಹುಲ್ ಗಾಂಧಿಯನ್ನು ಭೇಟಿ ಮಾಡಿದ್ದರು. ಆ ಸಮಯದಲ್ಲಿ ಸೋನಿಯಾ ಗಾಂಧಿ ವೈದ್ಯಕೀಯ ಚಿಕಿತ್ಸೆಗಾಗಿ ವಿದೇಶದಲ್ಲಿದ್ದರು.
ಗಂಭೀರ ವಿಷಯಗಳ ಬಗ್ಗೆ ಚರ್ಚೆ ಸಾಧ್ಯತೆ ಎಂದ ಮೂಲಗಳು
ಲಾಲು ಪ್ರಸಾದ್ ಯಾದವ್ ಅವರು ಹಲವಾರು ಮೇವು ಹಗರಣದ ಪ್ರಕರಣಗಳಲ್ಲಿ 2018 ರಲ್ಲಿ ಜೈಲು ಪಾಲಾದರು, ನಂತರ ಕೊರೊನಾ ಸಾಂಕ್ರಾಮಿಕದಿಂದಾಗಿ ಎಲ್ಲರಿಂದ ದೂರ ಉಳಿದಿದ್ದರು. ಅನಾರೋಗ್ಯದ ಕಾರಣ ಜಾಮೀನಿನ ಮೇಲೆ ಹೊರಗಿರುವ ನಾಯಕ, ಮೂತ್ರಪಿಂಡ ಕಸಿಗಾಗಿ ಮುಂಬರುವ ವಾರಗಳಲ್ಲಿ ಸಿಂಗಾಪುರಕ್ಕೆ ಹೋಗಲಿದ್ದಾರೆ.
ಈ ಮೂವರು ನಾಯಕರದು ಸೌಜನ್ಯದ ಭೇಟಿ ಎಂದು ಮೂಲಗಳು ಸೂಚಿಸಿದ್ದರೂ ಕೂಡ ಮಹಾಮೈತ್ರಿಕೂಟವನ್ನು ರಾಷ್ಟ್ರಮಟ್ಟಕ್ಕೆ ಕೊಂಡೊಯ್ಯುವುದು ಸೇರಿದಂತೆ ಕೆಲವು ಗಂಭೀರ ವಿಷಯಗಳ ಕುರಿತು ಚರ್ಚಿಸುವ ಅವಕಾಶವೂ ಇದೆ.
ವಿರೋಧ ಪಕ್ಷಗಳನ್ನು ಒಗ್ಗೂಡಿಸುವಲ್ಲಿ ನಿತೀಶ್ ಕುಮಾರ್!
ವಿಶೇಷವಾಗಿ 2024 ರ ರಾಷ್ಟ್ರೀಯ ಚುನಾವಣೆ ಮೇಲೆ ಕಣ್ಣಿಟ್ಟಿರುವ ವಿರೋಧ ಪಕ್ಷಗಳನ್ನು ಚುನಾವಣೆಗೆ ಮುಂಚಿತವಾಗಿ ಬಿಜೆಪಿ ವಿರುದ್ಧ ಒಗ್ಗೂಡಿಸುವ ಕೆಲಸದಲ್ಲಿ ನಿತೀಶ್ ಕುಮಾರ್ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ದೆಹಲಿಗೆ ತಮ್ಮ ಕೊನೆಯ ಭೇಟಿಯ ಸಂದರ್ಭದಲ್ಲಿ, ನಿತೀಶ್ ಕುಮಾರ್ ಅವರು ಪ್ರಮುಖ ವಿರೋಧ ಪಕ್ಷದ ನಾಯಕರನ್ನು ಭೇಟಿಯಾದರು. ಈ ಪಟ್ಟಿಯಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ನ್ಯಾಶನಲಿಸ್ಟ್ ಕಾಂಗ್ರೆಸ್ ಮುಖ್ಯಸ್ಥ ಶರದ್ ಪವಾರ್, ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಮತ್ತು ಎಡ ಪಕ್ಷಗಳ ನಾಯಕರು ಸೇರಿದ್ದಾರೆ.
ಶಶಿ ತರೂರ್, ಅಶೋಕ್ ಗೆಹ್ಲೋಟ್, ರಾಹುಲ್ ಗಾಂಧಿ ಪ್ರಬಲ ಆಯ್ಕೆಗಳು
ಕಾಂಗ್ರೆಸ್ ತನ್ನ ಮುಂದಿನ ಅಧ್ಯಕ್ಷರನ್ನು ಆಯ್ಕೆ ಮಾಡಲು ಸಿದ್ಧತೆ ನಡೆಸುತ್ತಿರುವ ಬೆನ್ನಲ್ಲೇ ಈ ಸಭೆ ಕೂಡ ಬಂದಿದೆ. ಗುರುವಾರದಿಂದ ಚುನಾವಣೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದೆ. ಅಧ್ಯಕ್ಷ ಸ್ಥಾನಕ್ಕೆ ಒಂದಕ್ಕಿಂತ ಹೆಚ್ಚು ಅಭ್ಯರ್ಥಿಗಳು ಇದ್ದಲ್ಲಿ, ಚುನಾವಣೆಯು ನಿಗದಿತ ದಿನಾಂಕ ಅಕ್ಟೋಬರ್ 17 ರಂದು ನಡೆಯುತ್ತದೆ. ನಂತರ ಮತಗಳ ಎಣಿಕೆ ಮತ್ತು ಫಲಿತಾಂಶಗಳ ಘೋಷಣೆ ಅಕ್ಟೋಬರ್ 19 ರಂದು ನಡೆಯಲಿದೆ.
ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಆರಂಭದಲ್ಲಿ ಶಶಿ ತರೂರ್ ಮತ್ತು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ನಡುವೆ ನಡೆಯಬಹುದೆಂದು ನಿರೀಕ್ಷಿಸಲಾದ ಸ್ಪರ್ಧೆಯು ಈಗ ಬಹುಕೋನವಾಗಬಹುದು ಎನ್ನಲಾಗಿದೆ. ಮನೀಶ್ ತಿವಾರಿ ಮತ್ತು ದಿಗ್ವಿಜಯ ಸಿಂಗ್ ಸೇರಿದಂತೆ ಹಲವಾರು ನಾಯಕರು ಚುನಾವಣೆಯಲ್ಲಿ ಆಸಕ್ತಿ ವ್ಯಕ್ತಪಡಿಸಿದ್ದಾರೆ.