ಮೋದಿ ಸಂಪುಟದಲ್ಲಿ ಸೇರಿಕೊಳ್ಳುವುದಿಲ್ಲ ಎಂದ ನಿತೀಶ್ ಕುಮಾರ್
ನವದೆಹಲಿ, ಮೇ 30: ಲೋಕಸಭೆ ಚುನಾವಣೆಯಲ್ಲಿ ಬಿಹಾರದಲ್ಲಿ ಬಿಜೆಪಿಯೊಂದಿಗೆ ಸೀಟು ಹಂಚಿಕೆ ಮಾಡಿಕೊಂಡು ಸ್ಪರ್ಧಿಸಿದ್ದ ಜೆಡಿಯು, ಎನ್ಡಿಎ ಸರ್ಕಾರದ ಸಚಿವ ಸಂಪುಟದ ಭಾಗವಾಗಿರುವುದಿಲ್ಲ. ಹೀಗೆಂದು ಸ್ವತಃ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ತಿಳಿಸಿದ್ದಾರೆ.
ಜೆಡಿಯು ಪಕ್ಷದ ಒಬ್ಬ ಸಂಸದನಿಗೆ ಕೇಂದ್ರ ಸಚಿವ ಸಂಪುಟದಲ್ಲಿ ಸ್ಥಾನ ಕೊಡುವುದಾಗಿ ನರೇಂದ್ರ ಮೋದಿ ಆಫರ್ ನೀಡಿದ್ದರು. ಅದನ್ನು ನಿತೀಶ್ ಕುಮಾರ್ ತಿರಸ್ಕರಿಸಿದ್ದಾರೆ. ಆದರೆ, ಜೆಡಿಯು ಎನ್ಡಿಎ ಸರ್ಕಾರದ ಬದ್ಧ ಮಿತ್ರಪಕ್ಷವಾಗಿಯೇ ಉಳಿದುಕೊಳ್ಳಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಬಿಹಾರ: ಮೋದಿ, ನಿತೀಶ್ ಅಲೆಗೆ ಬಿಲ ಸೇರಿಕೊಂಡ ಕಾಂಗ್ರೆಸ್ ಮೈತ್ರಿಕೂಟ
ಗುರುವಾರದ ಪ್ರಮಾಣ ವಚನ ಸ್ವೀಕಾರ ಆರಂಭವಾಗುವ ಕೆಲವೇ ಗಂಟೆಗಳ ಮುನ್ನ ಅವರು ಇದನ್ನು ಖಚಿಪಡಿಸಿದ್ದಾರೆ. ತಮ್ಮ ಪಕ್ಷದ ಯಾವ ಸಂಸದ ಕೂಡ ಸಚಿವ ಸಂಪುಟದಲ್ಲಿ ಸೇರಿಕೊಳ್ಳುವುದಿಲ್ಲ ಎಂದು ಅವರು ತಿಳಿಸಿದ್ದಾರೆ. ದೆಹಲಿಯ ರಾಷ್ಟ್ರಪತಿ ಭವನದಲ್ಲಿ ನರೇಂದ್ರ ಮೋದಿ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ತೆರಳುವ ಸಂದರ್ಭದಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಜೆಡಿಯು ಪಕ್ಷಕ್ಕೆ ಒಂದೇ ಒಂದು ಸಚಿವ ಸ್ಥಾನದ ಆಫರ್ ನೀಡಿರುವುದರಿಂದ ನಿತೀಶ್ ಅಸಮಾಧಾನಗೊಂಡಿದ್ದಾರೆ. ಹೀಗಾಗಿ ಅದನ್ನು ಕೂಡ ತಿರಸ್ಕರಿಸಿದ್ದಾರೆ ಎಂದು ಮೂಲಗಳು ತಿಳಿಸಿರುವುದಾಗಿ ಎನ್ಡಿಟಿವಿ ವರದಿ ಮಾಡಿದೆ.
ಕೇಂದ್ರ ಗೃಹ ಖಾತೆ ಅಮಿತ್ ಶಾ ಅವರಿಗೋ, ಮತ್ತಾರಿಗೋ?
ನಿತೀಶ್ ಕುಮಾರ್ ಅವರ ಜೆಡಿಯು ಹಾಗೂ ಬಿಜೆಪಿ ಬಿಹಾರದಲ್ಲಿ ತಲಾ 17 ಸೀಟುಗಳಲ್ಲಿ ಸ್ಪರ್ಧಿಸಿದ್ದವು. ಇನ್ನು ಆರು ಸೀಟುಗಳಲ್ಲಿ ಎಲ್ಜೆಪಿ ಸ್ಪರ್ಧಿಸಿದ್ದವು. 40 ಕ್ಷೇತ್ರಗಳಲ್ಲಿ ಎನ್ಡಿಎ ಮೈತ್ರಿಕೂಟ 39ರಲ್ಲಿ ಗೆಲುವು ಕಂಡಿತ್ತು. ಏಕೈಕ ಕ್ಷೇತ್ರದಲ್ಲಿ ಜೆಡಿಯು ಅಭ್ಯರ್ಥಿ ಸೋಲು ಕಂಡಿದ್ದರು.