ಚೀನಾ ಕಂಪನಿಗಳ ನಿಯಂತ್ರಣಕ್ಕೆ ಬಿಗಿ ಕಾನೂನಿನ ಅಗತ್ಯವಿದೆ: ಗಡ್ಕರಿ
ನವದೆಹಲಿ, ಜುಲೈ 4: ಭಾರತದಲ್ಲಿ ಚೀನಾ ಗುತ್ತಿಗೆದಾರರನ್ನು ನಿಯಂತ್ರಿಸಲು ಪ್ರಸ್ತುತ ನಿಯಮಗಳನ್ನು ತುರ್ತಾಗಿ ಸರ್ಕಾರ ಬದಲಿಸಬೇಕಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ಚೀನೀ ಅಪ್ಲಿಕೇಷನ್ಗಳನ್ನು ನಿಷೇಧಿಸಿರುವುದು ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನೆಗಳಲ್ಲಿ ಚೀನಾದ ಕಂಪನಿಗಳಿಗೆ ಬಹಿಷ್ಕಾರ ಹಾಕಿರುವ ಬೆನ್ನಲ್ಲೇ ಕೇಂದ್ರ ಸರ್ಕಾರದ ಮುಂದಿನ ಯೋಜನೆಗಳ ಬಗ್ಗೆ ಗಡ್ಕರಿ ಸುಳಿವು ನೀಡಿದ್ದಾರೆ.
''ಸದ್ಯದ ಪರಿಸ್ಥಿತಿಯಲ್ಲಿ ನನಗೆ ಮುಂಬೈಗೆ ಹೋಗುವ ಧೈರ್ಯವಿಲ್ಲ'': ನಿತಿನ್ ಗಡ್ಕರಿ
ರಾಷ್ಟ್ರೀಯ ಹೆದ್ದಾರಿ ಸೇರಿ ಇತರೆ ಯೋಜನೆಗಳ ಟೆಂಡರ್ ಬದಲಿಸಬೇಕಿದೆ. ಹಾಲಿ ನಿಯಮಗಳ ಪ್ರಕಾರ ಬೃಹತ್ ಯೋಜನೆಗಳಿಗೆ, ಅನುಭವದ ಹಿನ್ನೆಲೆಯನ್ನು ಕೇಳಲಾಗುತ್ತದೆ. ಆದರೆ ಬಹುತೇಕ ಕಂಪನಿಗಳಿಗೆ ಇಂತಹ ಯೋಜನೆ ಮಾಡಿರುವ ಅನುಭವವಿರುವುದಿಲ್ಲ. ಹೀಗಾಗಿ ಇಂತಹ ಯೋಜನೆಗಳು ಚೀನೀ ಕಂಪನಿಗಳ ಪಾಲಾಗುತ್ತಿವೆ.
ಇದನ್ನು ತಪ್ಪಿಸಬೇಕೆಂದರೆ ನಮ್ಮ ಕಾನೂನುಗಳನ್ನು ಬದಲಾಯಿಸಬೇಕಿದೆ. ಆಗ ಮಾತ್ರ ಭಾರತೀಯ ಕಂಪನಿಗಳಿಗೆ ಅವಕಾಶ ನೀಡಲು ಸಾಧ್ಯ, ಈ ನಿಟ್ಟಿನಲ್ಲಿ ಸರ್ಕಾರ ತುರ್ತು ಕ್ರಮ ಕೈಗೊಳ್ಳಬೇಕಿದೆ. ನಾವು ಸಾಕಷ್ಟು ಹಳೆಯ ಕಾನೂನುಗಳಲ್ಲೇ ವ್ಯವಹಾರ ನಡೆಸುತ್ತಿದ್ದೇವೆ ಎಂದಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಗಳ ಯೋಜನೆಗಳಿಂದ ಚೀನೀ ಕಂಪನಿಗಳನ್ನು ದೂರವಿಡುವ ನಿರ್ಧಾರ ತೆಗೆದುಕೊಂಡ ಬೆನ್ನಲ್ಲೇ ಸಚಿವ ನಿತಿನ್ ಗಡ್ಕರಿಯಿಂದ ಈ ನಿರ್ಧಾರ ಹೊರಬಿದ್ದಿದೆ.