ಬಜೆಟ್ ಪ್ರತಿ ಪ್ರಿಂಟಿಗೂ ಮುನ್ನ ಹಲ್ವಾ ಹಂಚಿದ ನಿರ್ಮಲಾ ಸೀತಾರಾಮನ್
ನವದೆಹಲಿ, ಜೂನ್ 22 : ಲೋಕಸಭೆ ಚುನಾವಣೆಯಲ್ಲಿ ಅಭೂತಪೂರ್ವ ಜಯ ಗಳಿಸಿದ ನಂತರ ಮೊದಲ ಬಾರಿ ಆಯವ್ಯಯ ಮಂಡನೆಯಾಗಲಿದ್ದು, ಅದಕ್ಕೂ ಮೊದಲು ಇಂದು ಜರುಗಿದ ಸಾಂಪ್ರದಾಯಿಕ ಹಲ್ವಾ ಸಮಾರಂಭದಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಹಣಕಾಸು ಇಲಾಖೆಯ ಸಿಬ್ಬಂದಿಗಳಿಗೆ ಹಲ್ವಾ ಹಂಚಿದರು.
ಹಿಂದಿನ ಮೋದಿ ಸರಕಾರದಲ್ಲಿ ರಕ್ಷಣಾ ಸಚಿವೆಯಾಗಿದ್ದ ನಿರ್ಮಲಾ ಸೀತಾರಾಮನ್ ಅವರ ಹೆಗಲಿಗೆ ಹಣಕಾಸು ನಿರ್ವಹಣೆಯ ಜವಾಬ್ದಾರಿಯನ್ನು ನರೇಂದ್ರ ಮೋದಿಯವರು ಹೊರಿಸಿದ್ದಾರೆ. ದೇಶದ ಆರ್ಥಿಕ ಸ್ಥಿತಿ ನಿರ್ವಹಿಸುವ ಜವಾಬ್ದಾರಿ ಹೊತ್ತಮೇಲೆ ನಿರ್ಮಲಾ ಸೀತಾರಾಮನ್ ಅವರು ಮೊದಲ ಬಾರಿದೆ ಬಜೆಟ್ ಮಂಡಿಸಲಾಗಿದ್ದಾರೆ.
ಕೇಂದ್ರ ಬಜೆಟ್: ನಿಮಗೆ ತಿಳಿದಿರಬೇಕಾದ 5 ಪ್ರಮುಖ ಸಂಗತಿಗಳು
ಜುಲೈ 5ರಂದು ಸ್ವತಂತ್ರ ಭಾರತದ, ಪೂರ್ಣ ಪ್ರಮಾಣದ ಮಹಿಳಾ ಹಣಕಾಸು ಸಚಿವೆಯಾಗಿ ನಿರ್ಮಲಾ ಸೀತಾರಾಮನ್ ಅವರು ಆಯವ್ಯಯ ಮಂಡಿಸಲಿದ್ದಾರೆ. ಬಜೆಟ್ ಪ್ರತಿಗಳನ್ನು ಪ್ರಿಂಟಿಗೆ ಕಳುಹಿಸುವ ಮುನ್ನ ಹಣಕಾಸು ಸಚಿವಾಲಯದಲ್ಲಿ ಸಾಂಪ್ರದಾಯಿಕವಾಗಿ ಹಲ್ವಾ ಸಮಾರಂಭ ಆಚರಿಸುವುದು ಚಾಲ್ತಿಯಲ್ಲಿದೆ.
ನಿರ್ಮಲಾ ಸೀತಾರಾಮನ್ ಅವರ ಜೊತೆಗೆ ಹಣಕಾಸು ಮತ್ತು ಕಾರ್ಪೊರೇಟ್ ಖಾತೆಯ ರಾಜ್ಯ ಸಚಿವರಾಗಿರುವ ಅನುರಾಗ್ ಠಾಕೂರ್ ಅವರು ಕೂಡ ಹಲ್ವಾ ಸಮಾರಂಭದಲ್ಲಿ ಭಾಗವಹಿಸಿ, ನಿರ್ಮಲಾ ಅವರ ಜೊತೆಯಲ್ಲಿ ಇಲಾಖೆಯ ಸಿಬ್ಬಂದಿಗಳಿಗೆ ಹಲ್ವಾವನ್ನು ಹಂಚಿದರು.
ಜುಲೈ 10ರಂದು ಮೋದಿ ಸರ್ಕಾರದ ಪೂರ್ಣ ಬಜೆಟ್? ಈ ಬಾರಿಗೆ ಕೃಷಿಗೆ ಆದ್ಯತೆ
ಬಜೆಟ್ ಪ್ರತಿಗಳನ್ನು ಪ್ರಿಂಟಿಗೆ ಕಳುಹಿಸುವ ಮೊದಲು ಮತ್ತು ಬಜೆಟ್ ಮಂಡನೆಗೆ ಕೆಲ ದಿನಗಳು ಇರುವಾಗಲೇ ಹಲ್ವಾ ಸಮಾರಂಭವನ್ನು ಆಚರಿಸಲಾಗುತ್ತದೆ. ಹಣಕಾಸು ಸಚಿವಾಲಯ ಕಟ್ಟಡದ ಕೆಳಮಹಡಿಯಲ್ಲಿ, ದೊಡ್ಡ ಕಡಾಯಿಯಲ್ಲಿ ಹಲ್ವಾ ತಯಾರಿಸಲಾಗುತ್ತದೆ ಮತ್ತು 100ಕ್ಕೂ ಹೆಚ್ಚು ಸಿಬ್ಬಂದಿಗಳಿಗೆ ಹಲ್ವಾ ಹಂಚಲಾಗುತ್ತದೆ.
ಬಜೆಟ್ ತಯಾರಿಕೆ ಸಂದರ್ಭದಿಂದ ಬಜೆಟ್ ಮಂಡನೆಯಾಗುವವರೆಗೆ ಭಾಗಿಯಾಗುವ ಸಿಬ್ಬಂದಿಗಳೆಲ್ಲರೂ ತಮ್ಮ ಮನೆಮಠಗಳನ್ನು, ಹೆಂಡತಿ ಮಕ್ಕಳನ್ನು, ಬಂಧುಮಿತ್ರರನ್ನು ಮರೆತು ಕಚೇರಿಯಲ್ಲಿಯೇ ತೊಡಗಬೇಕಾಗುತ್ತದೆ. ಫೋನ್ ಮುಖಾಂತರವಾಗಲಿ ಮತ್ತಾವುದೇ ರೀತಿಯಲ್ಲಾಗಲು ಅವರು ಯಾರನ್ನೂ ಸಂಪರ್ಕಿಸುವಂತಿಲ್ಲ. ಅಷ್ಟರ ಮಟ್ಟಿಗೆ ಮಾಹಿತಿ ಸೋರಿಕೆಯಾಗದಂತೆ ಎಚ್ಚರಿಕೆ ವಹಿಸಬೇಕಾಗುತ್ತದೆ. ಈ ಕಾರಣದಿಂದಾಗಿಯೇ ಬಜೆಟ್ ಪ್ರತಿಗಳನ್ನು ಪ್ರಿಂಟಿಗೆ ಕಳುಹಿಸುವ ಮುನ್ನ ಹಲ್ವಾ ತಯಾರಿಸಿ ಸಿಬ್ಬಂದಿಗೆ ಹಂಚುವುದು ಸಂಪ್ರದಾಯ.