ಆರ್ಥಿಕ ಕುಸಿತ: ಕೇಂದ್ರದ ವಿರುದ್ಧ ಹರಿಹಾಯ್ದ ನಿರ್ಮಲಾ ಪತಿ
ನವದೆಹಲಿ, ಅಕ್ಟೋಬರ್ 14: ಆರ್ಥಿಕ ಕುಸಿತದ ಕುರಿತು ಕಳವಳ ವ್ಯಕ್ತಪಡಿಸಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಪತಿ, ಅರ್ಥಶಾಸ್ತ್ರಜ್ಞ ಪರಾಕಲ ಪ್ರಭಾಕರ್, ಅದನ್ನು ತಡೆಯಲು ನರೇಂದ್ರ ಮೋದಿ ಸರ್ಕಾರ ಹೊಸ ನೀತಿಗಳನ್ನು ರಚಿಸಲು ಇಚ್ಛಾಶಕ್ತಿ ಪ್ರದರ್ಶಿಸುತ್ತಿಲ್ಲ ಎಂದು ಕಿಡಿಕಾರಿದ್ದಾರೆ.
ಮಾಜಿ ಪ್ರಧಾನಿಗಳಾದ ಪಿ.ವಿ. ನರಸಿಂಹರಾವ್ ಮತ್ತು ಡಾ. ಮನಮೋಹನ್ ಸಿಂಗ್ ರೂಪಿಸಿದ್ದ ಆರ್ಥಿಕತೆಯ ಮಾದರಿಯನ್ನು ಅಳವಡಿಸಿಕೊಳ್ಳುವಂತೆ ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರಕ್ಕೆ ಅವರು 'ದಿ ಹಿಂದೂ' ಪತ್ರಿಕೆಯಲ್ಲಿ ಬರೆದಿರುವ ಅಂಕಣದಲ್ಲಿ ಅವರು ಸಲಹೆ ನೀಡಿದ್ದಾರೆ.
ಭಾರತದ ಜಿಡಿಪಿ ಭಾರಿ ಕುಸಿತ: ಆತಂಕ ಮೂಡಿಸಿದ ವಿಶ್ವಬ್ಯಾಂಕ್ ವರದಿ
Recommended Video
ನೆಹರೂ ಕಾಲದ ಸಮಾಜವಾದಿ ವಿಚಾರಧಾರೆಗಳನ್ನು ಟೀಕಿಸುವ ಬದಲು ಆರ್ಥಿಕ ಉದಾರೀಕರಣಕ್ಕೆ ತೆರೆದುಕೊಂಡ ನರಸಿಂಹರಾವ್-ಮನಮೋಹನ್ ಸಿಂಗ್ ಜೋಡಿಯ ಆರ್ಥಿಕ ವಾಸ್ತುಶಿಲ್ಪವು ಈಗಿನ ಸಂದರ್ಭಕ್ಕೆ ಅಗತ್ಯವಾಗಿವೆ ಎನ್ನುವ ಮೂಲಕ 1991ರ ಆರ್ಥಿಕ ನೀತಿಗಳನ್ನು ನೆನಪಿಸಿಕೊಂಡಿದ್ದಾರೆ.
ಆಂಧ್ರಪ್ರದೇಶದಲ್ಲಿ 2014-2018ರಲ್ಲಿ ಚಂದ್ರಬಾಬು ನಾಯ್ಡು ಸರ್ಕಾರದಲ್ಲಿ ಸಂವಹನ ಸಲಹೆಗಾರರಾಗಿದ್ದ ಪರಾಕಲ ಪ್ರಭಾಕರ್, ಮೊದಲು ಕಾಂಗ್ರೆಸ್ ಮತ್ತು ಬಳಿಕ ಬಿಜೆಪಿಯಲ್ಲಿ ರಾಜಕೀಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು. ಆದರೆ ಚುನಾವಣೆಗಳಲ್ಲಿ ಒಮ್ಮೆಯೂ ಗೆದ್ದಿರಲಿಲ್ಲ. ಪ್ರಭಾಕರ್ ಅವರ ಕುಟುಂಬವು ಮಾಜಿ ಪ್ರಧಾನಿ ನರಸಿಂಹರಾವ್ ಅವರಿಗೆ ಬಹಳ ಆಪ್ತವಾಗಿತ್ತು.
ಆರ್ಥಿಕ ಚೌಕಟ್ಟು ರೂಪಿಸಿಲ್ಲ
'ಸರ್ಕಾರವು ಆರ್ಥಿಕ ಅಭಿವೃದ್ಧಿಯನ್ನು ನಿರಾಕರಿಸುವ ಮನಸ್ಥಿತಿಯಲ್ಲಿಯೇ ಇದೆ. ಸಾರ್ವಜನಿಕ ವೇದಿಕೆಗಳಲ್ಲಿ ಒಂದರ ಹಿಂದೊಂದರಂತೆ ಅನಿಯಮಿತವಾಗಿ ಹರಿಯುತ್ತೇ ಇರುವ ಮಾಹಿತಿಗಳು ಒಂದರ ಬಳಿಕ ಮತ್ತೊಂದು ವಲಯ ಗಂಭೀರ ಸವಾಲಿನ ಪರಿಸ್ಥಿತಿಗೆ ಒಳಗಾಗುತ್ತಿವೆ' ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅಧಿಕಾರಕ್ಕೆ ಬಂದಾಗಿನಿಂದ ಬಿಜೆಪಿ ತನ್ನದೇ ಆರ್ಥಿಕ ಚೌಕಟ್ಟನ್ನು ತಯಾರಿಸುವ ಯಾವುದೇ ಪ್ರಸ್ತಾಪವನ್ನು ತೋರಿಸಿಲ್ಲ. ಬದಲಾಗಿ ನೆಹರೂ ಕಾಲದ ಸಮಾಜವಾದವನ್ನು ಟೀಕಿಸುತ್ತಾ ಕೂರುವುದರಲ್ಲಿ ಮಗ್ನವಾಗಿದೆ ಎಂದು ಹರಿಹಾಯ್ದಿದ್ದಾರೆ.
ಸಮಾಜವಾದಿ ಮಾದರಿ ತಿರಸ್ಕಾರ
'ಭಾರತೀಯ ಜನಸಂಘದ ಆರಂಭದಿಂದಲೂ ನೆಹರೂ ಅವರ ಸಮಾಜದ ಕುರಿತಾದ ಸಮಾಜವಾದಿ ಮಾದರಿಯನ್ನು ತಿರಸ್ಕರಿಸುವುದು ಸ್ಪಷ್ಟ. ಬಿಜೆಪಿಯ ನೀತಿಗಳು ಬಂಡವಾಳಶಾಹಿ ಎಂದೇ ಗುರುತಿಸಿಕೊಂಡಿದೆ. ಮುಕ್ತ ಮಾರುಕಟ್ಟೆ ಚೌಕಟ್ಟನ್ನು ಬಳಕೆಗೆ ತಾರದೆಯೇ ಬಿಡಲಾಗಿದೆ. ಆರ್ಥಿಕ ನೀತಿಗಳಲ್ಲಿಯೂ ಬಿಜೆಪಿ 'ಇದಲ್ಲ, ಇದಲ್ಲ' ಎಂಬುದನ್ನೇ ಮುಖ್ಯವಾಗಿ ಅಳವಡಿಸಿಕೊಂಡು ತನ್ನ ಸ್ವಂತ ನೀತಿ ಯಾವುದು ಎಂಬುದನ್ನು ಸ್ಪಷ್ಟಪಡಿಸುತ್ತಿಲ್ಲ' ಎಂದು ವಾಗ್ದಾಳಿ ನಡೆಸಿದ್ದಾರೆ.
ಆರ್ಥಿಕ ಸುಧಾರಣೆಗೆ ಮಹತ್ವದ ಘೋಷಣೆ ಮಾಡಿದ ನಿರ್ಮಲಾ ಸೀತಾರಾಮನ್
ಚುನಾವಣೆಯಲ್ಲಿ ಆರ್ಥಿಕತೆ ಪ್ರದರ್ಶನ ಮಾಡಲಿಲ್ಲ
ಚುನಾವಣೆಯಲ್ಲಿ ತನ್ನ ಮರು ಆಯ್ಕೆಯ ಅಗತ್ಯದ ಪ್ರತಿಪಾದನೆಗಾಗಿ ಮೋದಿ ಸರ್ಕಾರವು ಆರ್ಥಿಕ ಪ್ರದರ್ಶನದ ಬದಲು ಶಕ್ತಿಶಾಲಿ ರಾಜಕೀಯ, ರಾಷ್ಟ್ರೀಯವಾದ, ಭದ್ರತಾ ವೇದಿಕೆಗಳನ್ನು ಬಳಸಿಕೊಂಡಿದೆ. ಸರ್ದಾರ್ ಪಟೇಲ್ ಅವರನ್ನು ತನ್ನ ಆರ್ಥಿಕ ಮುಂಚೂಣಿಯ ವ್ಯಕ್ತಿಯನ್ನಾಗಿ ಬಳಸಿಕೊಂಡಂತೆ ಆರ್ಥಿಕತೆಯ ಬೆಳವಣಿಗೆಗೆ ನರಸಿಂಹರಾವ್ ಅವರನ್ನು ಮುಂದಿಟ್ಟುಕೊಳ್ಳಲಿ ಎಂದು ಸಲಹೆ ನೀಡಿದ್ದಾರೆ.
ರಾವ್-ಸಿಂಗ್ ಆರ್ಥಿಕತೆ ಅಳವಡಿಸಿಕೊಳ್ಳಿ
ನೆಹರೂ ಸಮಾಜವಾದಿ ಪರಿಕಲ್ಪನೆಯನ್ನು ತಿರಸ್ಕರಿಸಿದ ಬಿಜೆಪಿ, 1991ರ ನರಸಿಂಹ ರಾವ್ ಆರ್ಥಿಕ ಪರಿಕಲ್ಪನೆಯನ್ನು ತಿರಸ್ಕರಿಸಲಿಲ್ಲ. ಇದನ್ನು ಸಂಪೂರ್ಣವಾಗಿ ಮತ್ತು ಆಕ್ರಮಣಕಾರಿ ರೀತಿಯಲ್ಲಿ ಬಿಜೆಪಿ ಸರ್ಕಾರ ಅಳವಡಿಸಿಕೊಳ್ಳಬೇಕು. ಪಕ್ಷದ ಚಿಂತಕರ ಚಾವಡಿಯು ತನ್ನ ದಾಳಿಯು ರಾಜಕೀಯ ವಲಯಕ್ಕೆ ಸೀಮಿತವಾಗಿರುತ್ತದೆಯೇ ಹೊರತು ಅದರಿಂದ ಆರ್ಥಿಕ ವಿಮರ್ಶೆ ಸಾಧ್ಯವಾಗುವುದಿಲ್ಲ ಎಂಬ ವಾಸ್ತವವನ್ನು ಅರಿತುಕೊಳ್ಳುವಲ್ಲಿ ವಿಫಲವಾಗಿದೆ ಎಂದು ಟೀಕಿಸಿದ್ದಾರೆ.