ಇದು ನಮ್ಮ ವ್ಯವಸ್ಥೆಯ ವೈಫಲ್ಯ, ಇಡೀ ವಿಶ್ವವೇ ನೋಡುತ್ತಿದೆ: ನಿರ್ಭಯಾ ತಾಯಿ
ನವದೆಹಲಿ, ಮಾರ್ಚ್ 2: ನಿರ್ಭಯಾ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ವಿಳಂಬದ ಕುರಿತು ನಿರ್ಭಯಾ ತಾಯಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ತಾನೇ ನೀಡಿದ ತೀರ್ಪಿನ ಜಾರಿಗೆ ನ್ಯಾಯಾಲಯ ಏಕೆ ಹಿಂದೇಟು ಹಾಕುತ್ತಿದೆ ಎಂದು ನಿರ್ಭಯಾ ತಾಯಿ ಆಶಾದೇವಿ ಬೇಸರ ಹೊರಹಾಕಿದ್ದಾರೆ.
ಗಲ್ಲು ಶಿಕ್ಷೆಯನ್ನು ಪದೇ ಪದೇ ಮುಂದೂಡಲಾಗುತ್ತಿದೆ. ಇದು ನಮ್ಮ ವ್ಯವಸ್ಥೆಯ ವೈಫಲ್ಯವಲ್ಲದೆ ಮತ್ತಿನ್ನೇನು ಇಡೀ ವಿಶ್ವವೇ ಇದನ್ನು ವೀಕ್ಷಿಸುತ್ತಿದೆ ಎಂದು ಹೇಳಿದರು.
ಕಳೆದ ಕೆಲ ದಿನಗಳ ಹಿಂದೆ ದೆಹಲಿ ಕೋರ್ಟ್ ನೀಡಿದ್ದ ಡೆತ್ ವಾರೆಂಟ್ನಂತೆ ನಾಳೆ ಬೆಳಗ್ಗೆ 6 ಗಂಟೆಗೆ ನಾಲ್ವರೂ ಗಲ್ಲಿಗೇರಬೇಕಿತ್ತು. ಆದರೆ ಇಂದು (ಮಾ.2) ಮತ್ತೊಮ್ಮೆ ದೆಹಲಿ ಪಟಿಯಾಲಾ ನ್ಯಾಯಾಲಯ ಮರಣದಂಡನೆಯನ್ನು ಮುಂದೂಡಿದೆ.
ದೆಹಲಿ ಪಟಿಯಾಲಾ ಹೌಸ್ ಕೋರ್ಟ್ನ ಅಡಿಷನಲ್ ಸೆಷನ್ಸ್ ನ್ಯಾಯಾಧೀಶ ಧರ್ಮೇಂದ್ರ ರಾಣಾ ಅವರು ಪವನ್ ಕುಮಾರ್ ಅರ್ಜಿ ವಿಚಾರಣೆಯನ್ನು ಮುಂದೂಡುವ ಜತೆಗೆ, ಗಲ್ಲಿಗೇರಿಸುವ ದಿನವನ್ನೂ ಮುಂದೂಡಿದ್ದಾರೆ.
ನಿರ್ಭಯಾ ಅತ್ಯಾಚಾರಿಗಳ ಗಲ್ಲು ಶಿಕ್ಷೆಯ ಹಾವು ಏಣಿ ಆಟ: ಮತ್ತೆ ತಡೆ
ಮಾರ್ಚ್ 3ರ ಬೆಳಗ್ಗೆ 6 ಗಂಟೆಗೆ ನಾಲ್ವರು ಅತ್ಯಾಚಾರಿಗಳನ್ನು ಗಲ್ಲಿಗೇರಿಸುವ ಆದೇಶವಿದ್ದರೂ, ಅಂತಿಮ ಸಮಯದಲ್ಲಿ ಪಟಿಯಾಲಾ ಕೋರ್ಟ್ ಶಿಕ್ಷೆಯನ್ನು ಮುಂದೂಡಿದೆ. ಹೊಸ ಡೆತ್ ವಾರೆಂಟ್ ಜಾರಿಯಾಗುವವರೆಗೂ ಗಲ್ಲು ಶಿಕ್ಷೆ ಇಲ್ಲ ಎಂದು ಹೇಳಿದೆ.
ಅಪರಾಧಿ ಪವನ್ ಗುಪ್ತ ಸಲ್ಲಿಸಿದ್ದ ಕ್ಯುರೇಟಿವ್ ಅರ್ಜಿಯನ್ನು ಸುಪ್ರೀಂಕೋರ್ಟ್ ಇಂದು ಬೆಳಗ್ಗೆ ವಜಾಗೊಳಿಸಿತ್ತು. ಈ ಹಿಂದೆ ನ್ಯಾಯಾಲಯ ನೀಡಿದ್ದ ತೀರ್ಪಿನಲ್ಲಿ ಲೋಪದೋಷಗಳಿವೆ. ಹೀಗಾಗಿ ಮರಣದಂಡನೆಯನ್ನು ಜೀವಾವಧಿಗೆ ಬದಲಿಸುವಂತೆ ಕೋರಿ ಪವನ್ ಗುಪ್ತ ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದ.
ಸೋಮವಾರ ಬೆಳಗ್ಗೆ ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಮೂರ್ತಿ ಎನ್ ವಿ ರಮಣ ನೇತೃತ್ವದ ಐವರು ನ್ಯಾಯಮೂರ್ತಿಗಳ ಪೀಠ, ಕ್ಯುರೇಟಿವ್ ಅರ್ಜಿಯ ಜತೆಗೆ, ಮರಣದಂಡನೆಯನ್ನು ಮುಂದೂಡಬೇಕೆಂಬ ಮನವಿಯನ್ನೂ ಸಹ ತಿರಸ್ಕರಿಸಿತ್ತು. ಆದರೂ ಗಲ್ಲು ವಿಳಂಬವಾಗಿದೆ.