ನನ್ನ ಮಗಳನ್ನು ಕೊಂದವರನ್ನು ಯಾಕಿನ್ನೂ ಗಲ್ಲಿಗೇರಿಸಿಲ್ಲ? ನಿರ್ಭಯಾ ತಾಯಿ
ನವದೆಹಲಿ, ಡಿಸೆಂಬರ್ 16: "ನಿರ್ಭಯಾ ಪ್ರಕರಣಕ್ಕೆ ಇಂದಿಗೆ ಐದು ವರ್ಷವಾಗಿದೆ. ಆ ಮೃಗಗಳಿಂದ ಚಿತ್ರಹಿಂಸೆ ಅನುಭವಿಸಿದ ನನ್ನ ಮಗಳು ಅಸುನೀಗಿದ್ದಾಳೆ. ಆದರೆ ಐದು ವರ್ಷವಾದರೂ ಆಕೆಯನ್ನು ಅತ್ಯಾಚಾರ ಗೈದವರಿನ್ನೂ ಬದುಕಿದ್ದಾರೆ. ಇದು ವಿಷಾದವಲ್ಲ್ವೇ?" ಎಂದು ನಿರ್ಭಯಾ ತಾಯಿ ಆಶಾ ದೇವಿ ಪ್ರಶ್ನಿಸಿದ್ದಾರೆ.
ನಿರ್ಭಯಾ ಪ್ರಕರಣಕ್ಕೆ ಇಂದು ಐದು ವರ್ಷವಾಗಿರುವ ಹಿನ್ನಲೆಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, 'ಆ ಪ್ರಕರಣ ನಡೆದು ಐದು ವರ್ಷವಾದರೂ ನಾನು ಇಂದಿಗೂ ನ್ಯಾಯಕ್ಕಾಗಿ ಕಾಯುತ್ತಿದ್ದೇನೆ. ಆದರೆ ಆ ಅಪರಾಧಿಗಳಿನ್ನೂ ಬದುಕಿದ್ದಾರೆ. ಇಂಥ ಕೃತ್ಯ ಎಸಗಿದವರನ್ನು ತಕ್ಷಣವೇ ಶಿಕ್ಷಿಸುವಂಥ ಕಠಿಣ ಕಾನೂನಿನ ಅಗತ್ಯವಿದೆ' ಎಂದವರು ನುಡಿದರು.
"ನನ್ನ ಮಗಳಿಗೆ ಬಂದ ಕಷ್ಟ ಯಾರಿಗೂ ಬರಬಾರದು. ಆ ಘಟನೆಯ ನಂತರ ಬಸ್ಸುಗಳಲ್ಲಿ ಸಿಸಿಟಿವಿ ಅಳವಡಿಸುವುದಾಗಿ ಹೇಳಿದರು. ಆದರೆ ಎಲ್ಲಿವೆ ಸಿಸಿಟಿವಿ ಕ್ಯಾಮೆರಾ? ಎಲ್ಲಾ ಭರವಸೆಗಳೂ ಭರವಸೆಗಳಾಗಿಯೇ ಉಳಿದಿವೆ. ಭಾರತದಲ್ಲಿ ಇದು ಬಹುಶಃ ಬದಲಾವಣೆಯಾಗುವುದಿಲ್ಲ" ಎಂದು ವಿಷಾದ ವ್ಯಕ್ತಪಡಿಸಿದರು.
"ನಾನು ಯಾರ ಬಳಿಯೂ ಏನನ್ನೂ ಬೇಡುತ್ತಿಲ್ಲ. ನಮ್ಮ ಕುಟುಂಬಕ್ಕೆ ಪರಿಹಾರ ನೀಡಿ ಎಂದಾಗಲಿ, ನಮಗೆ ಕೆಲಸ ನೀಡಿ ಎಂದಾಗಲೀ ಕೇಳುತ್ತಿಲ್ಲ. ನನಗೆ ಬೇಕಿರುವುದು ನ್ಯಾಯವಷ್ಟೇ. ನನ್ನ ಮಗಳನ್ನು ಕೊಂದ ಪಾಪಿಗಳು ಆದಷ್ಟು ಬೇಗ ಗಲ್ಲಿಗೇರಬೇಕು ಅಷ್ಟೆ" ಎಂದು ಅವರು ಆಕ್ರೋಶದಿಂದ ನುಡಿದರು.
ಆ ದುಷ್ಟರನ್ನು ಜೀವಂತವಾಗಿ ಸುಡಬೇಕು: ನಿರ್ಭಯಾಳ ಕೊನೆ ಹೇಳಿಕೆ
ಡಿಸೆಂಬರ್ 16, 2012 ರಂದು ದೆಹಲಿಯ ಬಸ್ ವೊಂದರಲ್ಲಿ ಅರೆವೈದ್ಯಕೀಯ ವಿದ್ಯಾರ್ಥಿನಿಯ ಮೇಲೆ ಆರು ಧುರುಳರು ಅತ್ಯಾಚಾರ ಎಸಗಿ, ಆಕೆ ಚಿತ್ರಹಿಂಸೆ ನೀಡಿದ್ದರು. ನಂತರ ಡಿ.29 ರಂದು ಆಕೆ ಅಸುನೀಗಿದ್ದರು. ಮೇ 5, 2017 ರಂದು ಅತ್ಯಾಚಾರಿಗಳಿಗೆ ದೆಹಲಿ ಹೈಕೋರ್ಟ್ ಗಲ್ಲು ಶಿಕ್ಷೆ ವಿಧಿಸಿದೆಯಾದರೂ, ಅವರು ಸಲ್ಲಿಸಿರುವ ಕ್ಷಮಾದಾನ ಅರ್ಜಿಯ ವಿಚಾರಣೆ ಇನ್ನೂ ಸುಪ್ರೀಂ ಕೋರ್ಟಿನಲ್ಲಿ ನಡೆಯುತ್ತಿದೆ.