ಅಪರಾಧ ಮಾಡಿರುವುದು ಅವರು, ಶಿಕ್ಷೆ ಆಗುತ್ತಿರುವುದು ನಮಗೆ: ನಿರ್ಭಯಾ ತಾಯಿ ಆಕ್ರೋಶ
ನವದೆಹಲಿ, ಜನವರಿ 17: ಮರಣದಂಡನೆಯನ್ನು ವಿಳಂಬ ಮಾಡುವ ಸಲುವಾಗಿಯೇ ಅಪರಾಧಿಗಳು ಕಾನೂನು ತಂತ್ರಗಳನ್ನು ಅನುಸರಿಸುತ್ತಿದ್ದಾರೆ. ಈ ಪ್ರಕರಣದಲ್ಲಿ ಸರ್ಕಾರ ಮತ್ತು ನ್ಯಾಯಾಲಯ ಏನೂ ಮಾಡುತ್ತಿಲ್ಲ ಎಂದು ನಿರ್ಭಯಾ ತಾಯಿ ಆಶಾ ದೇವಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
2012ರ ಡಿಸೆಂಬರ್ನಲ್ಲಿ ದೆಹಲಿಯ ಬಸ್ವೊಂದರಲ್ಲಿ ಆರು ಮಂದಿ ದುಷ್ಕರ್ಮಿಗಳಿಂದ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿ ಬರ್ಬರವಾಗಿ ಹತ್ಯೆಯಾಗಿದ್ದ 23 ವರ್ಷದ ವೈದ್ಯಕೀಯ ವಿದ್ಯಾರ್ಥಿನಿ ನಿರ್ಭಯಾ ತಾಯಿ ವ್ಯವಸ್ಥೆಯ ವಿರುದ್ಧ ಆಕ್ರೋಶ ಹಂಚಿಕೊಂಡಿದ್ದಾರೆ.
ನಿರ್ಭಯ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ; ಕೋರ್ಟ್ ಮಹತ್ವದ ಸೂಚನೆ
ಪ್ರಕರಣದ ಅಪರಾಧಿಗಳಿಗೆ ಗಲ್ಲುಶಿಕ್ಷೆ ಖಾತರಿಯಾಗಿದ್ದರೂ ಅದರ ಜಾರಿಯಾಗುತ್ತಿಲ್ಲ. ಅಪರಾಧಿಗಳಲ್ಲಿ ಒಬ್ಬ ಈಗ ಕ್ಷಮಾದಾನದ ಅರ್ಜಿ ಸಲ್ಲಿಸಿದ್ದಾನೆ. ಇದರಿಂದ ಜ. 22ರಂದು ನಡೆಯಬೇಕಿದ್ದ ಗಲ್ಲುಶಿಕ್ಷೆ ಜಾರಿಯಾಗುವುದು ಅನುಮಾನವಾಗಿದೆ. ಆತನ ಅರ್ಜಿ ಇತ್ಯರ್ಥವಾಗುವವರೆಗೂ ಇತರೆ ಅಪರಾಧಿಗಳಿಗೂ ಗಲ್ಲು ಶಿಕ್ಷೆ ವಿಧಿಸುವಂತಿಲ್ಲ.
ನಾವು ಶಿಕ್ಷೆ ಅನುಭವಿಸುವಂತಾಗಿದೆ
ಇದೆಲ್ಲವೂ ಪ್ರಕರಣವನ್ನು ವಿಳಂಬ ಮಾಡುವ ತಂತ್ರ ಎಂದು ಆಶಾ ದೇವಿ ಆರೋಪಿಸಿದ್ದಾರೆ. ದಿನವೂ ಒಂದು ಕೋರ್ಟ್ನಿಂದ ಮತ್ತೊಂದಕ್ಕೆ ನಮ್ಮನ್ನು ಅಲೆಯುವಂತೆ ಮಾಡಲಾಗುತ್ತಿದೆ. ಇದೊಂದು ರೀತಿ ಯಾರೋ ಅಪರಾಧ ಎಸಗಿ ನಾವು ಶಿಕ್ಷೆ ಅನುಭವಿಸುವಂತಾಗಿದೆ. ಈಗ ಮುಕೇಶ್ ಮಾತ್ರ. ಇನ್ನೂ ಮೂವರು ಅಪರಾಧಿಗಳಿದ್ದಾರೆ. ಯಾರೂ ಅವರ ಬಗ್ಗೆ ಮಾತನಾಡುತ್ತಿಲ್ಲ. ಇನ್ನೂ ಮೂವರು ಅಪರಾಧಿಗಳು ಅಲ್ಲಿದ್ದಾರೆ ಎಂದು ಸರ್ಕಾರದ ವಕೀಲರು ನ್ಯಾಯಾಲಯದಲ್ಲಿ ಹೇಳಿಯೇ ಇಲ್ಲ. ಅವರೆಲ್ಲರಿಗೂ ಸರ್ಕಾರ ಮತ್ತು ನ್ಯಾಯಾಲಯ ಸಹಾಯ ಮಾಡುತ್ತಿದೆ ಎಂದು ಕಿಡಿಕಾರಿದ್ದಾರೆ.
ಕಾನೂನು ಅಪರಾಧಿಗಳ ಪರ
ಅಪರಾಧಿಗಳು ಏನೇ ಕಾನೂನಾತ್ಮಕ ತಂತ್ರಗಳನ್ನು ಅನುಸರಿಸಿದರೂ ಅವರು ನೇಣುಕುಣಿಕೆಯಿಂದ ಪಾರಾಗಲು ಸಾಧ್ಯವೇ ಇಲ್ಲ ಎಂದು ನಿರ್ಭಯಾ ತಂದೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 'ಮುಂದಿನ ನಡೆಯ ಬಗ್ಗೆ ನ್ಯಾಯಾಲಯ ಶುಕ್ರವಾರ ತೀರ್ಮಾನಿಸಲಿದೆ. ನಾವು ಭರವಸೆ ಕಳೆದುಕೊಂಡಿಲ್ಲ. ಸಂತ್ರಸ್ತರ ಕುಟುಂಬದ ಪರ ಯಾವುದೇ ಕಾನೂನು ಇಲ್ಲ. ಆದರೆ ಅಪರಾಧಿಗಳಿಗೆ ಅನೇಕ ಕಾನೂನು ಸೌಲಭ್ಯಗಳಿವೆ. ಇದರಿಂದಾಗಿ ಸಮಸ್ಯೆಗಳು ಹುಟ್ಟಿಕೊಳ್ಳುತ್ತಲೇ ಇವೆ' ಎಂದು ಅವರು ಹೇಳಿದ್ದಾರೆ.
ನಿರ್ಭಯಾ ಪ್ರಕರಣ: ಅಪರಾಧಿಗಳ ಗಲ್ಲು ಶಿಕ್ಷೆ ಜಾರಿ ವಿಳಂಬ ಏಕೆ?
ತಿರಸ್ಕಾರಕ್ಕೆ ರಾಷ್ಟ್ರಪತಿಗೆ ಶಿಫಾರಸು
ನಿರ್ಭಯಾ ಅತ್ಯಾಚಾರ ಪ್ರಕರಣದ ಅಪರಾಧಿಗಳಲ್ಲಿ ಒಬ್ಬನಾದ ಮುಕೇಶ್ ಸಲ್ಲಿಸಿರುವ ಕ್ಷಮಾದಾನದ ಅರ್ಜಿಯಲ್ಲಿ ದೆಹಲಿ ಸರ್ಕಾರ ಮತ್ತು ಲೆಫ್ಟಿನೆಂಟ್ ಗವರ್ನರ್ ತಿರಸ್ಕರಿಸಿದ ಬಳಿಕ ಗೃಹ ಸಚಿವಾಲಯ ರಾಷ್ಟ್ರಪತಿಗಳಿಗೆ ರವಾನಿಸಿದೆ. ಈ ಅರ್ಜಿಯನ್ನು ತಿರಸ್ಕರಿಸುವಂತೆ ರಾಷ್ಟ್ರಪತಿ ಅವರಿಗೂ ಸಚಿವಾಲಯ ಶಿಫಾರಸು ಮಾಡಿದೆ ಎನ್ನಲಾಗಿದೆ.
ಮೂರನೇ ಸಂಖ್ಯೆಯ ಜೈಲಿಗೆ ವರ್ಗಾವಣೆ
ಪ್ರಕರಣದ ಎಲ್ಲಾ ನಾಲ್ವರು ಅಪರಾಧಿಗಳನ್ನು ತಿಹಾರ್ ಕಾರಾಗೃಹ ಸಂಕೀರ್ಣದ ಮೂರನೇ ಸಂಖ್ಯೆಯ ಜೈಲಿಗೆ ವರ್ಗಾಯಿಸಲಾಗಿದೆ. ಈ ಜೈಲಿನಲ್ಲಿಯೇ ಅಪರಾಧಿಗಳ ಗಲ್ಲುಶಿಕ್ಷೆ ಪ್ರಕ್ರಿಯೆ ನಡೆಯಲಿದೆ ಎಂದು ಜೈಲಿನ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಇಲ್ಲಿಯವರೆಗೂ ಅಪರಾಧಿ ವಿನಯ್ ಶರ್ಮಾನನ್ನು ನಾಲ್ಕನೇ ಸಂಖ್ಯೆಯ ಜೈಲಿನಲ್ಲಿ ಇರಿಸಿದ್ದರೆ, ಅಕ್ಷಯ್, ಮುಕೇಶ್ ಮತ್ತು ಪವನ್ರನ್ನು ಎರಡನೆಯ ಸಂಖ್ಯೆಯ ಜೈಲಿನಲ್ಲಿ ಇರಿಸಲಾಗಿತ್ತು.
ಕೇಜ್ರಿವಾಲ್ ಸರ್ಕಾರದ ನಿರ್ಲಕ್ಷ್ಯದಿಂದ ನಿರ್ಭಯಾ ಅಪರಾಧಿಗಳ ಗಲ್ಲು ವಿಳಂಬ: ಜಾವಡೇಕರ್