ನಿರ್ಭಯಾ ಕೇಸ್: ತಿಹಾರ್ ಜೈಲಿನಿಂದ ಹ್ಯಾಂಗ್ಮನ್ ಪವನ್ ಗೆ ಬುಲಾವ್
ಮೀರತ್(ಉತ್ತರಪ್ರದೇಶ), ಜನವರಿ 30: ನಿರ್ಭಯಾ ಸಮೂಹಿಕ ಅತ್ಯಾಚಾರ ಪ್ರಕರಣದ ಅಪರಾಧಿಗಳನ್ನು ಗಲ್ಲಿಗೇರಿಸಲಿರುವ ಹ್ಯಾಂಗ್ ಮ್ಯಾನ್ ಪವನ್ ಜಲ್ಲಾದ್ ಗೆ ತಿಹಾರ್ ಜೈಲಿಗೆ ಬರುವಂತೆ ಅಧಿಕೃತವಾಗಿ ಸೂಚನೆ ಬಂದಿದೆ. ಸದ್ಯ ಮೀರತ್ ಜೈಲಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ನೇಣಿಗೇರಿಸುವ ಪ್ರಕ್ರಿಯೆ ಹೊಸದೇನಲ್ಲ, ಆದರೆ ಕುಣಿಕೆ ಮತ್ತು ನೇಣಿಗೇರಿಸುವ ಸ್ಥಳ ಪರಿಶೀಲಿಸಬೇಕು. ಅಪರಾಧಿಗಳ ದೇಹದ ಅಳತೆಯನ್ನು ನೋಡಬೇಕು, ತಿಹಾರ್ ಜೈಲಿನ ಅಧಿಕಾರಿಗಳಿಂದ ಸೂಚನೆ ಬಂದ ತಕ್ಷಣ ಅಲ್ಲಿಗೆ ತೆರಳುತ್ತೇನೆ ಎಂದು ಪವನ್ ಹೇಳಿದ್ದಾರೆ.
ನಿರ್ಭಯಾ ಕೇಸ್ : ಹ್ಯಾಂಗ್ ಮ್ಯಾನ್ ಪವನ್ ಸಂಭಾವನೆ ಮೊತ್ತ ಬಹಿರಂಗ
ದೆಹಲಿಯ ಪಟಿಯಾಲ ಹೈಕೋರ್ಟ್ ಡೆತ್ ವಾರೆಂಟ್ ಜಾರಿಗೊಳಿಸಿದ್ದು, ನಿರ್ಭಯಾ ಮೇಲಿನ ಅತ್ಯಾಚಾರ, ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಅಪರಾಧಿಗಳನ್ನು ಜನವರಿ 22 ರಂದು ಬೆಳಗ್ಗೆ 7 ಗಂಟೆಗೆ ತಿಹಾರ್ ಜೈಲಿನಲ್ಲಿ ಗಲ್ಲಿಗೇರಿಸಲು ಆದೇಶ ನೀಡಲಾಗಿತ್ತು. ಆದರೆ, ಕೆಲವು ಅಪರಾಧಿಗಳು ಕ್ಷಮಾದಾನ ಕೋರಿ ಪುನರ್ ಅರ್ಜಿ ಹಾಕಿದ್ದರಿಂದ ಗಲ್ಲಿಗೇರಿಸುವ ಪ್ರಕ್ರಿಯೆ ವಿಳಂಬವಾಗಿದೆ. ಈಗ ಫೆಬ್ರವರಿ 01ರಂದು ಬೆಳಗ್ಗೆ 7 ಗಂಟೆಗೆ ಗಲ್ಲಿಗೇರಿಸಲು ಸಮಯ ನಿಗದಿಯಾಗಿದೆ.
ಅಪರಾಧಿಗಳಿಗೆ ಡೆತ್ ವಾರೆಂಟ್ ಜಾರಿ
ಹೆಚ್ಚುವರಿ ಸೆಷನ್ಸ್ ಜಡ್ಜ್ ಸತೀಶ್ ಕುಮಾರ್ ಅರೋರಾ ಅವರು ತಿಹಾರ್ ಜೈಲಿನ ಮುಖ್ಯ ಅಧಿಕಾರಿಗೆ ಬ್ಲ್ಯಾಕ್ ವಾರೆಂಟ್ ಎಂದು ಕೂಡಾ ಕರೆಯಲ್ಪಡುವ ಡೆತ್ ವಾರೆಂಟ್ ಪ್ರತಿ ಕಳಿಸಿದ್ದಾರೆ. ನಿರ್ಭಯಾ ಪ್ರಕರಣದ ಅಪರಾಧಿಗಳಾದ ಮುಕೇಶ್ (32), ಪವನ್ ಗುಪ್ತಾ(25), ವಿನಯ್ ಶರ್ಮ (26) ಹಾಗೂ ಅಕ್ಷಯ್ ಕುಮಾರ್ ಸಿಂಗ್ (31) ಅವರ ವಿರುದ್ಧ ಡೆತ್ ವಾರೆಂಟ್ ಜಾರಿಯಾಗಿದೆ.
2012ರ ಡಿಸೆಂಬರ್ 16ರ ಕರಾಳ ಘಟನೆ
23 ವರ್ಷ ವಯಸ್ಸಿನ ಪ್ಯಾರಾಮೆಡಿಕಲ್ ವಿದ್ಯಾರ್ಥಿನಿ ಮೇಲೆ 2012ರ ಡಿಸೆಂಬರ್ 16 ರಾತ್ರಿ ವೇಳೆ ಸಾಮೂಹಿಕ ಅತ್ಯಾಚಾರ ನಡೆದಿತ್ತು. ಅತಿ ಕ್ರೂರವಾಗಿ ನಡೆದ ಈ ಅತ್ಯಾಚಾರದಿಂದ ನಿತ್ರಾಣವಾಗಿ ರಸ್ತೆಯಲ್ಲಿ ಬಿದ್ದಿದ್ದ ನಿರ್ಭಯಾಗೆ ಹೆಚ್ಚಿನ ವೈದ್ಯಕೀಯ ನೆರವು ಸಿಕ್ಕಿ, ಸಿಂಗಪುರದ ಮೌಂಟ್ ಎಲಿಜಬೆತ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಡಿಸೆಂಬರ್ 29, 2012ರಂದು ಆಕೆ ಕೊನೆಯುಸಿರೆಳೆದಿದ್ದರು.
ನಾಲ್ವರಿಗೆ ನೇಣು ಕುಣಿಗೆ ಸಿದ್ಧಪಡಿಸಬೇಕಿದೆ
ಈ ಪ್ರಕರಣದಲ್ಲಿ ಒಟ್ಟು 6 ಮಂದಿಯನ್ನು ಆರೋಪಿಯನ್ನು ಗುರುತಿಸಿ ಬಂಧಿಸಲಾಗಿತ್ತು. ಆರೋಪಿಗಳ ಪೈಕಿ ಒಬ್ಬ ಜೈಲಿನಲ್ಲೇ ಆತ್ಯಹತ್ಯೆ ಮಾಡಿಕೊಂಡಿದ್ದಾನೆ. ಮತ್ತೊಬ್ಬ ಬಾಲಾಪರಾಧಿಯಾಗಿ ಮೂರು ವರ್ಷಗಳ ಕಾಲ ಶಿಕ್ಷೆ ಅನುಭವಿಸಿದ್ದಾನೆ. ಈಗ ಮಿಕ್ಕ ನಾಲ್ವರು ಅಪರಾಧಿಗಳಿಗೆ ನೇಣು ಕುಣಿಕೆ ಸಿದ್ಧವಾಗಬೇಕಿದೆ.
ದೆಹಲಿ ಹೈಕೋರ್ಟಿನ ಡೆತ್ ವಾರೆಂಟ್ ಆಧಾರದ ಮೇಲೆ ತಿಹಾರ್ ಜೈಲಿನಿಂದ ಕರೆ ಬಂದಾಗ ಪವನ್ ಅಲ್ಲಿಗೆ ತೆರಳಲಿದ್ದಾರೆ" ಎಂದು ಮೀರತ್ ಜೈಲಿನ ಎಸ್ಪಿ ವಿ.ಪಿ ಪಾಂಡೆ ಪ್ರತಿಕ್ರಿಯಿಸಿದ್ದಾರೆ.
ಗಲ್ಲಿಗೇರಿಸಿರುವ ಪ್ರಕಿಯೆ ವಿಳಂಬವೇಕೆ?
ಡಿಸೆಂಬರ್ ತಿಂಗಳಲ್ಲಿ ಪವನ್ ಜಲ್ಲಾದ್ ಗೆ ಸಿದ್ಧರಾಗಿರುವಂತೆ ತಿಹಾರ್ ಜೈಲಿನಿಂದ ಸೂಚನೆ ಬಂದಿತ್ತು. ಆದರೆ, ಅಪರಾಧಿಗಳು ಒಬ್ಬೊಬ್ಬರಾಗಿ ಕ್ಷಮಾದಾನ ಅರ್ಜಿ ಸಲ್ಲಿಸುತ್ತಿದ್ದಾರೆ. ದೆಹಲಿ ನಿರ್ಭಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಅಪರಾಧಿ ವಿನಯ್ ಶರ್ಮಾ ಈಗಾಗಲೇ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಕ್ಷಮಾದಾನ ಅರ್ಜಿ ಸಲ್ಲಿಸಿದ್ದಾನೆ. ದೆಹಲಿ ಸರ್ಕಾರ ಮತ್ತು ಗೃಹ ಸಚಿವಾಲಯವು ಕಳುಹಿಸುವ ಶಿಫಾರಸ್ಸಿನ ನಂತರ ರಾಷ್ಟ್ರಪತಿ ತಮ್ಮ ತೀರ್ಮಾನ ತಿಳಿಸಲಿದ್ದಾರೆ. ಒಂದು ವೇಳೆ ರಾಷ್ಟ್ರಪತಿಗಳು ಕ್ಷಮಾದಾನ ಅರ್ಜಿ ತಿರಸ್ಕರಿಸಿದರೆ ಅದನ್ನು ಪ್ರಶ್ನಿಸಿ ವಿನಯ್ ಶರ್ಮಾ ಮತ್ತೊಮ್ಮೆ ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸುವ ಅವಕಾಶವಿದೆ. ಈ ಮೊದಲು ವಿನಯ್ ಶರ್ಮಾ ಸಲ್ಲಿಸಿದ್ದ ಕ್ಯುರೇಟಿವ್ ಅರ್ಜಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿತ್ತು.