ನಿರ್ಭಯ ಅತ್ಯಾಚಾರಿಗಳಿಗೆ ಗಲ್ಲು; ಮತ್ತೆ ಕಾನೂನು ಅಡ್ಡಿಯಾಗಲಿದೆ?
ನವದೆಹಲಿ, ಮಾರ್ಚ್ 06 : ನಿರ್ಭಯ ಅತ್ಯಾಚಾರ, ಕೊಲೆ ಪ್ರಕರಣದ ಅಪರಾಧಿಗಳಿಗೆ ಗಲ್ಲು ಶಿಕ್ಷೆ ಯಾವಾಗ?. ಮಾರ್ಚ್ 20ರಂದು ಗಲ್ಲು ಶಿಕ್ಷೆ ಜಾರಿಗೊಳಿಸಲು ಡೆತ್ ವಾರೆಂಟ್ ಜಾರಿಯಾಗಿದೆ. ಇದು ಈ ಪ್ರಕರಣದಲ್ಲಿ ಜಾರಿಗೊಂಡಿರುವ 4ನೇ ಡೆತ್ ವಾರೆಂಟ್ ಆಗಿದೆ.
ಬುಧವಾರ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಪವನ್ ಗುಪ್ತಾ ಸಲ್ಲಿಸಿದ್ದ ಕ್ಷಮಾದಾನ ಅರ್ಜಿ ತಿರಸ್ಕರಿಸಿದ್ದರು. ಗುರುವಾರ ದೆಹಲಿ ನ್ಯಾಯಾಲಯ ಎಲ್ಲಾ ಅಪರಾಧಿಗಳನ್ನು ಗಲ್ಲಿಗೇರಿಸಲು ಹೊಸ ಡೆತ್ ವಾರೆಂಟ್ ಜಾರಿಗೊಳಿಸಿದೆ.
ಇದು ನಮ್ಮ ವ್ಯವಸ್ಥೆಯ ವೈಫಲ್ಯ, ಇಡೀ ವಿಶ್ವವೇ ನೋಡುತ್ತಿದೆ: ನಿರ್ಭಯಾ ತಾಯಿ
ಅಪರಾಧಿಯ ಕ್ಷಮಾದಾನ ಅರ್ಜಿ ವಜಾಗೊಂಡ ಬಳಿಕ ಗಲ್ಲಿಗೇರಿಸುವ ಮೊದಲು ಆತನಿಗೆ 14 ದಿನದ ಕಾಲಾವಕಾಶ ನೀಡಬೇಕು. ಈಗಾಗಲೇ ಮೂರು ಬಾರಿ ವಿವಿಧ ಕಾನೂನಿನ ಅಡಚಣೆಯಿಂದಾಗಿ ಡೆತ್ ವಾರೆಂಟ್ ರದ್ದುಗೊಂಡಿತ್ತು.
ಬ್ರೇಕಿಂಗ್; ಮಾರ್ಚ್ 20ರಂದು ನಿರ್ಭಯ ಅತ್ಯಾಚಾರಿಗಳಿಗೆ ಗಲ್ಲು
ಒಂದೇ ಪ್ರಕರಣದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾದವರನ್ನು ಪ್ರತ್ಯೇಕವಾಗಿ ಗಲ್ಲಿಗೆ ಹಾಕುವಂತಿಲ್ಲ ಎಂಬ ಕಾನೂನು ಇದೆ. ಇದನ್ನು ಎಲ್ಲಾ ಅಪರಾಧಿಗಳು ಉಪಯೋಗಿಸಿಕೊಳ್ಳುತ್ತಿದ್ದು, ಗಲ್ಲು ಶಿಕ್ಷೆಯನ್ನು ಮುಂದೂಡಲು ಉಪಯೋಗಿಸಿಕೊಳ್ಳುತ್ತಿದ್ದಾರೆ.
ಮತ್ತೆ ಸುಪ್ರೀಂಕೋರ್ಟ್ ಮೆಟ್ಟಿಲೇರಿದ ನಿರ್ಭಯಾ ಅಪರಾಧಿ
ಗಲ್ಲು ಶಿಕ್ಷೆಗೆ ಗುರಿಯಾದವರಿಗೆ ಹಲವು ಆಯ್ಕೆ
ನಮ್ಮ ದೇಶದ ಕಾನೂನಿನಲ್ಲಿ ಗಲ್ಲು ಶಿಕ್ಷೆಗೆ ಗುರಿಯಾದವರಿಗೆ ಹಲವು ಆಯ್ಕೆಗಳಿವೆ. ಕೆಳ ಹಂತದ ನ್ಯಾಯಾಲಯ ಗಲ್ಲು ಶಿಕ್ಷೆ ಜಾರಿಗೊಳಿಸಿದರೆ ಹೈಕೋರ್ಟ್ ಮೊರೆ ಹೋಗಬಹುದು. ಹೈಕೋರ್ಟ್ ಆದೇಶವನ್ನು ಎತ್ತಿಹಿಡಿದರೆ ಸುಪ್ರೀಂಕೋರ್ಟ್ಗೆ ಮೇಲ್ಮನವಿ ಸಲ್ಲಿಸಬಹುದು. ಸುಪ್ರೀಂಕೋರ್ಟ್ ಅರ್ಜಿಯನ್ನು ತಿರಸ್ಕರಿಸಿದ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಬಹುದು. ಪುನರ್ ಪರಿಶೀಲನಾ ಅರ್ಜಿಯೂ ವಜಾಗೊಂಡರೆ ಕ್ಯುರೆಟೀವ್ ಅರ್ಜಿ ಸಲ್ಲಿಸಬಹುದು.
ರಾಷ್ಟ್ರಪತಿಗಳ ಮುಂದೆ ಅರ್ಜಿ
ಸುಪ್ರೀಂಕೋರ್ಟ್ ಕ್ಯುರೆಟೀವ್ ಅರ್ಜಿ ವಜಾಗೊಳಿಸಿದರೆ ರಾಷ್ಟ್ರಪತಿಗಳ ಮುಂದೆ ಕ್ಷಮಾದಾನ ಅರ್ಜಿ ಸಲ್ಲಿಸಬಹುದು. ಕೇಂದ್ರ ಗೃಹ ಇಲಾಖೆಯ ಸಲಹೆಯಂತೆ ರಾಷ್ಟ್ರಪತಿಗಳು ಕ್ಷಮಾದಾನ ಅರ್ಜಿಯ ಬಗ್ಗೆ ತೀರ್ಮಾನ ಕೈಗೊಳ್ಳಲಿದ್ದಾರೆ. ಆದರೆ, ಗೃಹ ಸಚಿವಾಲಯ ನೀಡಿದ ಸಲಹೆಯನ್ನು ರಾಷ್ಟ್ರಪತಿಗಳು ಒಪ್ಪಬೇಕು ಎಂಬ ನಿಯಮವೇನಿಲ್ಲ.
ಇನ್ನೂ ಅರ್ಜಿ ಬಾಕಿ ಇದೆ
ರಾಷ್ಟ್ರಪತಿಗಳು ಕ್ಷಮಾದಾನ ಅರ್ಜಿ ತಿರಸ್ಕಾರ ಮಾಡಿದರೆ ಅದನ್ನು ಸುಪ್ರೀಂಕೋರ್ಟ್ನಲ್ಲಿ ರಿಟ್ ಅರ್ಜಿಯ ರೂಪದಲ್ಲಿ ಪ್ರಶ್ನೆ ಮಾಡುವ ಅವಕಾಶ ನೀಡಲಾಗಿದೆ. ನಿರ್ಭಯ ಪ್ರಕರಣದ ಅಪರಾಧಿಗಳಾದ ಮುಕೇಶ್ ಮತ್ತು ವಿನಯ್ ಇನ್ನೂ ರಾಷ್ಟ್ರಪತಿಗಳು ಕ್ಷಮಾದಾನ ಅರ್ಜಿ ತಿರಸ್ಕಾರ ಮಾಡಿರುವುದನ್ನು ಸುಪ್ರೀಂನಲ್ಲಿ ಪ್ರಶ್ನೆ ಮಾಡಿಲ್ಲ.
ಮುಕೇಶ್ ಕುಮಾರ್ ಸಿಂಗ್
ನಿರ್ಭಯ ಪ್ರಕರಣದ ಅಪರಾಧಿ 32 ವರ್ಷದ ಮುಕೇಶ್ ಸಿಂಗ್ 2017ರ ಡಿಸೆಂಬರ್ 6ರಂದು ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಿದ್ದ. ಜನವರಿ 9, 2020ರಲ್ಲಿ ಕ್ಯುರೆಟೀವ್ ಅರ್ಜಿಯನ್ನು ಸಲ್ಲಿಸಿದ್ದ. ಜನವರಿ 17, 2020ರಲ್ಲಿ ಮುಕೇಶ್ ಕ್ಷಮಾದಾನ ಅರ್ಜಿ ವಜಾಗೊಂಡಿತ್ತು. ಇದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಜನವರಿ 29, 2020ರಲ್ಲಿ ಸುಪ್ರೀಂಕೋರ್ಟ್ ವಜಾಗೊಳಿಸಿದೆ.
ವಿನಯ್ ಕುಮಾರ್ ಶರ್ಮಾ
ಜುಲೈ 9, 2018ರಲ್ಲಿ ವಿನಯ್ ಕುಮಾರ್ ಶರ್ಮಾ ಪುನರ್ ಪರಿಶೀಲನಾ ಅರ್ಜಿಯನ್ನು ಸಲ್ಲಿಸಿದ್ದ. ಕ್ಯುರೆಟೀವ್ ಅರ್ಜಿಯನ್ನು ಜನವರಿ 14, 2020ರಲ್ಲಿ ಸಲ್ಲಿಕೆ ಮಾಡಿದ್ದ. ಜನವರಿ 2, 2020ರಲ್ಲಿ ಕ್ಷಮಾದಾನ ಅರ್ಜಿ ವಜಾಗೊಂಡಿತ್ತು. ಇದನ್ನು ಪ್ರಶ್ನಿಸಿ ಸಲ್ಲಿಸಿದ್ದ ರಿಟ್ ಅರ್ಜಿ ಫೆಬ್ರವರಿ 14, 2020ರಲ್ಲಿ ವಜಾಗೊಂಡಿದೆ.
ಇಬ್ಬರು ಅರ್ಜಿ ಹಾಕಿಲ್ಲ
ಅಪರಾಧಿಗಳಾದ ಪವನ್ ಮತ್ತು ಅಕ್ಷಯ್ ಇನ್ನೂ ಕ್ಷಮಾದಾನ ಅರ್ಜಿ ವಜಾಗೊಂಡಿದ್ದನ್ನು ಪ್ರಶ್ನಿಸಿ ರಿಟ್ ಅರ್ಜಿ ಸಲ್ಲಿಸಿಲ್ಲ. ಪವನ್ 2017ರ ಡಿಸೆಂಬರ್ 15ರಂದು ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಿದ್ದ. ಈತನ ಕ್ಯುರೆಟೀವ್ ಅರ್ಜಿ 2020ರ ಫೆಬ್ರವರಿ 29 ಮತ್ತು ಕ್ಷಮಾದಾನ ಅರ್ಜಿ ಮಾರ್ಚ್ 2, 2020ರಂದು ತಿರಸ್ಕಾರವಾಗಿದೆ.
ಅಕ್ಷಯ್ 2019ರ ಡಿಸೆಂಬರ್ 10ರಂದು ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಿದ್ದರು. ಜನವರಿ 28, 2020ರಂದು ಕ್ಯುರೆಟೀವ್ ಅರ್ಜಿ ಹಾಕಿದ್ದರು. ಫೆಬ್ರವರಿ 5, 2020ರಂದು ಕ್ಷಮಾದಾನ ಅರ್ಜಿಯೂ ವಜಾಗೊಂಡಿತ್ತು. ಇಬ್ಬರೂ ಇನ್ನೂ ರಿಟ್ ಅರ್ಜಿ ಹಾಕಿಲ್ಲ.
ಸುಪ್ರೀಂಕೋರ್ಟ್ ತಕ್ಷಣ ತಿರಸ್ಕರಿಸಬಹುದು
ಪವನ್ ಮತ್ತು ಅಕ್ಷಯ್ ಕ್ಷಮಾದಾನ ಅರ್ಜಿ ವಜಾಗೊಂಡಿದ್ದನ್ನು ಪ್ರಶ್ನಿಸಿ ರಿಟ್ ಅರ್ಜಿ ಸಲ್ಲಿಸಿಲ್ಲ. ಅರ್ಜಿ ಸಲ್ಲಿಕೆಯಾದ ತಕ್ಷಣ ಅದನ್ನು ತಿರಸ್ಕಾರ ಮಾಡುವ ಅಧಿಕಾರ ಸುಪ್ರೀಂಕೋರ್ಟ್ಗೆ ಇದೆ. ಮುಕೇಶ್ ಮತ್ತು ವಿನಯ್ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಸುಪ್ರೀಂಕೋರ್ಟ್ ಒಂದೇ ದಿನದಲ್ಲಿ ತಿರಸ್ಕಾರ ಮಾಡಿದ್ದನ್ನು ನೆನಪಿಸಿಕೊಳ್ಳಬಹುದು.