ನಿರ್ಭಯ ಪ್ರಕರಣ; ಗಲ್ಲು ತಪ್ಪಿಸಿಕೊಳ್ಳಲು ಅಪರಾಧಿಗಳ ಪ್ರಯತ್ನ
ನವದೆಹಲಿ, ಮಾರ್ಚ್ 01: ನಿರ್ಭಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಅಪರಾಧಿ ಅಕ್ಷಯ್ ಕುಮಾರ್ ಸಿಂಗ್ ರಾಷ್ಟ್ರಪತಿಗಳ ಮುಂದೆ ಮತ್ತೊಮ್ಮೆ ಕ್ಷಮಾದಾನ ಅರ್ಜಿ ಸಲ್ಲಿಸಿದ್ದಾನೆ. ಮಾರ್ಚ್ 3ರಂದು ಅಪರಾಧಿಗಳಿಗೆ ಗಲ್ಲು ಶಿಕ್ಷೆ ವಿಧಿಸಲು ಡೆತ್ ವಾರೆಂಟ್ ಜಾರಿಗೊಳಿಸಲಾಗಿದೆ.
ತಿಹಾರ್ ಜೈಲಿನಲ್ಲಿರುವ 31 ವರ್ಷದ ಅಕ್ಷಯ್ ಕುಮಾರ್ ಸಿಂಗ್ ಫೆಬ್ರವರಿ 1ರಂದು ರಾಷ್ಟ್ರಪತಿಗಳಿಗೆ ಕ್ಷಮಾದಾನ ಅರ್ಜಿ ಸಲ್ಲಿಸಿದ್ದ. ಫೆಬ್ರವರಿ 5ರಂದು ರಾಷ್ಟ್ರಪತಿಗಳು ಅದನ್ನು ತಿರಸ್ಕರಿಸಿದ್ದರು. ಈಗ 2ನೇ ಬಾರಿಗೆ ಅರ್ಜಿ ಸಲ್ಲಿಸಿದ್ದಾನೆ.
ಕ್ಷಮಾದಾನ ಅರ್ಜಿ ಸಲ್ಲಿಸಿದ ಅಕ್ಷಯ್
ದೆಹಲಿ ನ್ಯಾಯಾಲಯಕ್ಕೂ ಅಕ್ಷಯ್ ಕುಮಾರ್ ಸಿಂಗ್ ಅರ್ಜಿ ಸಲ್ಲಿಸಿದ್ದು ತನ್ನ ವಿರುದ್ಧ ಹೊರಡಿಸಿರುವ ಡೆತ್ ವಾರೆಂಟ್ಗೆ ತಡೆ ನೀಡಬೇಕು ಎಂದು ಮನವಿ ಮಾಡಿದ್ದಾನೆ. ಇದರಿಂದಾಗಿ ಮಾರ್ಚ್ 3ರಂದು ಅಪರಾಧಿಗಳನ್ನು ಗಲ್ಲಿಗೆ ಹಾಕುವ ಪ್ರಕ್ರಿಯೆ ನಡೆಯುವುದು ಅನುಮಾನವಾಗಿದೆ.
ಮಾ.03ರಂದು ನಿರ್ಭಯಾ ಅತ್ಯಾಚಾರ ದೋಷಿಗಳ ಗಲ್ಲುಶಿಕ್ಷೆ ಅನುಮಾನ
ಮೊದಲ ಬಾರಿ ತಿರಸ್ಕಾರವಾಗಿರುವ ಕ್ಷಮಾದಾನ ಅರ್ಜಿಯಲ್ಲಿ ಎಲ್ಲಾ ಅಂಶಗಳನ್ನು ಉಲ್ಲೇಖಿಸಿಲ್ಲ ಎಂದು ಅಕ್ಷಯ್ 2ನೇ ಅರ್ಜಿಯಲ್ಲಿ ಹೇಳಿದ್ದಾನೆ. ಎಲ್ಲಾ ಅಪರಾಧಿಗಳು ಸಲ್ಲಿಸಿದ್ದ ಕ್ಷಮಾದಾನ ಅರ್ಜಿಯನ್ನು ರಾಷ್ಟ್ರಪತಿಗಳು ಈಗಾಗಲೇ ತಿರಸ್ಕರಿಸಿದ್ದಾರೆ. ಅಕ್ಷಯ್ ಎರಡನೇ ಬಾರಿ ಕ್ಷಮಾದಾನ ಕೋರಿದ್ದಾನೆ.
ಉನ್ನತ ಚಿಕಿತ್ಸೆ: ನಿರ್ಭಯಾ ಆರೋಪಿ ವಿನಯ್ ಶರ್ಮಾ ಅರ್ಜಿ ವಜಾ
ದೆಹಲಿ ಹೈಕೋರ್ಟ್ಗೆ ಅರ್ಜಿ
ನಿರ್ಭಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಅಪರಾಧಿಗಳಾದ ಪವನ್ ಗುಪ್ತಾ ಮತ್ತು ಅಕ್ಷಯ್ ಕುಮಾರ್ ಸಿಂಗ್ ದೆಹಲಿ ಹೈಕೋರ್ಟ್ಗೆ ಒಂದು ಅರ್ಜಿ ಸಲ್ಲಿಸಿದ್ದಾರೆ. ಮಾರ್ಚ್ 3ರಂದು ಗಲ್ಲು ಶಿಕ್ಷೆ ಜಾರಿಗೊಳಿಸಲು ನೀಡಿರುವ ಡೆತ್ ವಾರೆಂಟ್ಗೆ ತಡೆ ನೀಡಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಿದ್ದಾರೆ.
ಅರ್ಜಿಯಲ್ಲಿನ ಉಲ್ಲೇಖವೇನು?
ಪವನ್ ಗುಪ್ತಾ ಸುಪ್ರೀಂಕೋರ್ಟ್ನಲ್ಲಿ ನನ್ನ ಕ್ಯುರೆಟೀವ್ ಅರ್ಜಿ ಬಾಕಿ ಇದೆ ಆದ್ದರಿಂದ ಡೆತ್ ವಾರೆಂಟ್ಗೆ ತಡೆ ನೀಡಬೇಕು ಎಂದು ಉಲ್ಲೇಖಿಸಿದ್ದಾರೆ. ಇನ್ನೊಬ್ಬ ಅಪರಾಧಿ ಅಕ್ಷಯ್ ಕುಮಾರ್ ಸಿಂಗ್ ತನ್ನ ಕ್ಷಮಾದಾನ ಅರ್ಜಿ ರಾಷ್ಟ್ರಪತಿಗಳ ಮುಂದೆ ಬಾಕಿ ಇದೆ ಎಂದು ಅರ್ಜಿಯಲ್ಲಿ ಉಲ್ಲೇಖ ಮಾಡಿದ್ದಾರೆ.
ಸುಪ್ರೀಂನಲ್ಲಿ ವಿಚಾರಣೆ ಬಾಕಿ ಇದೆ
ದೆಹಲಿಯ ತಿಹಾರ್ ಜೈಲಿನಲ್ಲಿರುವ ಅಪರಾಧಿಗಳಿಗೆ ಮಾರ್ಚ್ 3ರಂದು ಗಲ್ಲು ಶಿಕ್ಷೆ ಜಾರಿಗೊಳಿಸಲು ಡೆತ್ ವಾರೆಂಟ್ ಜಾರಿಯಾಗಿದೆ. ಆದರೆ, ಅಪರಾಧಿಗಳನ್ನು ಪ್ರತ್ಯೇಕವಾಗಿ ಗಲ್ಲಿಗೆ ಹಾಕಬಾರದು ಎಂದು ದೆಹಲಿ ಹೈಕೋರ್ಟ್ ನೀಡಿರುವ ತೀರ್ಪು ಪ್ರಶ್ನಿಸಿ ಕೇಂದ್ರ ಮತ್ತು ದೆಹಲಿ ಸರ್ಕಾರ ಸುಪ್ರೀಂಗೆ ಅರ್ಜಿ ಸಲ್ಲಿಸಿದ್ದು, ಅದರ ವಿಚಾರಣೆ ಮಾರ್ಚ್ 5ರಂದು ನಡೆಯಲಿದೆ. ಆದ್ದರಿಂದ, ಮಾರ್ಚ್ 3ರಂದು ಗಲ್ಲಿಗೇರಿಸುವುದು ಅನುಮಾನವಾಗಿದೆ.
ಮೂರನೇ ಬಾರಿಗೆ ಡೆತ್ ವಾರೆಂಟ್
ನಿರ್ಭಯ ಪ್ರಕರಣದ ಎಲ್ಲಾ ಅಪರಾಧಿಗಳು ದೆಹಲಿಯ ತಿಹಾರ್ ಜೈಲಿನಲ್ಲಿದ್ದಾರೆ. ಜೈಲಿನಲ್ಲಿ ಗಲ್ಲು ಶಿಕ್ಷೆಗೆ ತಯಾರಿ ನಡೆದಿದೆ. ಜನವರಿ 22ಕ್ಕೆ ಮೊದಲ ಡೆತ್ ವಾರೆಂಟ್ ಜಾರಿಯಾಗಿತ್ತು. ಬಳಿಕ ಕಾನೂನು ಪ್ರಕ್ರಿಯೆಗಳ ಅಡ್ಡಿಯಿಂದ ಮೂಂಡೂಡಲಾಯಿತು. ಫೆ.1ಕ್ಕೆ 2ನೇ ಡೆತ್ ವಾರೆಂಟ್ ಜಾರಿಯಾಗಿತ್ತು, ಅದನ್ನೂ ಮುಂದೂಡಲಾಗಿತ್ತು. ಮಾರ್ಚ್ 3ಕ್ಕೆ ಮೂರನೇ ಡೆತ್ ವಾರೆಂಟ್ ಜಾರಿಯಾಗಿದೆ.