ನಿರ್ಭಯಾ ಪ್ರಕರಣ: ಮೂರನೇ ಕ್ಯುರೇಟಿವ್ ಅರ್ಜಿ ಕೂಡ ವಜಾ
ನವದೆಹಲಿ, ಜನವರಿ 30: ನಿರ್ಭಯಾ ಪ್ರಕರಣದ ಅಪರಾಧಿ ಅಕ್ಷಯ್ ಠಾಕೂರ್ ಸಲ್ಲಿಸಿದ್ದ ಕ್ಯುರೇಟಿವ್ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದೆ. ಹಾಗೆಯೇ ಫೆ. 1ರಂದು ಗಲ್ಲುಶಿಕ್ಷೆ ಜಾರಿಗೆ ತಡೆ ನೀಡಬೇಕೆಂಬ ಮನವಿಯನ್ನು ಕೂಡ ತಿರಸ್ಕರಿಸಿದೆ.
ಅಕ್ಷಯ್ ಠಾಕೂರ್ ಸಲ್ಲಿಸಿದ್ದ ಕ್ಯುರೇಟಿವ್ ಅರ್ಜಿಯನ್ನು ಗುರುವಾರ ವಿಚಾರಣೆಗೆ ಒಳಪಡಿಸಿದ ಐವರು ನ್ಯಾಯಮೂರ್ತಿಗಳ ಪೀಠ, ಶನಿವಾರ ನಿಗದಿಯಾಗಿರುವ ಗಲ್ಲುಶಿಕ್ಷೆ ಜಾರಿಗೆ ತಡೆ ನೀಡಲು ಕೂಡ ಸಾಧ್ಯವಿಲ್ಲ ಎಂದು ಹೇಳಿತು.
ದೆಹಲಿ ನಿರ್ಭಯಾ ಕೇಸ್ ದೋಷಿಗಳು ಯಾಕೆ ಹೀಗೆ ಮಾಡ್ತಾರೋ?
ನ್ಯಾಯಮೂರ್ತಿಗಳಾದ ಎನ್ವಿ ರಮಣ, ಅರುಣ್ ಮಿಶ್ರಾ, ಆರ್ ಎಫ್ ನಾರಿಮನ್, ಆರ್ ಭಾನುಮತಿ ಮತ್ತು ಅಶೋಕ್ ಭೂಷಣ್ ಅವರನ್ನು ಒಳಗೊಂಡ ಪಂಚಸದಸ್ಯ ಪೀಠ, ಕ್ಯುರೇಟಿವ್ ಅರ್ಜಿಗೆ ಯಾವುದೇ ಮಹತ್ವವಿಲ್ಲ ಎಂದು ಅಭಿಪ್ರಾಯಪಟ್ಟಿತು.
ನಿರ್ಭಯಾ ಅತ್ಯಾಚಾರ ದೋಷಿಗಳಿಗೆ ಫೆ.01ರಂದು ಗಲ್ಲುಶಿಕ್ಷೆ ಅನುಮಾನ?
ಜ. 14ರಂದು ಸುಪ್ರೀಂಕೋರ್ಟ್, ಇನ್ನಿಬ್ಬರು ಅಪರಾಧಿಗಳಾದ ವಿನಯ್ ಶರ್ಮಾ ಮತ್ತು ಮುಕೇಶ್ ಸಿಂಗ್ ಸಲ್ಲಿಸಿದ್ದ ಕ್ಯುರೇಟಿವ್ ಅರ್ಜಿಗಳನ್ನು ತಿರಸ್ಕರಿಸಿತ್ತು. ಈ ನಡುವೆ ವಿನಯ್ ಶರ್ಮಾ ಕ್ಷಮಾದಾನದ ಅರ್ಜಿ ಸಲ್ಲಿಸಿದ್ದಾನೆ. ಅದು ಇತ್ಯರ್ಥವಾಗುವವರೆಗೂ ಯಾವ ಅಪರಾಧಿಗೂ ಮರಣದಂಡನೆ ಜಾರಿ ಮಾಡುವಂತಿಲ್ಲ.