ನಿರ್ಭಯಾ ಅತ್ಯಾಚಾರಿಗಳಿಗೆ ಶನಿವಾರ ಗಲ್ಲುಶಿಕ್ಷೆ ಇಲ್ಲ
ನವದೆಹಲಿ, ಜನವರಿ 31: ನಿರ್ಭಯಾ ಅತ್ಯಾಚಾರ ಪ್ರಕರಣದ ನಾಲ್ವರು ಅಪರಾಧಿಗಳಿಗೆ ಗಲ್ಲುಶಿಕ್ಷೆ ಜಾರಿಗೊಳಿಸುವ ಆದೇಶಕ್ಕೆ ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯ ತಡೆ ನೀಡಿದೆ. ಇದರಿಂದ ಫೆ. 1ರ ಶನಿವಾರ ಬೆಳಗ್ಗೆ 6 ಗಂಟೆಗೆ ನಿಗದಿಯಾಗಿದ್ದ ಶಿಕ್ಷೆ ಜಾರಿಯಾಗುವುದಿಲ್ಲ.
ದೆಹಲಿ ನ್ಯಾಯಾಲಯದಿಂದ ನಿರ್ಭಯಾ ಅತ್ಯಾಚಾರಿಗಳು ಹಾಗೂ ಹಂತಕರ ಗಲ್ಲುಶಿಕ್ಷೆ ಮತ್ತಷ್ಟು ವಿಳಂಬವಾಗಲಿದೆ. ತಾನೇ ಈ ಹಿಂದೆ ನೀಡಿದ್ದ ಗಲ್ಲುಶಿಕ್ಷೆ ಜಾರಿಯ ಆದೇಶಕ್ಕೆ ಪಟಿಯಾಲ ಹೌಸ್ ಕೋರ್ಟ್ ತಡೆ ನೀಡಿದೆ. ಮುಂದಿನ ಆದೇಶ ನೀಡುವವರೆಗೂ ಅವರಿಗೆ ಗಲ್ಲುಶಿಕ್ಷೆ ಜಾರಿ ಮಾಡುವಂತಿಲ್ಲ ಎಂದು ನ್ಯಾಯಾಲಯ ಹೇಳಿದೆ.
ನಿರ್ಭಯಾ ಪ್ರಕರಣ: ಮೂರನೇ ಕ್ಯುರೇಟಿವ್ ಅರ್ಜಿ ಕೂಡ ವಜಾ
ಈ ಮೊದಲು ಅಪರಾಧಿಗಳಿಗೆ ಜ. 22ರಂದು ಗಲ್ಲುಶಿಕ್ಷೆ ನಿಗದಿಯಾಗಿತ್ತು. ಆದರೆ ಅಪರಾಧಿಗಳು ಕೊನೆಯ ಹಂತದಲ್ಲಿ ಕಾನೂನಿನ ಮೊರೆ ಹೋಗಿದ್ದರಿಂದ ಅದು ಜಾರಿಯಾಗಿರಲಿಲ್ಲ. ಕೊನೆಗೆ ಪಟಿಯಾಲ ಹೌಸ್ ನ್ಯಾಯಾಲಯ ಫೆ. 1ರ ಬೆಳಿಗ್ಗೆ ಆರು ಗಂಟೆಗೆ ಎಲ್ಲ ಅಪರಾಧಿಗಳಿಗೆ ಗಲ್ಲುಶಿಕ್ಷೆ ಜಾರಿ ಮಾಡುವಂತೆ ಆದೇಶಿಸಿತ್ತು.
ಅಪರಾಧಿಗಳ ತಂತ್ರಕ್ಕೆ ಜಯ
ಪಟಿಯಾಲ ಹೌಸ್ ಕೋರ್ಟ್ನ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಧರ್ಮೇಂದರ್ ರಾಣಾ ಶುಕ್ರವಾರ, ಗಲ್ಲುಜಾರಿಗೆ ತಡೆ ನೀಡಿ ಆದೇಶ ಹೊರಡಿಸಿದರು. ಇದರಿಂದ ನೇಣು ಕುಣಿಕೆಯಿಂದ ತಪ್ಪಿಸಿಕೊಳ್ಳುವ ಹಾಗೂ ಗಲ್ಲುಶಿಕ್ಷೆ ಜಾರಿಯಾಗುವುದನ್ನು ವಿಳಂಬ ಮಾಡುವ ಅಪರಾಧಿಗಳ ತಂತ್ರ ಫಲಿಸಿದೆ.
ಕ್ಷಮಾದಾನದ ಅರ್ಜಿ ಬಾಕಿ
ಅಪರಾಧಿಗಳಾದ ಪವನ್ ಗುಪ್ತಾ, ವಿನಯ್ ಕುಮಾರ್ ಶರ್ಮಾ ಮತ್ತು ಅಕ್ಷಯ್ ಕುಮಾರ್ ಸಿಂಗ್ ಪರ ವಕೀಲ ಎ.ಪಿ. ಸಿಂಗ್, ಶನಿವಾರ ನಿಗದಿಯಾಗಿರುವ ಗಲ್ಲುಶಿಕ್ಷೆಗೆ ತಡೆನೀಡುವಂತೆ ಕೋರಿ ಅರ್ಜಿ ಸಲ್ಲಿಸಿದ್ದರು. ಅಪರಾಧಿಗಳಲ್ಲಿ ಒಬ್ಬನಾದ ವಿನಯ್ ಶರ್ಮಾ ಸಲ್ಲಿಸಿರುವ ಕ್ಷಮಾದಾನದ ಅರ್ಜಿಯು ರಾಷ್ಟ್ರಪತಿಗಳ ಮುಂದೆ ಬಾಕಿ ಉಳಿದಿದ್ದು, ಅದರ ಪರಿಶೀಲನೆ ನಡೆದಿಲ್ಲ. ಹೀಗಾಗಿ ಗಲ್ಲುಶಿಕ್ಷೆ ಜಾರಿಗೊಳಿಸುವಂತಿಲ್ಲ ಎಂದು ವಾದಿಸಿದ್ದರು.
ಮೂವರಿಗೆ ಗಲ್ಲು ಹಾಕಬಹುದು
ವಿನಯ್ ಶರ್ಮಾ ಸಲ್ಲಿಸಿರುವ ಕ್ಷಮಾದಾನದ ಅರ್ಜಿ ಮಾತ್ರ ಬಾಕಿ ಉಳಿದಿದೆ. ಮುಕೇಶ್ ಸಿಂಗ್ ಸಲ್ಲಿಸಿದ್ದ ಅರ್ಜಿಯನ್ನು ರಾಷ್ಟ್ರಪತಿ ಈಗಾಗಲೇ ತಿರಸ್ಕರಿಸಿದ್ದಾರೆ. ಉಳಿದ ಇಬ್ಬರು ಕ್ಷಮಾದಾನಕ್ಕೆ ಮನವಿ ಮಾಡಿಲ್ಲ. ಹೀಗಾಗಿ ಈ ಮೂವರು ಅಪರಾಧಿಗಳನ್ನು ಗಲ್ಲುಶಿಕ್ಷೆಗೆ ಗುರಿಪಡಿಸಬಹುದು ಎಂದು ತಿಹಾರ್ ಜೈಲು ಅಧಿಕಾರಿಗಳು ಹೇಳಿದ್ದರು.
ನಿಯಮಗಳಲ್ಲಿ ಅವಕಾಶವಿಲ್ಲ
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಅಪರಾಧಿಗಳ ಪರ ವಕೀಲ, ನಿಯಮಾವಳಿಗಳ ಪ್ರಕಾರ ಅಪರಾಧಿಗಳ ಪೈಕಿ ಒಬ್ಬಾತನ ಯಾವುದೇ ಅರ್ಜಿ ವಿಚಾರಣೆ ಬಾಕಿ ಉಳಿದಿದ್ದರೆ ಉಳಿದವರನ್ನು ಕೂಡ ಗಲ್ಲುಶಿಕ್ಷೆಗೆ ಗುರಿಪಡಿಸಲು ಅವಕಾಶವಿಲ್ಲ ಎಂದು ತಿಳಿಸಿದ್ದರು.
ಎರಡನೆಯ ಬಾರಿ ಗಲ್ಲು ಮುಂದೂಡಿಕೆ
ಈ ಹಿಂದೆ ಜ. 22ರ ಬೆಳಿಗ್ಗೆ ಏಳು ಗಂಟೆಗೆ ಅಪರಾಧಿಗಳ ಗಲ್ಲುಶಿಕ್ಷೆ ಜಾರಿಯನ್ನು ನಿಗದಿಗೊಳಿಸಲಾಗಿತ್ತು. ಆದರೆ ಅಪರಾಧಿಗಳು ಮತ್ತೆ ಕಾನೂನಿನ ಮೊರೆ ಹೋಗಿದ್ದರಿಂದ ಫೆ. 1ರ ಬೆಳಿಗ್ಗೆ ಗಲ್ಲುಶಿಕ್ಷೆ ಜಾರಿಗೆ ಸಮಯ ನಿಗದಿಪಡಿಸಿ ವಿಚಾರಣಾ ನ್ಯಾಯಾಲಯವು ಜ. 17ರಂದು ಬ್ಲ್ಯಾಕ್ ವಾರೆಂಟ್ ಹೊರಡಿಸಿತ್ತು.