ನಿರ್ಭಯಾ ನ್ಯಾಯದ ಹಿಂದಿತ್ತು ನಿಸ್ವಾರ್ಥ ಸೇವೆ: ಬಿಡಿಗಾಸೂ ಪಡೆಯದ ವಕೀಲೆ!
ನವದೆಹಲಿ ಮಾರ್ಚ್ 20: ನಿಜವಾದ ಮಹಿಳಾ ಸಬಲೀಕರಣ ಏನ್ನೆನ್ನುವುದನ್ನು ಮಹಿಳಾ ವಕೀಲೆಯೊಬ್ಬರು ಜಗತ್ತಿಗೆ ಸಾರಿದ್ದಾರೆ. ನೊಂದ ಮಹಿಳೆಗೆ ನ್ಯಾಯ ನೀಡುವುದು ಕೇವಲ ಧರ್ಮವಲ್ಲ, ತನ್ನ ಕರ್ತವ್ಯ ಕೂಡ ಹೌದು ಎಂಬುದನ್ನು ವಕೀಲೆ ಮಾಡಿ ತೋರಿಸಿದ್ದಾರೆ. ಆ ವಕೀಲೆಯೇ ಸೀಮಾ ಕುಶ್ವಾಹಾ.
ಕಳೆದ ಏಳು ವರ್ಷಗಳ ಹಿಂದೆ ನಾಗರಿಕ ಸಮಾಜ ತಲೆತಗ್ಗಿಸುವ ರೀತಿಯ ಘಟನೆಯೊಂದು ದೆಹಲಿಯಲ್ಲಿ ನಡೆದಿತ್ತು. ದೆಹಲಿಯ ಬಸ್ ಒಂದರಲ್ಲಿ 2012ರ ಡಿಸೆಂಬರ್ 16ರಂದು ಸ್ನೇಹಿತನೆದುರೇ ನಾಲ್ವರು ಕಿರಾತಕರು ನಿರ್ಭಯಾಳನ್ನು ಅತ್ಯಾಚಾರಗೈದು ಹತ್ಯೆಗೈದಿದ್ದರು.
ನಿರ್ಭಯಾ ಜೀವಂತವಿದ್ದಿದ್ದರೆ ಮತ್ತಷ್ಟು ಖುಷಿಯಾಗುತ್ತಿತ್ತು: ವಕೀಲೆ ಸೀಮಾ
ನಿರ್ಭಯಾಳ ಸಾವಿಗೆ ದೇಶದಾದ್ಯಂತ ಆಕ್ರೋಶದ ಕಿಡಿ ಹೊತ್ತಿಕೊಂಡಿತ್ತು. ಮಹಿಳೆಯ ಸ್ವಾಭಿಮಾನದ ಪ್ರತೀಕವಾಗಿ ಅಪರಾಧಿಗಳಿಗೆ ಗಲ್ಲುಶಿಕ್ಷೆಯಾಗಬೇಕೆಂಬ ಕೂಗು ಕೇಳಿಬಂತು. ಆ ಕೂಗಿಗೆ ದನಿಯಾಗಿ ನಿರ್ಭಯಾ ಪ್ರಕರಣವನ್ನು ಕೈಗೆತ್ತಿಕೊಂಡ ವಕೀಲರ ಪೈಕಿ ಸೀಮಾ ಕುಶ್ವಾಹಾ ಕೂಡ ಒಬ್ಬರು.
ನಿರ್ಭಯಾ ಪರ ವಕಾಲತ್ತು ವಹಿಸಿದ್ದ ಸೀಮಾ
ಉತ್ತರ ಪ್ರದೇಶದ ಇಟಾವ ಮೂಲದ ಸೀಮಾ ಕುಶ್ವಾಹಾ ಕಳೆದ ಏಳು ವರ್ಷಗಳಿಂದ ನಿರ್ಭಯಾ ಕುಟುಂಬದ ಪರ ವಕಾಲತ್ತು ವಹಿಸಿದ್ದರು. ನಿರ್ಭಯಾ ತಾಯಿ ಆಶಾ ದೇವಿ ಹೆಗಲಿಗೆ ಹೆಗಲು ಕೂಡಿಸಿ ನ್ಯಾಯಕ್ಕಾಗಿ ಹೋರಾಟ ನಡೆಸಿದ್ದವರು ಇದೇ ಸೀಮಾ ಕುಶ್ವಾಹಾ.
ನಯಾ ಪೈಸೆ ಪಡೆಯದ ಸೀಮಾ
ಐಎಎಸ್ ಆಕಾಂಕ್ಷಿ ಆಗಿದ್ದರೂ, ನಿರ್ಭಯಾ ಸಾವಿಗೆ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಹೋರಾಡಿದ್ದ ಸೀಮಾ ಕುಶ್ವಾಹಾ ವಕಲಾತ್ತಿನ ಉದ್ದಕ್ಕೂ ನಯಾ ಪೈಸೆ ತೆಗೆದುಕೊಂಡಿರಲಿಲ್ಲ. ಏಳು ವರ್ಷಗಳಲ್ಲಿ ನಿರ್ಭಯಾ ಕುಟುಂಬದವರಿಂದ ಒಂದು ರೂಪಾಯಿಯನ್ನೂ ಪಡೆಯದೆ ನಿರ್ಭಯಾ ಕುಟುಂಬಕ್ಕೆ ಗೆಲುವು ತಂದುಕೊಟ್ಟರು.
ನಿರ್ಭಯಾ ಅತ್ಯಾಚಾರಿಗಳಿಗೆ ಗಲ್ಲು: ಇದು ನಾರಿ ಶಕ್ತಿಯ ಗೆಲುವು ಎಂದ ಮೋದಿ
ಸಲಾಂ ಎಂದ ಸುಮಲತಾ
ಮಹಿಳಾ ಕಾಳಜಿ ಮೆರೆದಿರುವ ಸೀಮಾ ಕುಶ್ವಾಹಾ ಕಾರ್ಯವನ್ನು ಮಂಡ್ಯ ಸಂಸದೆ ಹಾಗೂ ಚಲನಚಿತ್ರ ನಟಿ ಸುಮಲತಾ ಶ್ಲಾಫಿಸಿದ್ದಾರೆ. ಟ್ವಿಟ್ಟರ್ ನಲ್ಲಿ ಅಭಿನಂದಿಸಿರುವ ಸುಮಲತಾ ಯುವ ವಕೀಲೆಯ ವೃತ್ತಿಪರತೆಗೆ ಸಲಾಂ ಹೊಡೆದಿದ್ದಾರೆ.
ತಡವಾದರೂ ನ್ಯಾಯ ಸಿಕ್ಕಿದೆ
''ತಡವಾದರೂ ನ್ಯಾಯ ಸಿಕ್ಕಿದೆ. ನಿರ್ಭಯ ಜೀವಂತವಿದ್ದಿದ್ದರೆ ಮತ್ತಷ್ಟು ಖುಷಿಯಾಗುತ್ತಿತ್ತು. ನಾವು ಆಕೆಯನ್ನು ಬದುಕಿಸಿಕೊಳ್ಳಲು ಆಗಲಿಲ್ಲ. ದೇಶದ ಕಾನೂನು ಸುವ್ಯವಸ್ಥೆ ಇದರಲ್ಲಿ ಫೇಲ್ ಆಗಿದೆ. ದೇಶದ ರಾಜಧಾನಿಯಲ್ಲಿ ಈ ಘಟನೆ ನಡೆದಿದೆ. ಆದರೆ ಹಂತಕರನ್ನು ಗಲ್ಲಿಗೇರಿಸುವ ಮೂಲಕ ನಿರ್ಭಯಾಗೆ ನ್ಯಾಯ ಸಿಕ್ಕಿದೆ'' ಎಂದು ನಿರ್ಭಯಾ ಹಂತಕರನ್ನು ಗಲ್ಲಿಗೇರಿಸಿದ ಬಳಿಕ ಸೀಮಾ ಕುಶ್ವಾಹಾ ಪ್ರತಿಕ್ರಿಯೆ ಕೊಟ್ಟಿದ್ದಾರೆ.