ನಿರ್ಭಯಾ ಅತ್ಯಾಚಾರ: ಕೇಂದ್ರ ಸರ್ಕಾರದ ಅರ್ಜಿ ತೀರ್ಪು ಬುಧವಾರ
ನವದೆಹಲಿ, ಫೆಬ್ರವರಿ 4: ನಿರ್ಭಯಾ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ಅಪರಾಧಿಗಳ ಗಲ್ಲುಶಿಕ್ಷೆ ಜಾರಿ ಮಾಡಲು ತಡೆ ನೀಡಿರುವುದನ್ನು ಪ್ರಶ್ನಿಸಿ ಕೇಂದ್ರ ಸರ್ಕಾರ ಸಲ್ಲಿಸಿರುವ ಅರ್ಜಿಯ ಕುರಿತು ದೆಹಲಿ ಹೈಕೋರ್ಟ್ ಬುಧವಾರ ಆದೇಶ ಪ್ರಕಟಿಸಲಿದೆ.
2012ರಲ್ಲಿ ನಡೆದ ನಿರ್ಭಯಾ ಸಾಮೂಹಿಕ ಅತ್ಯಾಚಾರ ಮತ್ತು ಕ್ರೂರ ಹತ್ಯೆಯ ನಾಲ್ವರು ಅಪರಾಧಿಗಳಿಗೆ ವಿಧಿಸಲಾಗಿದ್ದ ಗಲ್ಲುಶಿಕ್ಷೆ ಇದುವರೆಗೂ ಜಾರಿಯಾಗಿಲ್ಲ. ಅಲ್ಲದೆ, ಗಲ್ಲುಶಿಕ್ಷೆಯ ದಿನಾಂಕವನ್ನು ಎರಡು ಬಾರಿ ಮುಂದೂಡಲಾಗಿದೆ. ಈಗ ಗಲ್ಲುಶಿಕ್ಷೆ ಜಾರಿಗೆ ದೆಹಲಿ ವಿಚಾರಣಾ ನ್ಯಾಯಾಲಯ ತಡೆ ನೀಡಿ, ಅದನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದೆ. ಈ ಕ್ರಮವನ್ನು ಕೇಂದ್ರ ಸರ್ಕಾರ ಹೈಕೋರ್ಟ್ನಲ್ಲಿ ಪ್ರಶ್ನಿಸಿದೆ.
ನಿರ್ಭಯಾ ತೀರ್ಪು ಕಾಯ್ದಿರಿಸಿದ ಹೈಕೋರ್ಟ್: ವಾದ-ಪ್ರತಿವಾದ ಹೇಗಿತ್ತು?
ಕೇಂದ್ರದ ಅರ್ಜಿಯನ್ನು ಶನಿವಾರ ಮತ್ತು ಭಾನುವಾರ ವಿಶೇಷ ವಿಚಾರಣೆಗೆ ಒಳಪಡಿಸಿದ ನ್ಯಾಯಮೂರ್ತಿ ಸುರೇಶ್ ಕುಮಾರ್ ಕೈಟ್, ಫೆ. 2ರಂದು ಆದೇಶ ಕಾಯ್ದಿರಿಸಿದ್ದರು.
ಮುಕೇಶ್ ಕುಮಾರ್ ಸಿಂಗ್, ಪವನ್ ಗುಪ್ತಾ, ವಿನಯ್ ಕುಮಾರ್ ಶರ್ಮಾ ಮತ್ತು ಅಕ್ಷಯ್ ಕುಮಾರ್ ತಿಹಾರ್ ಜೈಲಿನಲ್ಲಿದ್ದು, ಗಲ್ಲುಶಿಕ್ಷೆ ಎದುರಿಸುತ್ತಿದ್ದಾರೆ. ಅಪರಾಧಿಗಳ ಪೈಕಿ ವಿನಯ್ ಶರ್ಮಾ ಮತ್ತು ಮುಕೇಶ್ ಸಿಂಗ್ ಸಲ್ಲಿಸಿದ್ದ ಕ್ಷಮಾದಾನದ ಅರ್ಜಿಗಳನ್ನು ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ತಿರಸ್ಕರಿಸಿದ್ದು, ಅಕ್ಷಯ್ ಕುಮಾರ್ ಅರ್ಜಿ ಪರಿಶೀಲನೆಗೆ ಬಾಕಿ ಇದೆ. ಮತ್ತೊಬ್ಬ ಅಪರಾಧಿ ಪವನ್ ಗುಪ್ತಾ, ಇನ್ನೂ ಕ್ಯುರೇಟಿವ್ ಅರ್ಜಿ ಮತ್ತು ಕ್ಷಮಾದಾನದ ಅರ್ಜಿ ಸಲ್ಲಿಸಲು ಅವಕಾಶವಿದೆ.