ನಿರ್ಭಯಾ ಅತ್ಯಾಚಾರ ಪ್ರಕರಣ: ನಾಲ್ವರು ಅಪರಾಧಿಗಳಿಗೆ ಜ.22ರಂದು ಗಲ್ಲು
ನವದೆಹಲಿ, ಜನವರಿ 7: ಏಳು ವರ್ಷದ ಹಿಂದೆ ದೆಹಲಿಯಲ್ಲಿ ನಡೆದ ನಿರ್ಭಯಾ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣವು ಕೊನೆಗೂ ಬಗೆಹರಿದಿದೆ. ತಮಗೆ ವಿಧಿಸಿದ್ದ ಗಲ್ಲು ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಅಪರಾಧಿಗಳು ನಡೆಸಿದ ಪ್ರಯತ್ನಗಳು ವಿಫಲವಾಗಿವೆ. ಅವರ ಮನವಿಯನ್ನು ಪಟಿಯಾಲಾ ಹೌಸ್ ನ್ಯಾಯಾಲಯ ತಿರಸ್ಕರಿಸಿದ್ದು, ಅತ್ಯಾಚಾರಿಗಳಿಗೆ ಗಲ್ಲುಶಿಕ್ಷೆ ಖಾತರಿಯಾಗಿದೆ.
ಎಲ್ಲ ನಾಲ್ವರು ಆರೋಪಿಗಳಿಗೆ ಡೆತ್ ವಾರಂಟ್ ನೀಡಬೇಕು ಎಂಬ ಮನವಿಯನ್ನು ಪಟಿಯಾಲ ಹೌಸ್ ನ್ಯಾಯಾಲಯ ಒಪ್ಪಿಕೊಂಡಿತು. ಜನವರಿ 22ರ ಬೆಳಿಗ್ಗೆ 7 ಗಂಟೆಗೆ ನಾಲ್ವರು ಅಪರಾಧಿಗಳನ್ನು ಗಲ್ಲಿಗೇರಿಸುವಂತೆ ಆದೇಶಿಸಲಾಯಿತು.
ನಿರ್ಭಯಾ; ನಾನು ಬಾಲಾಪರಾಧಿ ಎಂದವನಿಗೆ ಹೈಕೋರ್ಟ್ ಏನಂತು?
ಇದರಿಂದ ಆರೋಪಿಗಳಿಗೆ ಗಲ್ಲುಶಿಕ್ಷೆ ಕಾಯಂ ಆಗಿದೆ. 2012ರ ದೆಹಲಿ ಸಾಮೂಹಿಕ ಅತ್ಯಾಚಾರ ಪ್ರಕರಣದ ಸಂತ್ರಸ್ತೆ ನಿರ್ಭಯಾ ಪೋಷಕರು ಎಲ್ಲ ನಾಲ್ವರು ಅಪರಾಧಿಗಳನ್ನು ಗಲ್ಲಿಗೇರಿಸುವ ಪ್ರಕ್ರಿಯೆ ಆರಂಭಿಸಬೇಕು ಮತ್ತು ಅವರ ವಿರುದ್ಧ ಡೆತ್ ವಾರೆಂಟ್ ಹೊರಡಿಸಬೇಕು ಎಂದು ಮನವಿ ಮಾಡಿದ್ದರು.
ಮಂಗಳವಾರ ವಿಚಾರಣೆ ಆರಂಭವಾದಾಗ ಅಪರಾಧಿಗಳಾದ ಮುಕೇಶ್ ಮತ್ತು ವಿನಯ್ ಇಬ್ಬರೂ ಸುಪ್ರೀಂಕೋರ್ಟ್ ಎದುರು ಕ್ಯುರೇಟಿವ್ ಅರ್ಜಿ ಸಲ್ಲಿಸಲು ಬಯಸಿದ್ದಾರೆ ಎಂದು ಅಮಿಕಸ್ ಕ್ಯೂರಿ ವೃಂದಾ ಗ್ರೋವರ್ ಅವರು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಸತೀಶ್ ಅರೋರಾ ಅವರಿಗೆ ತಿಳಿಸಿದರು.
ಕಣ್ಣೀರಿಟ್ಟ ನಿರ್ಭಯಾ ತಾಯಿ
ಈ ಕೂಡಲೇ ಅಪರಾಧಿಗಳಿಗೆ ಡೆತ್ ವಾರಂಟ್ ಹೊರಡಿಸಬೇಕು ಎಂದು ಪ್ರಾಸಿಕ್ಯೂಟರ್ ಕೂಡ ಒತ್ತಾಯಿಸಿದರು. ಯಾವುದೇ ಕೋರ್ಟ್ನಲ್ಲಿ ಯಾವುದೇ ಅರ್ಜಿ ವಿಚಾರಣೆ ಬಾಕಿ ಉಳಿದಿಲ್ಲ. ಕ್ಷಮಾದಾನ ಅರ್ಜಿಗಳನ್ನು ಕೂಡ ತಿರಸ್ಕರಿಸಲಾಗಿದೆ ಎಂದು ನ್ಯಾಯಾಲಯಕ್ಕೆ ವಿವರಿಸಿದರು. ಆದಷ್ಟು ಬೇಗನೆ ಅಪರಾಧಿಗಳನ್ನು ನೇಣಿಗೇರಿಸಿ ನ್ಯಾಯಕೊಡಿ ಎಂದು ನಿರ್ಭಯಾ ತಾಯಿ ಕಣ್ಣೀರು ಸುರಿಸುತ್ತಾ ಕುಸಿದುಬಿದ್ದರು.
ಸುಳ್ಳು ಸುದ್ದಿ ಆರೋಪ
ಮಾಧ್ಯಮಗಳು ತಮ್ಮ ಬಗ್ಗೆ ಸುಳ್ಳು ವರದಿಗಳನ್ನು ಬರೆದಿವೆ ಎಂದು ಅಪರಾಧಿಗಳಲ್ಲಿ ಒಬ್ಬನಾದ ಅಕ್ಷಯ್ ಆರೋಪಿಸಿದ್ದರಿಂದ ನ್ಯಾಯಾಲಯದಲ್ಲಿ ನಾಟಕೀಯ ಬೆಳವಣಿಗೆಗಳು ನಡೆದವು. ನ್ಯಾಯಾಧೀಶರು ಮಾಧ್ಯಮ ಪ್ರತಿನಿಧಿಗಳನ್ನು ಹೊರಹೋಗುವಂತೆ ಸೂಚಿಸಿದರು. ನಾಲ್ವರೂ ಅಪರಾಧಿಗಳನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸಲಾಯಿತು.
ಅಕ್ಷಯ್ ಠಾಕೂರ್ ಅರ್ಜಿ ಸುಪ್ರೀಂನಿಂದ ವಜಾ; ಗಲ್ಲು ಶಿಕ್ಷೆ ಜಾರಿ
ಕೊನೆಗೂ ನ್ಯಾಯ ಸಿಕ್ಕ ಸಂತಸ
ನನ್ನ ಮಗಳಿಗೆ ಕೊನೆಗೂ ನ್ಯಾಯ ಸಿಕ್ಕಿದೆ. ನಾಲ್ವರು ಅಪರಾಧಿಗಳ ಗಲ್ಲುಶಿಕ್ಷೆ ದೇಶದ ಮಹಿಳೆಯರಿಗೆ ಶಕ್ತಿ ನೀಡಲಿದೆ. ಈ ನಿರ್ಧಾರವು ನ್ಯಾಯಾಂಗ ವ್ಯವಸ್ಥೆ ಮೇಲಿನ ಜನರ ನಂಬಿಕೆಯನ್ನು ಬಲಪಡಿಸಿದೆ. ಮಹಿಳೆಯರು ಕಾನೂನಿನ ಮೇಲೆ ಇರಿಸಿದ್ದ ನಂಬಿಕೆಯನ್ನು ಮರಳಿ ತಂದಿದೆ. ಎಂದು ನಿರ್ಭಯಾ ತಾಯಿ ಆಶಾ ದೇವಿ ಹೇಳಿದರು.
ಅಪರಾಧಿಯ ತಂದೆಯಿಂದ ಅರ್ಜಿ
ಈ ಪ್ರಕರಣದಲ್ಲಿ ಮಗನ ವಿರುದ್ಧ ಸುಳ್ಳು ಸಾಕ್ಷಿ ಹೇಳಿಸಲಾಗಿದೆ ಎಂದು ಅಪರಾಧಿಗಳಲ್ಲಿ ಒಬ್ಬನಾದ ಪವನ್ ಕುಮಾರ್ ಗುಪ್ತಾ ತಂದೆ ಅರ್ಜಿ ಸಲ್ಲಿಸಿದ್ದರು. ಈ ವಾದವನ್ನು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಸತೀಶ್ ಕುಮಾರ್ ಅರೋರಾ ಸೋಮವಾರ ತಳ್ಳಿಹಾಕಿದ್ದರು. ಮಂಗಳವಾರದ ವಿಚಾರಣೆ ವೇಳೆ ನಾಲ್ವರು ಅಪರಾಧಿಗಳಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಕೊನೆಯದಾಗಿ ಮಾತನಾಡಲು ಅವಕಾಶ ನೀಡಿದ್ದರು. ಈ ವೇಳೆ ಅಕ್ಷಯ್, ತನ್ನ ಕುರಿತು ಸುಳ್ಳು ಸುದ್ದಿ ಹಬ್ಬಿಸಲಾಗಿದೆ ಎಂದು ಆರೋಪಿಸಿದ್ದ. ಆದರೆ ಅದನ್ನು ನ್ಯಾಯಾಧೀಶರು ಮಾನ್ಯ ಮಾಡಲಿಲ್ಲ.
ಗಲ್ಲು ಶಿಕ್ಷೆ ಏಕೆ?; ಸಾಯಲು ದೆಹಲಿ ಮಾಲಿನ್ಯವೇ ಸಾಕು
ಅಂದು ಏನಾಗಿತ್ತು?
2012ಡಿ. 16ರ ರಾತ್ರಿ ದಕ್ಷಿಣ ದೆಹಲಿಯಲ್ಲಿ ವಿದ್ಯಾರ್ಥಿನಿ 'ನಿರ್ಭಯಾ'ರನ್ನು ಆರು ಮಂದಿ ದುಷ್ಕರ್ಮಿಗಳು ಬಸ್ನೊಳಗೆ ಸಾಮೂಹಿಕ ಅತ್ಯಾಚಾರ ನಡೆಸಿದ್ದರು. ಆಕೆಯ ಜತೆಗಿದ್ದ ಸ್ನೇಹಿತನ ಕೈಕಾಲುಗಳನ್ನು ಕಟ್ಟಿಹಾಕಿ ಹಲ್ಲೆ ನಡೆಸಿದ್ದರು. ನಿರ್ಭಯಾ ಮೇಲೆ ಅತ್ಯಾಚಾರ ನಡೆಸಿದ ಬಳಿಕ ಅವರನ್ನು ಅಮಾನುಷವಾಗಿ ಥಳಿಸಲಾಗಿತ್ತು. ಗುಪ್ತಾಂಗಕ್ಕೆ ಕಬ್ಬಿಣದ ರಾಡ್ ತುರುಕಲಾಗಿತ್ತು. ಚಲಿಸುತ್ತಿದ್ದ ಬಸ್ನಿಂದ ಹೊರಗೆ ಎಸೆಯಲಾಗಿತ್ತು. ಗಂಭೀರ ಗಾಯಗೊಂಡಿದ್ದ ನಿರ್ಭಯಾ ಮೃತಪಟ್ಟಿದ್ದರು. ಈ ಪ್ರಕರಣ ದೇಶದಾದ್ಯಂತ ಆಕ್ರೋಶಕ್ಕೆ ಕಾರಣವಾಗಿತ್ತು. ಪ್ರಕರಣ ಸಂಬಂಧ ರಾಮ್ ಸಿಂಗ್, ಅಕ್ಷಯ್ ಠಾಕೂರ್, ವಿನಯ್, ಮುಕೇಶ್, ಪವನ್ ಕುಮಾರ್ ಹಾಗೂ ಮತ್ತೊಬ್ಬ ಅಪ್ರಾಪ್ತ ವಯಸ್ಸಿನ ಆರೋಪಿಗಳನ್ನು ಬಂಧಿಸಲಾಗಿತ್ತು. ರಾಮ್ ಸಿಂಗ್ ತಿಹಾರ್ ಜೈಲಿನಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿದ್ದರೆ, ಬಾಲಾಪರಾಧಿಯನ್ನು ಬಿಡುಗಡೆ ಮಾಡಲಾಗಿತ್ತು.