ನಿರ್ಭಯ ಅಪರಾಧಿಗಳ ತುರ್ತು ಅರ್ಜಿ ವಜಾ; ಗಲ್ಲು ಖಾಯಂ
ನವದೆಹಲಿ, ಮಾರ್ಚ್ 19 : ನಿರ್ಭಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಅಪರಾಧಿಗಳು ಗಲ್ಲು ಶಿಕ್ಷೆಗೆ ತಡೆ ನೀಡಬೇಕು ಎಂದು ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ವಜಾಗೊಳಿಸಿದೆ. ಶುಕ್ರವಾರ ಮುಂಜಾನೆ 5.30ಕ್ಕೆ ಗಲ್ಲು ಶಿಕ್ಷೆ ಜಾರಿಯಾಗುವುದು ಖಚಿತವಾಗಿದೆ.
ಗುರುವಾರ ರಾತ್ರಿ ಪ್ರಕರಣದ ಅಪರಾಧಿಗಳು ದೆಹಲಿ ಹೈಕೋರ್ಟ್ಗೆ ತುರ್ತು ಅರ್ಜಿಯನ್ನು ಸಲ್ಲಿಸಿದ್ದರು. ರಾತ್ರಿ 10.30ಕ್ಕೆ ಅರ್ಜಿ ವಿಚಾರಣೆಯನ್ನು ದೆಹಲಿ ಹೈಕೋರ್ಟ್ ಆರಂಭಿಸಿತು. ಗಲ್ಲು ಶಿಕ್ಷೆಗೆ ತಡೆ ನೀಡಬೇಕು ಎಂಬ ಮನವಿಯನ್ನು 11.20ಕ್ಕೆ ತಿರಸ್ಕರಿಸಿತು.
ನಿರ್ಭಯ ಹಂತಕರಿಗೆ ಗಲ್ಲು; ದೆಹಲಿ ಹೈಕೋರ್ಟ್ಗೆ ತುರ್ತು ಅರ್ಜಿ
ಪ್ರಕರಣದ ಅಪರಾಧಿಗಳಾದ ಮುಕೇಶ್ ಕುಮಾರ್ ಸಿಂಗ್ (32), ಪವನ್ ಗುಪ್ತ (25), ವಿನಯ್ ಕುಮಾರ್ ಶರ್ಮಾ (26), ಅಕ್ಷಯ್ ಕುಮಾರ್ (31) ಗಲ್ಲು ಶಿಕ್ಷೆಗೆ ತಡೆ ನೀಡಬೇಕು ಎಂದು ಅರ್ಜಿ ಹಾಕಿದ್ದರು. ಅಪರಾಧಿಗಳ ಪರವಾಗಿ ವಕೀಲ ಎ. ಪಿ. ಸಿಂಗ್ ವಾದ ಮಂಡಿಸಿದರು.
ಎಲ್ಲಾ ಅರ್ಜಿ ತಿರಸ್ಕೃತ; ನಿರ್ಭಯ ಅತ್ಯಾಚಾರಿಗಳಿಗೆ ಗಲ್ಲು ಖಚಿತ
ಅರ್ಜಿಯ ವಿಚಾರಣೆ ವೇಳೆ ವಕೀಲ ಎ. ಪಿ. ಸಿಂಗ್ ಯಾವುದೇ ಅಫಿಡೆವಿಟ್, ಮೆಮು ಸಲ್ಲಿಸಿರಲಿಲ್ಲ. ಇದನ್ನು ನ್ಯಾಯಮೂರ್ತಿಗಳು ಪ್ರಶ್ನೆ ಮಾಡಿದರು. ಆಗ ಪ್ರಿಂಟರ್ ಕೆಲಸ ಮಾಡುತ್ತಿಲ್ಲ ಎಂದು ವಕೀಲರು ಹೇಳಿದರು. ಆಗ ನ್ಯಾಯಪೀಠ ಅಸಮಾಧಾನ ವ್ಯಕ್ತಪಡಿಸಿತು.
ಸುಪ್ರೀಂನಿಂದ ಅರ್ಜಿ ವಜಾ; ನಿರ್ಭಯಾ ಹಂತಕರಿಗೆ ಶುಕ್ರವಾರ ಗಲ್ಲು
ಇಂದು ಇದೇ ಪ್ರಕರಣದಲ್ಲಿ ಮೂರು ನ್ಯಾಯಾಲಯಗಳಲ್ಲಿ ವಾದ ಮಂಡನೆ ಮಾಡಿದ್ದೀರಿ. ನೀವು ಹೀಗೆ ಹೇಳಬಾರದು ಎಂದು ನ್ಯಾಯಪೀಠ ಸೂಚನೆ ನೀಡಿತು. ಕಾನೂನಿನ ಅಂಶಗಳನ್ನು ಮಾತ್ರ ಮಂಡಿಸಿ, ನಿಮ್ಮ ವಾದ ನಮಗೆ ಅರ್ಥವಾಗುತ್ತಿಲ್ಲ ಎಂದು ನ್ಯಾಯಪೀಠ ಹೇಳಿತು.
ಮಾರ್ಚ್ 4, 2020ರ ತನಕ ಏನು ಮಾಡುತ್ತಿದ್ದೀರಿ. ಸಮಯ ಓಡುತ್ತಿದೆ, ರಾತ್ರಿ 10.45ಕ್ಕೆ ನಾವು ಅರ್ಜಿಯ ವಿಚಾರಣೆ ನಡೆಸುತ್ತಿದ್ದೇವೆ ಎಂದು ವಕೀಲ ಎ. ಪಿ. ಸಿಂಗ್ಗೆ ನ್ಯಾಯಾಲಯ ಅರ್ಜಿಯ ವಿಚಾರಣೆ ಸಮಯದಲ್ಲಿ ಹೇಳಿತು. ನಿಮ್ಮ ಅರ್ಜಿಗೆ ಯಾವುದೇ ಅಡಿಪಾಯವಿಲ್ಲ ಎಂದಿತು.
ಅಪರಾಧಿಗಳು ಮಾನವ ಹಕ್ಕು ಆಯೋಗಕ್ಕೆ ಸಲ್ಲಿಸಿರುವ ಅರ್ಜಿ ಇನ್ನು ವಿಚಾರಣೆಗೆ ಬಾಕಿ ಇದೆ. ಈಗ ಹೇಗೆ ಗಲ್ಲು ಶಿಕ್ಷೆ ಜಾರಿ ಸಾಧ್ಯ?. ಇದು ಡೆತ್ ವಾರೆಂಟ್ ಆದ್ದರಿಂದ ಕಾಲಾವಕಾಶ ತೆಗೆದುಕೊಂಡು ವಿಚಾರಣೆ ನಡೆಸಬೇಕು ಎಂದು ಎ. ಪಿ. ಸಿಂಗ್ ವಾದ ಮಂಡಿಸಿದರು.
ವಾದವನ್ನು ಆಲಿಸಿದ ನ್ಯಾಯಾಲಯ ಗಲ್ಲು ಶಿಕ್ಷೆಗೆ ತಡೆ ನೀಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿತು. ಶುಕ್ರವಾರ ಮುಂಜಾನೆ 5.30ಕ್ಕೆ ತಿಹಾರ್ ಜೈಲಿನಲ್ಲಿ ಗಲ್ಲು ಶಿಕ್ಷೆ ಜಾರಿಗೆ ಸಿದ್ಧತೆಗಳು ನಡೆದಿವೆ.