ನಿರ್ಭಯಾ ಹಂತಕರ ಗಲ್ಲು ಸನ್ನಿಹಿತ... ಕ್ಷಮಾದಾನ ಅರ್ಜಿಗೆ 7 ದಿನ ಗಡುವು
2012 ರ ಡಿಸೆಂಬರ್ ನಲ್ಲಿ ದೆಹಲಿಯಲ್ಲಿ ಅರೆವೈದ್ಯಕೀಯ ವಿದ್ಯಾರ್ಥಿನಿ ನಿರ್ಭಯಾ ಅತ್ಯಾಚಾರ ಮತ್ತು ಬರ್ಬರ ಹತ್ಯೆ ಪ್ರಕರಣದ ಆರೋಪಿಗಳಿಗೆ ಸುಪ್ರೀಂ ಕೋರ್ಟ್ ನೀಡಿದ್ದ ಗಲ್ಲು ಶಿಕ್ಷೆಗೆ ಕ್ಷಮಾದಾನ ಅರ್ಜಿ ಸಲ್ಲಿಸಲು ಇನ್ನು 7 ದಿನ ಮಾತ್ರವೇ ಅವಕಾಶವಿದೆ!
ಈ ಕುರಿತು ಹಂತಕರಿರುವ ತಿಹಾರ್ ಜೈಲಿನ ಮೇಲಧಿಕಾರಿಗಳು ಅಪರಾಧಿಗಳಿಗೆ ನೋಟಿಸ್ ನೀಡಿದ್ದಾರೆ.
ರಕ್ಕಸರಿಗೆ ಗಲ್ಲು: ಸುಪ್ರೀಂ ತೀರ್ಪಿಗೆ ಟ್ವಿಟ್ಟಿಗರ ಹರ್ಷ
ನಿರ್ಭಯಾ ಅವರ ಮೇಲೆ ಅತ್ಯಾಚಾರ ನಡೆಸಿ, ಅವರ ಮೇಲೆ ಮಾರಣಾಂತಿ ಹಲ್ಲೆ ನಡೆಸಿದ್ದ ಮುಕೇಶ್, ಪವನ್ ಗುಪ್ತಾ, ವಿನಯ್ ಶರ್ಮಾ ಮತ್ತು ಅಕ್ಷಯ್ ಎಂಬ ನಾಲ್ವರು ಆರೋಪಿಗಳಿಗೆ ಸುಪ್ರೀಂ ಕೋರ್ಟ್ ಗಲ್ಲು ಶಿಕ್ಷೆ ವಿಧಿಸಿತ್ತು. ಒಟ್ಟು ಆರು ಆರೋಪಿಗಳಲ್ಲಿ ರಾಮ್ ಸಿಂಗ್ ಎಂಬ ಒಬ್ಬ ಜೈಲಿನಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿದ್ದ. ಇನ್ನೊಬ್ಬ ಬಾಲಾಪರಾಧಿ ಎಂಬ ಕಾರಣಕ್ಕೆ ಆತನನ್ನು ಬಂಧಿಸಿದ ಮೂರು ವರ್ಷಗಳ ನಂತರ ಬಿಡುಗಡೆ ಮಾಡಲಾಗಿತ್ತು.
ನೋಟಿಸ್ ನಲ್ಲಿ ಏನಿದೆ?
"ನಿಮ್ಮ ವಿರುದ್ಧ ಇದ್ದ ಎಲ್ಲಾ ಕಾನೂನು ಪ್ರಕ್ರಿಯೆಗಳಲೂ ಮುಕ್ತಾಯವಾಗಿದ್ದು, ಇನ್ನು ನೀವು ಕ್ಷಮಾದಾನ ಅರ್ಜಿ ಸಲ್ಲಿಸಲು ಮಾತ್ರವೇ ಅವಕಾಶವಿದ್ದು, ಅದಕ್ಕೆ ಇನ್ನು 7 ದಿನಗಳ ಗಡುವು ನೀದಿದ್ದೇವೆ. ನೀವು ರಾಷ್ಟ್ರಪತಿಗಳಿಗೆ ಕ್ಷಮಅದಾನ ಅರ್ಜಿ ಸಲ್ಲಿಸದೆ ಇದ್ದರೆ ನೀವು ಈ ಶಿಕ್ಷೆಯನ್ನು ಅನುಭವಿಸುತ್ತೀರಿ ಎಂದು ಭಾವಿಸಿ, ಗಲ್ಲು ಶಿಕ್ಷೆಯ ಪ್ರಕ್ರಿಯೆಗಳನ್ನು ಆರಂಬಿಸುತ್ತೇನೆ" ಎಂದು ಈ ನೊಟೀಸ್ ನಲ್ಲಿ ಹೇಳಲಾಗಿದೆ.
ತೀರ್ಪು ಎತ್ತಿ ಹಿಡಿದಿದ್ದ ಸುಪ್ರೀಂ ಕೋರ್ಟ್
ನಿರ್ಭಯಾ ಪ್ರಕರಣದ ಆರೋಪಿಗಳಿಗೆ ಗಲ್ಲುಶಿಕ್ಷೆಯೇ ಸರಿ ಎಂದು ದೆಹಲಿ ಹೈಕೋರ್ಟ್ ತೀರ್ಪು ನೀಡಿತ್ತು. ಈ ತೀರ್ಪಿನ ವಿರುದ್ಧ ಆರೋಪಿಗಳು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಆದರೆ 2017 ರ ಮೇ ತಿಂಗಳಿನಲ್ಲಿ ಈ ಅರ್ಜಿಯ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್, ದೆಹಲಿ ಹೈಕೋರ್ಟ್ ತೀರ್ಪನ್ನು ಎತ್ತಿಹಿಡಿದು, ಅಪರಾಧಿಗಳಿಗೆ ಗಲ್ಲನ್ನು ಖಾಯಂ ಗೊಳಿಸಿತ್ತು.
ಅಸಹ್ಯ ವ್ಯಕ್ತಪಡಿಸಿದ್ದ ಸುಪ್ರೀಂ ಕೋರ್ಟ್
2017 ರ ಮೇ ತಿಂಗಳಿನಲ್ಲಿ ಮರುಪರಿಶೀಲನಾ ಅರ್ಜಿ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್, "ಈ ಮೃಗಗಳು ಬದುಕಲು ಯೋಗ್ಯರಲ್ಲ, ಅವರು ಮಾಡಿದ್ದು ಅಕ್ಷಮ್ಯ ಅಪರಾಧ. ಮನುಷ್ಯರನ್ನು ತಮ್ಮ ಕಾಮದ ವಾಂಛೆಗೆ ವಸ್ತುವಿನಂತೆ ಬಳಸಿಕೊಂಡ ಅವರ ನಡೆ ಅತ್ಯಂತ ಅಸಹ್ಯಕರ. ಸಾಮಾಜಿಕ ನಂಬಿಕೆಯನ್ನೇ ಹಾಳುಮಾಡುವಂಥ ಇಂಥ ಹೇಯಕೃತ್ಯದ ಅಪರಾಧಿಗಳಿಗೆ ಗಲ್ಲುಶಿಕ್ಷೆಗಿಂತ ಬೇರೆ ಶಿಕ್ಷೆ ಸೂಕ್ತವಲ್ಲ" ಎಂದು ಸುಪ್ರೀಂ ಕೋರ್ಟ್ ಅಸಹ್ಯಭಾವ ವ್ಯಕ್ತಪಡಿಸಿ ಹೇಳಿತ್ತು.
ಬಸ್ಸಿನಲ್ಲೇ ಅತ್ಯಾಚಾರ
2012 ರ ಡಿಸೆಂಬರ್ 16 ರಂದು ದೆಹಲಿಯಲ್ಲಿ ಅರೆವೈದ್ಯಕೀಯ ವಿದ್ಯಾರ್ಥಿನಿಯ ಮೇಲೆ ಚಲಿಸುತ್ತಿರುವ ಬಸ್ಸಿನಲ್ಲೇ ಅತ್ಯಾಚಾರ ಎಸಗಲಾಗಿತ್ತು. ಆಕೆಯೊಂದಿಗಿದ್ದ ಆಕೆಯ ಪ್ರಿಯಕರನನ್ನೂ ಥಳಿಸಿ, ಮಾರಣಾಂತಿಕ ಹಲ್ಲೆ ನಡೆಸಲಾಗಿತ್ತು. ಅತ್ಯಾಚಾರಕ್ಕೊಳಗಾದ ನಿರ್ಭಯಾ ಚಿಕಿತ್ಸೆ ಫಲಕಾರಿಯಾಗದೆ, ಕೆಲದಿನಗಳಲ್ಲೇ ಅಸುನೀಗಿದ್ದರು.