ನಿರ್ಭಯಾ ಪ್ರಕರಣ: ತಿಹಾರ್ ಜೈಲಿನ ವಿರುದ್ಧ ಕೋರ್ಟ್ಗೆ ಅಪರಾಧಿಗಳ ದೂರು
ನವದೆಹಲಿ, ಜನವರಿ 24: ನಿರ್ಭಯಾ ಅತ್ಯಾಚಾರ ಪ್ರಕರಣದ ನಾಲ್ವರು ಅಪರಾಧಿಗಳನ್ನು ಫೆ. 1ರಂದು ಕೂಡ ಗಲ್ಲುಶಿಕ್ಷೆಗೆ ಗುರಿಪಡಿಸುವುದು ಅನುಮಾನವಾಗಿದೆ. ಪ್ರಕರಣದ ಅಪರಾಧಿಗಳ ಪೈಕಿ ಇಬ್ಬರು ಅಪರಾಧಿಗಳ ಪರ ವಕೀಲರು ಶುಕ್ರವಾರ ದೆಹಲಿ ನ್ಯಾಯಾಲಯದ ಮೊರೆ ಹೋಗಿದ್ದಾರೆ.
ಕೆಲವು ದಾಖಲೆಗಳನ್ನು ಹಸ್ತಾಂತರ ಮಾಡುವುದರಲ್ಲಿ ತಿಹಾರ್ ಜೈಲಿನ ಅಧಿಕಾರಿಗಳು ವಿಳಂಬ ಮಾಡುತ್ತಿದ್ದಾರೆ ಎಂದು ವಕೀಲರು ಆರೋಪಿಸಿದ್ದಾರೆ.
ನಿರ್ಭಯಾ ಅತ್ಯಾಚಾರಿಗಳಿಗೆ ಕೊನೆಯ ಆಸೆಯೇ ಇಲ್ಲ?
ಅಪರಾಧಿಗಳಾದ ಅಕ್ಷಯ್ ಕುಮಾರ್ ಸಿಂಗ್ ಮತ್ತು ಪವನ್ ಸಿಂಗ್ ಪರ ವಕೀಲ ಎ.ಪಿ. ಸಿಂಗ್ ಪಟಿಯಾಲ ಹೌಸ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಗಲ್ಲುಶಿಕ್ಷೆಗೆ ಗುರಿಯಾಗಿರುವ ಅಪರಾಧಿಗಳು ಕ್ಯುರೇಟಿವ್ ಮತ್ತು ಕ್ಷಮಾದಾನದ ಅರ್ಜಿಗಳನ್ನು ಸಲ್ಲಿಸಲು ಅಗತ್ಯವಿರುವ ಕೆಲವು ದಾಖಲೆಗಳನ್ನು ಇನ್ನೂ ಬಿಡುಗಡೆ ಮಾಡಿಲ್ಲ ಎಂದು ಅವರು ದೂರಿದ್ದಾರೆ.
ಗಲ್ಲುಶಿಕ್ಷೆ ಜಾರಿಯಲ್ಲಿ ವಿಳಂಬ: ಕೇಂದ್ರ ಸರ್ಕಾರದಿಂದ ಮಹತ್ವದ ಹೆಜ್ಜೆ
ಈ ಅರ್ಜಿಯ ವಿಚಾರಣೆ ಶನಿವಾರ ವಿಚಾರಣೆಗೆ ಬರಲಿದೆ. ಇತರೆ ಇಬ್ಬರು ಅಪರಾಧಿಗಳಾದ ವಿನಯ್ ಕುಮಾರ್ ಶರ್ಮಾ ಮತ್ತು ಮುಕೇಶ್ ಸಿಂಗ್ ಸಲ್ಲಿಸಿದ್ದ ಕ್ಯುರೇಟಿವ್ ಅರ್ಜಿಗಳನ್ನು ಸುಪ್ರೀಂಕೋರ್ಟ್ ಇತ್ತಿಚೆಗೆ ತಿರಸ್ಕರಿಸಿತ್ತು. ಫೆ.1ರಂದು ಎಲ್ಲ ನಾಲ್ಕೂ ಆರೋಪಿಗಳಿಗೆ ಗಲ್ಲುಶಿಕ್ಷೆ ಜಾರಿ ಮಾಡಲು ನಿರ್ಧರಿಸಲಾಗಿದೆ. ಆದರೆ ಕ್ಯುರೇಟಿವ್ ಅರ್ಜಿ ಸಲ್ಲಿಕೆ ಮತ್ತು ಕ್ಷಮಾದಾನದ ಮನವಿ ಸಲ್ಲಿಸಲು ಅವಕಾಶವಿರುವುದರಿಂದ ಅದು ಮತ್ತಷ್ಟು ತಡವಾಗುವ ಸಾಧ್ಯತೆ ಇದೆ.