ದೇಶದಲ್ಲಿ ಇನ್ನೂ ನಿರ್ಭಯಾದಂಥ ಪ್ರಕರಣಗಳು ನಿಂತಿಲ್ಲ: ಆಶಾ ದೇವಿ
ನವದೆಹಲು, ಜುಲೈ 09: 'ಆ ಘಟನೆ ನಡೆದು ಈಗಾಗಲೇ 6 ವರ್ಷವಾಗಿದೆ. ಆದರು ದೇಶದಲ್ಲಿ ನಿರ್ಭಯಾ ಪ್ರಕರಣವನ್ನು ಹೋಲುವ ಹಲವು ಘಟನೆಗಳು ನಡೆಯುತ್ತಲೇ ಇವೆ' ಎಂದು 2012 ದೆಹಲಿ ಸಾಮೂಹಿಕ ಅತ್ಯಾಚಾರದ ಸಂತ್ರಸ್ಥೆ ನಿರ್ಭಯಾ ಅವರ ತಾಯಿ ಆಶಾ ದೇವಿ ಹೇಳಿದ್ದಾರೆ.
"ಇಂಥ ಘಟನೆಗಳನ್ನು ನಿಯಂತ್ರಿಸುವಲ್ಲಿ ನಮ್ಮ ವ್ಯವಸ್ಥೆ ವಿಫಲವಾಗಿದೆ. ಇಂದು ಸುಪ್ರೀಂ ಕೋರ್ಟ್ ನ್ಯಾಯಯುತ ತೀರ್ಪು ನೀಡಲಿದೆ ಎಂಬ ನಂಬಿಕೆ ನನಗಿದೆ" ಎಂದು ಆವರು ಹೇಳಿದರು.
ನಿರ್ಭಯಾ ಪ್ರಕರಣ: ಪರಿಶೀಲನಾ ಅರ್ಜಿ ತೀರ್ಪು ಇಂದು ಪ್ರಕಟ ಸಾಧ್ಯತೆ
'ಮಹಿಳೆಯರು ಮತ್ತು ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯದ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ ಅವರಲ್ಲಿ ಮನವಿ ಮಾಡಿಕೊಳ್ಳುತ್ತೇನೆ. ನಮಗೆ ನ್ಯಾಯ ದೊರೆಯುವ ನಂಬಿಕೆ ಇದೆ' ಎಂದು ನಿರ್ಭಯಾ ತಂದೆ ಬದರಿನಾಥ್ ಸಿಂಗ್ ಹೇಳಿದ್ದಾರೆ.
2012 ರ ಡಿಸೆಂಬರ್ 16 ರಂದು ದೆಹಲಿಯಲ್ಲಿ ಅರೆ ವೈದ್ಯಕೀಯ ವಿದ್ಯಾರ್ಥಿನಿಯ ಮೇಲೆ ಚಲಿಸುವ ಬಸ್ಸಿನಲ್ಲಿ ಸಾಮೂಹಿಕವಾಗಿ ಅತ್ಯಾಚಾರ ಮಾಡಲಾಗಿತ್ತು. ಈ ಘಟನೆ ದೇಶದಾದ್ಯಂತ ತಲ್ಲಣ ಮೂಡಿಸಿತ್ತು. ಅತ್ಯಂತ ಅಮಾನುಷವಾಗಿ, ವಿಕೃತವಾಗಿ ಆಕೆಯನ್ನು ಹಿಂಸಿಸಲಾಗಿತ್ತು. ಘಟನೆಗೆ ಸಂಬಂಧಿಸಿದಂತೆ ಆರು ಆರೋಪಿಗಳು ದೋಷಿಗಳು ಎಂಬುದು ಸಾಬೀತಾಗಿತ್ತು.
ಈ ಆರು ಜನರಲ್ಲಿ ರಾಮ್ ಸಿಂಗ್ ಎಂಬಾತ ಜೈಲಿನಲ್ಲೇ ಆತ್ಮಹತ್ಯೆಮಾಡಿಕೊಂಡಿದ್ದ, ಇನ್ನೋರ್ವ ಆರೋಪಿ ಬಾಲಾಪರಾಧಿ ಎಂದು ಮೂರು ವರ್ಷ ಶಿಕ್ಷೆಯ ನಂತರ ಆತನನ್ನು ಬಿಡುಗಡೆ ಮಂಆಡಲಾಗಿದೆ.
ಉಳಿದ ನಾಲ್ವರಿಗೆ ಗಲ್ಲು ಶಿಕ್ಷೆ ವಿಧಿಸಲಾಗಿತ್ತು. ಈ ಗಲ್ಲು ಶಿಕ್ಷೆಯನ್ನು ಮರುಪರಿಶೀಲಿಸುವಂತೆ ಕೋರಿ ಮೂವರು ಆರೋಪಿಗಳು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಒಳಗೊಂಡ ತ್ರಿಸದಸ್ಯ ಪೀಠ ನಡೆಸಿದ್ದು, ಇಂದು ತೀರ್ಪು ಪ್ರಕಟಿಸಲಿದೆ.