ಹಫೀಜ್ ಸಯೀದ್ ಪ್ರಕರಣದಲ್ಲಿ ಲಂಚದ ಆರೋಪ; NIA ಅಧಿಕಾರಿಗಳು ವರ್ಗಾ
ನವದೆಹಲಿ, ಆಗಸ್ಟ್ 20: ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಹಫೀಜ್ ಸಯೀದ್ ಒಳಗೊಂಡ ಉಗ್ರ ಕೃತ್ಯಕ್ಕೆ ಹಣಕಾಸು ನೆರವು ಒದಗಿಸಿದ ಪ್ರಕರಣದಲ್ಲಿ ದೆಹಲಿ ಮೂಲದ ಉದ್ಯಮಿಯ ಹೆಸರನ್ನು ಸೇರಿಸದಿರಲು ಎರಡು ಕೋಟಿ ರುಪಾಯಿ ಲಂಚ ಕೇಳಿದ ಆರೋಪದಲ್ಲಿ ರಾಷ್ಟ್ರೀಯ ತನಿಖಾ ದಳದ (ಎನ್ ಐಎ) ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ.
ಅಧಿಕಾರಿಗಳ ವಿರುದ್ಧ ದುರ್ನಡತೆಯ ದೂರು ಬಂದಿದೆ. ಈ ಆರೋಪದ ಬಗ್ಗೆ ಡಿಐಜಿ ಮಟ್ಟದ ಅಧಿಕಾರಿ ತನಿಖೆ ನಡೆಸಲಿದ್ದಾರೆ. ನ್ಯಾಯ ಸಮ್ಮತವಾದ ತನಿಖೆ ಆಗಬೇಕು ಎಂಬ ಕಾರಣಕ್ಕೆ ಮೂವರು ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ ಎಂದು ವರದಿ ಆಗಿದೆ.
ಹಫೀಜ್ ಸಯೀದ್ ಹಾಗೂ ಸಹಚರರ ಮೇಲೆ ಮುರಕೊಂಡು ಬಿದ್ದ ಪಾಕಿಸ್ತಾನ
ಈಗ ವರ್ಗಾವಣೆ ಆಗಿರುವ ಮೂವರು ಅಧಿಕಾರಿಗಳ ಪೈಕಿ ಒಬ್ಬರು ಸೂಪರಿಂಟೆಂಡೆಂಟ್ ಆಫ್ ಪೊಲೀಸ್. ಸಂಝೌತ ಎಕ್ಸ್ ಪ್ರೆಸ್ ಸ್ಫೋಟ ಪ್ರಕರಣದಂಥದ್ದರಲ್ಲಿ ಅವರು ವಿಚಾರಣೆ ತಂಡದಲ್ಲಿ ಇದ್ದರು. ಇತರ ಇಬ್ಬರು ಕಿರಿಯ ಅಧಿಕಾರಿಗಳು. ಪಾಕಿಸ್ತಾನ ಮೂಲದ ಉಗ್ರ ಸಂಘಟನೆ ಲಷ್ಕರ್-ಇ-ತೈಬಾದ ಮುಖ್ಯಸ್ಥ ಹಫೀಜ್ ಸಯೀದ್ ನ ಫಲ್ಹಾ- ಇ- ಇನ್ಸಾನಿಯತ್ ಫೌಂಡೇಷನ್ ಬಗ್ಗೆ ಈ ಮೂವರು ತನಿಖೆ ನಡೆಸುತ್ತಿದ್ದರು.
ಉತ್ತರ ದೆಹಲಿಯ ಉದ್ಯಮಿ ಮನೆಯಲ್ಲಿ ಶೋಧ ಕಾರ್ಯಾಚರಣೆ ನಡೆಸಿ, ಪ್ರಕರಣದಿಂದ ಹೆಸರನ್ನು ಹೊರಗೆ ಇಡುವುದಕ್ಕೆ ಲಂಚ ಕೇಳಿದ್ದರು. ಕಳೆದ ತಿಂಗಳು ಆರೋಪ ಪಟ್ಟಿ ಸಲ್ಲಿಸಲಾಗಿದೆ. ಅದರಲ್ಲಿ ಹಫೀಜ್ ಸಯೀದ್ ಸೇರಿ ಏಳು ಮಂದಿಯನ್ನು ಹೆಸರಿಸಲಾಗಿದೆ. ಕಾನೂನುಬಾಹಿರ ಚಟುವಟಿಕೆ ನಿಗ್ರಹ ಕಾಯ್ದೆ ಅಡಿಯಲ್ಲಿ ಕ್ರಿಮಿನಲ್ ಪಿತೂರಿ ಆರೋಪ ಮಾಡಲಾಗಿದೆ.
ಆ ದಾಖಲೆ ಬಹಿರಂಗ ಪಡಿಸುವ ಪ್ರಕಾರ, ಎಫ್ ಐಎಫ್ ನ ಎರಡನೇ ಮುಖ್ಯಸ್ಥ ಶಾಹಿದ್ ಮೆಹ್ಮೂದ್ ತನ್ನ ಸಹವರ್ತಿ ದುಬೈನಲ್ಲಿರುವ ಮೊಹ್ಮದ್ ಕಮ್ರಾನ್ (ಪಾಕಿಸ್ತಾನ ಮೂಲದ ವ್ಯಕ್ತಿ) ಮೂಲಕ ಭಾರತಕ್ಕೆ ಹಣ ರವಾನೆ ಮಾಡುತ್ತಿದ್ದ. ಇನ್ನು ಹೊಸದಾಗಿ ತಿದ್ದುಪಡಿ ಆಗಿರುವ ಎನ್ ಐಎ ಮಸೂದೆ ಹಾಗೂ ಯುಎಪಿಎ ಅಡಿಯಲ್ಲಿ ತನಿಖೆಗೆ ದೊಡ್ಡ ಮಟ್ಟದ ಅಧಿಕಾರ ದೊರೆಯುತ್ತದೆ.
ದೆಹಲಿ, ಹರ್ಯಾಣದಲ್ಲಿ ಸ್ಲೀಪರ್ ಸೆಲ್ಸ್: FIF ವಿರುದ್ಧ ಚಾರ್ಜ್ ಶೀಟ್
ಧಾರ್ಮಿಕ ಕೆಲಸದ ನೆಪದಲ್ಲಿ ಶಾಹಿದ್ ಮೆಹ್ಮೂದ್ ದೆಹಲಿ, ಹರಿಯಾಣದಲ್ಲಿ ಸ್ಲೀಪರ್ ಸೆಲ್ ಸೃಷ್ಟಿಸಿದ ಆರೋಪವನ್ನು ಕಳೆದ ವರ್ಷ ಎನ್ ಐಎ ಮಾಡಿತ್ತು. ಉಗ್ರ ಕೃತ್ಯಗಳಿಗೆ ಹಣಕಾಸು ನೆರವು ನೀಡಿದ ಆರೋಪದಲ್ಲಿ ಹಫೀಜ್ ಸಯೀದ್ ನನ್ನು ಪಾಕಿಸ್ತಾನದಲ್ಲಿ ಬಂಧಿಸಿ, ಕಳೆದ ತಿಂಗಳು ಲಾಹೋರ್ ಜೈಲಿಗೆ ಕಳುಹಿಸಲಾಗಿತ್ತು. ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅಮೆರಿಕ ಭೇಟಿಗೆ ಕೆಲ ದಿನಗಳ ಮುನ್ನ ಆ ಕಾರ್ಯಾಚರಣೆ ನಡೆದಿತ್ತು.