ನೂತನ ಸಂಸತ್ತಿನಲ್ಲಿ ಬಸವಣ್ಣನವರ ಅನುಭವ ಮಂಟಪ ಮಾದರಿ ಪ್ರದರ್ಶನ
ನವದೆಹಲಿ, ಜುಲೈ 26: ''20 ಸಾವಿರ ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಸಂಸತ್ತಿನ ಭವನದಲ್ಲಿ ಬಸವಣ್ಣನವರ ಅನುಭವ ಮಂಟಪ ಮಾದರಿಯನ್ನು ಪ್ರದರ್ಶಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಇದು ನಿಜಕ್ಕೂ ಕರ್ನಾಟಕಕ್ಕೆ ಹೆಮ್ಮೆಯ ಸಂಗತಿ'' ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನೂತನ ಸಂಸತ್ ಭವನದಲ್ಲಿ ಸಂವಿಧಾನದ ಗ್ಯಾಲರಿ ನಿರ್ಮಿಸಲಾಗುತ್ತಿದ್ದು, 12ನೇ ಶತಮಾನದ ಬಸವಣ್ಣನವರ ಅನುಭವ ಮಂಟಪಕ್ಕೆ ಸಂಬಂಧಿಸಿದ ಹಸ್ತಪ್ರತಿ, ಕಲಾಕೃತಿ ಸೇರಿದಂತೆ ಲಭ್ಯ ಇರುವ ಅಗತ್ಯ ದೃಶ್ಯ ದಾಖಲೆಗಳನ್ನು ಪ್ರದರ್ಶಿಸಲು ಕೇಂದ್ರ ಸರಕಾರ ಯೋಜಿಸಿದೆ.
ಈ ನಿಟ್ಟಿನಲ್ಲಿ ಕೇಂದ್ರ ಸಂಸ್ಕೃತಿ ಸಚಿವಾಲಯ, ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಪತ್ರ ಬರೆದು, ಹಸ್ತಪ್ರತಿ ಹಾಗು ಕಲಾಕೃತಿ ಪೂರೈಸುವಂತೆ ಮನವಿ ಮಾಡಿದೆ.
ವಿವಿಧ ಕ್ಷೇತ್ರಗಳಲ್ಲಿ ಅನುಭವ ಪಡೆದವರು ಚರ್ಚಿಸಿ ಅನುಭವ ಹಂಚಿಕೊಳ್ಳುತ್ತಿದ್ದ, ಪ್ರಜಾಪ್ರಭುತ್ವ ವ್ಯವಸ್ಥೆಯ ತಳಹದಿ, ಜಗತ್ತಿನ ಮೊದಲ ಸಂಸತ್ ಎನಿಸಿಕೊಂಡಿರುವ ಅನುಭವ ಮಂಟಪದ ಕಲಾಕೃತಿ ನೂತನ ಸಂಸತ್ ಭವನದ ಗ್ಯಾಲರಿಯಲ್ಲಿ ಪ್ರದರ್ಶನಗೊಳ್ಳುವದು ಸಮಸ್ತ ಕನ್ನಡಿಗರಿಗೆ ಗೌರವದ ವಿಷಯ ಎಂದು ಪ್ರಲ್ಹಾದ್ ಜೋಶಿ ಟ್ವಿಟ್ಟರ್ನಲ್ಲಿ ತಮ್ಮ ಭಾವನೆ ಹಂಚಿಕೊಂಡಿದ್ದಾರೆ.
20 ಸಾವಿರ ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಸಂಸತ್ ಭವನ ಇನ್ನೆರಡು ತಿಂಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಬಸವಣ್ಣನವರ ಅನುಭವ ಮಂಟಪ 12 ಶತಮಾನದಲ್ಲೇ ಪ್ರಜಾಪ್ರಭುತ್ವ ವ್ಯವಸ್ಥೆ ಭಾರತದಲ್ಲಿತ್ತು ಎಂಬುದರ ಬಗ್ಗೆ ಪ್ರಧಾನಿ ಮೋದಿ ಅವರು ತಮ್ಮ ಭಾಷಣಗಳಲ್ಲೂ ಪ್ರಸ್ತಾಪಿಸಿದ್ದರು. ಕರ್ನಾಟಕ ವಿಶ್ವ ವಿದ್ಯಾಲಯವು ಈ ಕುರಿತಂತೆ ಈಗಾಗಲೇ ಮಾಹಿತಿ ಸಂಗ್ರಹಿಸಲು ಅಣಿಯಾಗಿದ್ದು, ಬಸವ ಅಧ್ಯಯನ ಪೀಠ ಹಾಗೂ ಹಿರಿಯ ಸಂಶೋಧಕರೊಂದಿಗೆ ಒಂದು ಸುತ್ತಿನ ಸಭೆ ನಡೆಸಿದೆ.
ಗಣರಾಜ್ಯೋತ್ಸವದಲ್ಲಿ
ಸ್ತಬ್ದ
ಚಿತ್ರ
ಬೀದರ್
ಜಿಲ್ಲೆ
ಬಸವ
ಕಲ್ಯಾಣದಲ್ಲಿ
9
ಶತಮಾನಗಳ
ಹಿಂದೆಯೇ
ಪ್ರಜಾಪ್ರಭುತ್ವದ
ನೆಲೆಗಟ್ಟಿನಲ್ಲಿ
ಸಮಾಜದ
ಅಭಿವೃದ್ಧಿಗಾಗಿ
ಅನುಭವ
ಮಂಟಪವನ್ನು
ಜಗಜ್ಯೋತಿ
ಬಸವಣ್ಣನವರು
ಅಸ್ತಿತ್ವಕ್ಕೆ
ತಂದಿದ್ದರು.
ಅದರ
ಮಹತ್ವವನ್ನು
ದೇಶಕ್ಕೆ
ಸಾರುವ
ಉದ್ದೇಶದಿಂದ
2022ರ
ಗಣರಾಜ್ಯೋತ್ಸವದ
ಪಥಸಂಚಲನದ
ಸಂದರ್ಭದಲ್ಲಿ
ಸ್ತಬ್ಧಚಿತ್ರ
ಪ್ರದರ್ಶಿಸಲಾಗಿತ್ತು.
ಸಾಮಾಜಿಕ, ಧಾರ್ಮಿಕ, ಪ್ರಜಾಪ್ರಭುತ್ವದ ನೆಲೆಗಟ್ಟಿನಲ್ಲಿ ಸಮಾಜದ ಅಭಿವೃದ್ಧಿಗಾಗಿ ಬಸವಣ್ಣನವರು ಹೊಸ ಮಾರ್ಗವನ್ನು ಹಾಕಿಕೊಟ್ಟಿದ್ದರು. ಆಧ್ಯಾತ್ಮಿಕ, ತತ್ವಶಾಸ್ತ್ರದ ಆಧಾರದ ಮೇಲೆ ಸಮಾನತೆ, ಸೋದರತೆ, ಸಹೋದರತ್ವದ ದೃಷ್ಟಿಕೋನವನ್ನು ರೂಪಿಸಿದ್ದರು. ಈ ಬಗ್ಗೆ ಸಂದೇಶವನ್ನು ದೇಶಕ್ಕೆ ಸಾರಲಾಗಿತ್ತು.
ಅನುಭವ ಮಂಟಪ ಮರು ನಿರ್ಮಾಣ
ಬಸವ ಕಲ್ಯಾಣ ಅಭಿವೃದ್ಧಿ ಮಂಡಳಿ ಕೈಗೆತ್ತಿಕೊಂಡಿರುವ ನೂತನ ಅನುಭವ ಮಂಟಪ ನಿರ್ಮಾಣಕ್ಕೆ ಸರ್ಕಾರ 532 ಕೋಟಿ ರೂ.ಗಳ ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲು ಬೊಮ್ಮಾಯಿ ಸರ್ಕಾರ ಅನುಮತಿ ನೀಡಿದೆ. ಮೂರು ವರ್ಷಗಳ ಒಳಗಾಗಿ ಕಾಮಗಾರಿಯನ್ನು ಪೂರ್ಣಗೊಳಿಸಲು ಮುಖ್ಯಮಂತ್ರಿಗಳು ಸೂಚಿಸಿದ್ದಾರೆ.
ಅನುಭವ ಮಂಟಪ ಬಸವಣ್ಣನವರ ಕ್ರಾಂತಿಕಾರಿ ವೇದಿಕೆ. ಈ ಮಂಟಪದ ಮೂಲಕ ಸಮಾಜದ ಓರೆಕೋರೆಗಳನ್ನು ತಿದ್ದುವ ಕೆಲಸವನ್ನು ಬಸವಣ್ಣನವರು ಮಾಡಿದ್ದಾರೆ. ಅವರು ಮಾಡಿರುವ ಸಾಮಾಜಿಕ ಕ್ರಾಂತಿಯನ್ನು ಪ್ರತಿಬಿಂಬಿಸುವ ರೂಪದಲ್ಲಿ ಅನುಭವ ಮಂಟಪ ನಿರ್ಮಾಣವಾಗಲಿದೆ.
ಅನುಭವ ಮಂಟಪದಲ್ಲಿ 12ನೇ ಶತಮಾನದಲ್ಲಿ ಇದ್ದಂತಹ ವಚನಕಾರರು ದಾರ್ಶನಿಕ ಪುರುಷರ ಕುರಿತಾದ ಮಾಹಿತಿ ನೀಡುವಂತಹ ಕಿರು ಚಿತ್ರಗಳ ಪ್ರದರ್ಶನ, ಬಸವಣ್ಣನವರ ಜೀವನ ಸಾಧನೆ ಬಿಂಬಿಸುವ ಮಾಹಿತಿಗಳನ್ನು ಅನುಭವ ಮಂಟಪಕ್ಕೆ ಆಗಮಿಸುವ ಎಲ್ಲರಿಗೂ ವಿವರಿಸುವ ವ್ಯವಸ್ಥೆ ಈ ಅನುಭವ ಮಂಟಪದಲ್ಲಿ ಇರಲಿದೆ.
ಹೊಸ ಸಂಸತ್ ಕಟ್ಟಡ ಆಕರ್ಷಣೆ: ಲೋಕಸಭೆಯ ಒಳಾಂಗಣ ಪ್ರದೇಶ ಹಾಲಿ ಇರುವುದಕ್ಕಿಂತ ಮೂರು ಪಟ್ಟು ಹೆಚ್ಚಾಗಲಿದೆ ಮತ್ತು ರಾಜ್ಯಸಭೆಯ ವಿಸ್ತ್ರೀರ್ಣ ಗಣನೀಯವಾಗಿ ಹೆಚ್ಚಾಗಲಿದೆ. ಹೊಸ ಭವನ ಒಳಾಂಗಣ ವಿನ್ಯಾಸದಲ್ಲಿ ಭಾರತೀಯ ಸಂಸ್ಕೃತಿ ಮತ್ತು ನಮ್ಮ ಪ್ರಾದೇಶಿಕ ಕಲೆ, ಕರಕುಶಲಕಲೆ, ಜವಳಿ ಮತ್ತು ವಾಸ್ತುಶಿಲ್ಪ ಸೇರಿದಂತೆ ವೈವಿಧ್ಯತೆಯ ಸಮ್ಮಿಶ್ರಣವಾಗಿರಲಿದೆ. ಇದರ ವಿನ್ಯಾಸದಲ್ಲಿ ಅದ್ಭುತ ಕೇಂದ್ರೀಯ ಸಂವಿಧಾನ ಗ್ಯಾಲರಿಗೆ ಸ್ಥಳಾವಕಾಶ ಕಲ್ಪಿಸಲಾಗಿದ್ದು, ಅದಕ್ಕೆ ಸಾರ್ವಜನಿಕರ ಭೇಟಿ ನೀಡಲು ಅವಕಾಶವಿರಲಿದೆ.