ನವದೆಹಲಿ ಅನ್ ಲಾಕ್: ಯಾವೆಲ್ಲ ಅಂಗಡಿ, ಸರ್ಕಾರಿ ಸೇವೆ ಪುನಾರಂಭ?
ನವದೆಹಲಿ, ಜೂನ್ 13: ನೊವೆಲ್ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನಿಂದ ನಲುಗಿದ ರಾಷ್ಟ್ರ ರಾಜಧಾನಿಯಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ. ಸೋಮವಾರದಿಂದ ನವದೆಹಲಿಯಲ್ಲಿ ಅನ್ ಲಾಕ್ ಪ್ರಕ್ರಿಯೆ ಶುರು ಆಗಲಿದೆ.
ನವದೆಹಲಿಯಲ್ಲಿ ಸಮ-ಬೆಸ ನೀತಿ ಅನ್ವಯ ಅಂಗಡಿ, ಮಾಲ್, ರೆಸ್ಟೋರೆಂಟ್ ಅನ್ನು ವಾರದ ಏಳೂ ದಿನ ತೆರೆಯುವುದಕ್ಕೆ ಅನುಮತಿ ನೀಡಲಾಗಿದೆ. ಮುಂದಿನ ಏಳು ದಿನಗಳವರೆಗೆ ಪ್ರಾಯೋಗಿಕವಾಗಿ ಈ ನಿಯಮದ ಅಡಿಯಲ್ಲಿ ಅನ್ ಲಾಕ್ ಮಾಡಲಾಗುವುದು. ಈ ಅವಧಿಯಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಏರಿಳಿತದ ಮೇಲೆ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತಿಳಿಸಿದ್ದಾರೆ.
ಸಿಹಿಸುದ್ದಿ: ಈ ಚಿಕಿತ್ಸೆ ಪಡೆದರೆ 24 ಗಂಟೆಗಳಲ್ಲಿ ಕೊರೊನಾವೈರಸ್ ಮಾಯ!?
ಬೆಳಗ್ಗೆ 10 ಗಂಟೆಯಿಂದ ರಾತ್ರಿ 8 ವರೆಗೂ ಅಂಗಡಿಗಳನ್ನು ತೆರೆಯುವುದಕ್ಕೆ ನಿರ್ಧಾರ ತೆಗೆದುಕೊಳ್ಳಲಾಗಿದೆ. ಪಾರ್ಸಲ್ ಮತ್ತು ಹೋಮ್ ಡೆಲಿವರಿಗೆ ಮಾತ್ರ ಸೀಮಿತವಾಗಿರುವ ರೆಸ್ಟೋರೆಂಟ್ ಅನ್ನು ಶೇ.50ರಷ್ಟು ಸಾಮರ್ಥ್ಯದೊಂದಿಗೆ ತೆರಯಲು ಅವಕಾಶ ನೀಡಲಾಗಿದೆ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸ್ಪಷ್ಟಪಡಿಸಿದ್ದಾರೆ.
ವಾರಾಂತ್ಯದಲ್ಲಿ ಮಾರ್ಕೆಟ್ ತೆರಯಲು ಅನುಮತಿ
ನವದೆಹಲಿಯಲ್ಲಿ ವಾರಾಂತ್ಯದ ಮಾರುಕಟ್ಟೆಯ ಕಾರ್ಯ ಚಟುವಟಿಕೆಗಳಿಗೆ ಅನುಮತಿ ನೀಡಲಾಗಿದೆ. ಒಂದು ಪಾಲಿಕೆ ವ್ಯಾಪ್ತಿಯ ಮಾರುಕಟ್ಟೆಯಲ್ಲಿ ಶೇ.50ರಷ್ಟು ವ್ಯಾಪಾರಿಗಳಿಗೆ ಮಾತ್ರ ಅವಕಾಶ ನೀಡಲಾಗಿದೆ. ಸೆಲೂನ್ ಅಂಗಡಿಗಳನ್ನು ತೆರೆಯಲು ಅನುಮತಿಸಲಾಗಿದ್ದು, ಸ್ಪಾಗಳು ಮುಚ್ಚಿರಲಿವೆ.
ದೆಹಲಿಯಲ್ಲಿ ಸರ್ಕಾರಿ ಕಚೇರಿ, ಮೆಟ್ರೋ ಸಂಚಾರ?
ನವದೆಹಲಿಯಲ್ಲಿ ಸರ್ಕಾರಿ ಕಚೇರಿಗಳು, ಖಾಸಗಿ ಕಚೇರಿಗಳಲ್ಲಿ ಶೇ.50ರಷ್ಟು ಸಾಮರ್ಥ್ಯದ ಸಿಬ್ಬಂದಿಯನ್ನು ಒಳಗೊಂಡಂತೆ ಕಾರ್ಯ ನಿರ್ವಹಿಸುವುದಕ್ಕೆ ಅನುಮತಿ ನೀಡಲಾಗಿದೆ. ದೆಹಲಿಯ ಬಸ್ ಹಾಗೂ ಮೆಟ್ರೋ ಸಂಚಾರದ ಆರಂಭವಾಗಲಿದ್ದು, ಶೇ.50ರಷ್ಟು ಸಾಮರ್ಥ್ಯದ ಪ್ರಮಾಣಿಕರಿಗೆ ಅವಕಾಶ ನೀಡಲಾಗಿದೆ.
ಶಾಲಾ-ಕಾಲೇಜು ತೆರೆಯಲು ಅನುಮತಿ ಇಲ್ಲ
ರಾಷ್ಟ್ರ ರಾಜಧಾನಿಯಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಮುಖವಾದರೂ ಶಾಲಾ-ಕಾಲೇಜುಗಳನ್ನು ತೆರೆಯುವುದಕ್ಕೆ ಅನುಮತಿ ನೀಡುವುದಿಲ್ಲ ಎಂದು ಸರ್ಕಾರವೇ ಸ್ಪಷ್ಟಪಡಿಸಿದೆ. ಮುಂದಿನ ಆದೇಶದವರೆಗೂ ಸರ್ಕಾರಿ ಹಾಗೂ ಖಾಸಗಿ ಶಾಲಾ-ಕಾಲೇಜು ಮತ್ತು ಶೈಕ್ಷಣಿಕ ಸಂಸ್ಥೆಗಳನ್ನು ಬಂದ್ ಮಾಡುವುದಾಗಿ ಹೇಳಲಾಗಿದೆ. ಇದರ ಜೊತೆ ಸ್ವಿಮ್ಮಿಂಗ್ ಪೂಲ್, ಅಮ್ಯೂಸ್ ಮೆಂಟ್ ಪಾರ್ಕ್, ವಾಟರ್ ಪಾರ್ಕ್ ಮುಚ್ಚಿರುತ್ತವೆ. ಸಾರ್ವಜನಿಕ ಸಭೆ ಸಮಾರಂಭಗಳಿಗೆ ನಿರ್ಬಂಧ ವಿಧಿಸಲಾಗಿದೆ. ಧಾರ್ಮಿಕ ಕೇಂದ್ರಗಳು ತೆರೆಯುತ್ತವೆಯಾದರೂ ಭಕ್ತರ ಪ್ರವೇಶಕ್ಕೆ ಅನುಮತಿಯಿಲ್ಲ.
"ಹಳಿಗೆ ಮರಳಿದಂತೆ ದೆಹಲಿ ಜನತೆ ಬದುಕು"
"ಒಂದು ವೇಳೆ ಕೊರೊನಾವೈರಸ್ ಸೋಂಕಿತ ಪ್ರಕರಣಗಳು ಇಲ್ಲಿಂದ ಇಳಿಮುಖವಾದರೆ ಜನರ ಬದುಕು ಮರಳಿ ಹಳಿಗೆ ಬಂದಂತೆ ಆಗುತ್ತದೆ. ಕೊವಿಡ್-19 ಎಂಬುದು ಒಂದು ದೊಡ್ಡ ದುರಂತವಾಗಿದ್ದು, ನಾವೆಲ್ಲರೂ ಒಟ್ಟಾಗಿದ್ದುಕೊಂಡು ಇದನ್ನು ಎದುರಿಸಬೇಕಿದೆ" ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮನವಿ ಮಾಡಿಕೊಂಡಿದ್ದಾರೆ.
ಕೊರೊನಾವೈರಸ್ ಸೋಂಕಿತ ಪ್ರಕರಣಗಳು
ದೆಹಲಿಯಲ್ಲಿ ಒಂದೇ ದಿನ 255 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿದ್ದು, 23 ಮಂದಿ ಪ್ರಾಣ ಬಿಟ್ಟಿದ್ದಾರೆ. ರಾಜ್ಯದಲ್ಲಿ 14,02,850 ಕೊವಿಡ್-19 ಸೋಂಕಿತರು ಗುಣಮುಖರಾಗಿದ್ದು, ಇದರ ಹೊರತಾಗಿ 3,466 ಸಕ್ರಿಯ ಪ್ರಕರಣಗಳಿವೆ. ನವದೆಹಲಿಯಲ್ಲಿ ಮಹಾಮಾರಿಗೆ ಈವರೆಗೂ 24,823 ಜನರು ಪ್ರಾಣ ಬಿಟ್ಟಿದ್ದಾರೆ.