ದೆಹಲಿ ವಿವಿ ಮಾಜಿ ಉಪನ್ಯಾಸಕ ಎಸ್ಎಆರ್ ಗಿಲಾನಿ ಬಂಧನ
ನವದೆಹಲಿ,ಫೆಬ್ರವರಿ,16: ಭಾರತದ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ಕೈಗೊಂಡ ಜೆಎನ್ ಯು ಪ್ರಕರಣದ ಪ್ರಮುಖ ಆರೋಪಿಗಳ ಬೇಟೆ ಆರಂಭಿಸಿದ ದೆಹಲಿ ಪೊಲೀಸರು ದೆಹಲಿ ವಿಶ್ವವಿದ್ಯಾಲಯದ ಮಾಜಿ ಉಪನ್ಯಾಸಕ ಎಸ್ ಎ ಆರ್ ಗಿಲಾನಿ ಅವರನ್ನು ಬಂಧಿಸಿದ್ದು, ಮರೆಸಿಕೊಂಡಿರುವ ವಿದ್ಯಾರ್ಥಿಗಳ ಶೋಧಕ್ಕಾಗಿ ವಿಶೇಷ ತನಿಖಾದಳ ನಿಯೋಜಿಸಿದೆ.
ದೆಹಲಿ ಪೊಲೀಸರಿಗೆ ದೊರೆತಿರುವ ಕೆಲವು ವೀಡಿಯೋದಲ್ಲಿ ಕನ್ಹಯ್ಯ ಕುಮಾರ್ ಹಾಗೂ ಇನ್ನಿತರ ವಿದ್ಯಾರ್ಥಿಗಳು ಭಾರತದ ವಿರುದ್ಧ ಘೋಷಣೆಗಳನ್ನು ಕೂಗಿರುವುದು ಸ್ಪಷ್ಟವಾಗಿ ಗೋಚರವಾಗಿದೆ. ಆದ ಕಾರಣ ಕನ್ಹಯ್ಯ ಕುಮಾರ್ , ಎಸ್ ಎಆರ್ ಗಿಲಾನಿ ಹಾಗೂ ಕೆಲವು ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ, ಉಳಿದವರನ್ನು ಶೀಘ್ರವೇ ಬಂಧಿಸಲಾಗುವುದು ಎಂದು ದೆಹಲಿ ಪೊಲೀಸ್ ಕಮೀಷನರ್ ಬಿ.ಎಸ್ ಬಸ್ಸಿ ತಿಳಿಸಿದ್ದಾರೆ.[ಅಮಿತ್ ಶಾ 8 ಪ್ರಶ್ನೆಗಳಿಗೆ ಕಾಂಗ್ರೆಸ್ ಒಂದೇ ವಾಕ್ಯದ ಉತ್ತರ!]
ದೆಹಲಿ ಪೊಲೀಸರು ಈ ಕೃತ್ಯದಲ್ಲಿ ಭಾಗಿಯಾದ ದೆಹಲಿ ವಿಶ್ವವಿದ್ಯಾಲಯದ ಮಾಜಿ ಉಪನ್ಯಾಸಕ ಎಸ್ ಎಆರ್ ಗಿಲಾನಿ ಅವರನ್ನು ಬಂಧಿಸಿ ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 124 ಎ( ದೇಶದ್ರೋಹ), 120ಬಿ (ಕ್ರಮಿನಲ್ ಸಂಚು) 149 ಪ್ರಕಾರ ಕೇಸು ದಾಖಲಿಸಿಕೊಳ್ಳಲಾಗಿದೆ. ಇನ್ನಿತರ ವಿದ್ಯಾರ್ಥಿಗಳನ್ನು ತಕ್ಷಣವೇ ಬಂಧಿಸಿ ತನಿಖೆ ತೀವ್ರಗೊಳಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.
ಸಂಸತ್ ಮೇಲೆ ದಾಳಿ ನಡೆಸಿದ ಆರೋಪಿ ಅಫ್ಜಲ್ ಗುರು ಗಲ್ಲಿಗೆರಿಸಿದ್ದನ್ನು ವಿರೋಧಿಸಿ ವಿದ್ಯಾರ್ಥಿಗಳ ಗುಂಪೊಂದು ಜವಾಹರಲಾಲ್ ವಿಶ್ವವಿದ್ಯಾಲಯದಲ್ಲಿ ಕಾರ್ಯಕ್ರಮವೊಂದರಲ್ಲಿ ಕೆಲವು ವಿದ್ಯಾರ್ಥಿಗಳು ಭಾರತದ ವಿರುದ್ಧ ಘೋಷಣೆಗಳನ್ನು ಕೂಗಿದ್ದರು. ಈ ಸಂಬಂಧ ಕನ್ಹಯ್ಯ ಕುಮಾರ್ ಅವರನ್ನು ಬಂಧಿಸಲಾಗಿದೆ.[ಅಫ್ಜಲ್ ಗುರು ಪರ ವಿವಾದ: ನ್ಯಾಯಾಂಗ ಸಮಿತಿ ತನಿಖೆ, ಕನ್ಹಯ್ಯಾ ಡಿಬಾರ್]
ಅಲ್ಲದೇ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹಾಗೂ ಕಾಂಗ್ರೆಸ್ ಉಪಾಧ್ಯಕ್ಷಾ ರಾಹುಲ್ ಗಾಂಧಿ ಅವರ ನಡುವೆ ಪ್ರಶ್ನೋತ್ತರದ ಬಾಣಗಳು ಹರಿದಾಡಿವೆ. ಒಟ್ಟಿನಲ್ಲಿ ಈ ಪ್ರಕರಣ ದಿನದಿಂದ ದಿನಕ್ಕೆ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಲೇ ಸಾಗಿದೆ.