ದೆಹಲಿ - ಆಗ್ರಾ ಶತಾಬ್ದಿ ಎಕ್ಸ್ ಪ್ರೆಸ್ ರೈಲಿನಲ್ಲೊಂದು ವಿಲಕ್ಷಣ ಘಟನೆ
ನವದೆಹಲಿ, ಜುಲೈ 3: ನವದೆಹಲಿ - ಆಗ್ರಾ - ಹಬೀಬ್ ಗಂಜ್ ಶತಾಬ್ದಿ ಎಕ್ಸ್ ಪ್ರೆಸ್ ರೈಲಿನ ಪ್ರಯಾಣಿಕರು ವಿಲಕ್ಷಣ ಘಟನೆಯೊಂದಕ್ಕೆ ಸಾಕ್ಷಿಯಾದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಕಳೆದ ಭಾನುವಾರ (ಜೂ 30) ನವದೆಹಲಿ ನಿಲ್ದಾಣದಿಂದ 32ವರ್ಷದ ಮನೀಶ್ ಅರೋರಾ ಎನ್ನುವ ವ್ಯಕ್ತಿ, ತನ್ನ ತಾಯಿಯೊಂದಿಗೆ ಈ ರೈಲಿನಲ್ಲಿ ಪ್ರಯಾಣಿಸುತ್ತಿದ್ದ. ಮಥುರಾ ಜಂಕ್ಷನ್ ನಲ್ಲಿ ಇವರಿಬ್ಬರು ಇಳಿಯಬೇಕಾಗಿತ್ತು.
ಭಾರತೀಯ ರೈಲ್ವೆ ಖಾಸಗೀಕರಣ : ಸಚಿವ ಪಿಯೂಶ್ ಗೋಯಲ್ ಸ್ಪಷ್ಟನೆ
ದೆಹಲಿ ನಿಲ್ದಾಣದಿಂದ ಹೊರಟ ಕೂಡಲೇ ತಾಯಿಗೆ ಬೆಳಗ್ಗಿನ ತಿಂಡಿಯನ್ನು ಈತ ನೀಡಿದ್ದ. ಆದರೆ, ಮಥುರಾ ನಿಲ್ದಾಣ ಬಂದರೂ ತಾಯಿ ತಿಂಡಿ ತಿಂದು ಮುಗಿಸಿರಲಿಲ್ಲ. ಆದರೆ, ಅಷ್ಟೊತ್ತಿಗೆ ಮಥುರಾ ನಿಲ್ದಾಣದಿಂದ ಹೊರಡಲು ರೈಲಿನ ಸೈರನ್ ಮೊಳಗಲಾರಂಭಿಸಿತು.
ತಾಯಿಯ ತಿಂಡಿ ತಿಂದು ಇನ್ನೂ ಮುಗಿಸಲಿಲ್ಲ ಎನ್ನುವ ಕಾರಣಕ್ಕಾಗಿ ರೈಲಿನ ಚೈನ್ ಅನ್ನು ಎಳೆದು ಈತ ಟ್ರೈನ್ ಅನ್ನು ನಿಲ್ಲಿಸಿದ್ದಾನೆ. ಸ್ಥಳಕ್ಕೆ ಕೂಡಲೇ ಆಗಮಿಸಿದ ರೈಲ್ವೆ ಅಧಿಕಾರಿಗಳು ಮತ್ತು ಪೊಲೀಸರು ಈತನನ್ನು ವಿಚಾರಿಸಿದಾಗ, ತಾಯಿಯ ತಿಂಡಿ ತಿಂದು ಮುಗಿದಿಲ್ಲ ಎನ್ನುವ ಕಾರಣಕ್ಕಾಗಿ ಚೈನ್ ಎಳೆದೆ ಎಂದು ಹೇಳಿದ್ದಾನೆ.
ರೈಲ್ವೆ ಪೊಲೀಸರು ಈತನನ್ನು ಬಂಧಿಸಿ, ಮ್ಯಾಜಿಸ್ಟ್ರೇಟರ್ ಮುಂದೆ ಹಾಜರು ಪಡಿಸಿ, ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ಅರೋರಾ, ನವದೆಹಲಿಯ ಯಮುನ ವಿಹಾರಿ ನಿವಾಸಿಯಾಗಿದ್ದು, ಕೋರ್ಟ್ ನಿಗದಿ ಪಡಿಸಿದ ದಿನಾಂಕದಂದು ಹಾಜರಾಗುವಂತೆ ಸೂಚಿಸಲಾಗಿದೆ.
ಕ್ಷುಲ್ಲಕ ಕಾರಣಕ್ಕಾಗಿ ಚೈನ್ ಎಳೆಯುವ ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದ್ದು, ಆಗ್ರಾ ರೈಲ್ವೆ ನಿಲ್ದಾಣ ಒಂದರಲ್ಲೇ ಇದುವರೆಗೆ ಸುಮಾರು ಆರು ಲಕ್ಷ ದಂಡ ಸಂಗ್ರಹಿಸಲಾಗಿದೆ