ನೇತಾಜಿ ಸಾವಿನ ನಿಗೂಢತೆಗೆ ತೆರೆ ಎಳೆದ ಕೇಂದ್ರ ಸರ್ಕಾರ
ಮಾಹಿತಿ ಹಕ್ಕು ಕಾಯ್ದೆ (ಆರ್ ಟಿಐ)ಯಡಿ ಸಲ್ಲಿಸಿದ್ದ ಅರ್ಜಿಯೊಂದಕ್ಕೆ ಪ್ರತಿಕ್ರಿಯಿಸಿದ ಕೇಂದ್ರ ಸರ್ಕಾರ ನೇತಾಜಿ ಸಾವಿನ ಕುರಿತು ಹಬ್ಬಿದ್ದ ಎಲ್ಲಾ ಊಹಾಪೋಹಗಳಿಗೆ ತೆರೆಯೆಳೆದಿದೆ.
ನವದೆಹಲಿ, ಮೇ 31: ನೇತಾಜಿ ಸುಭಾಷ್ ಚಂದ್ರ ಬೋಸ್ ಅಸುನೀಗಿದ್ದು, 1945 ರಲ್ಲಿ ನಡೆದ ವಿಮಾನ ಅಪಘಾತದಲ್ಲೇ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಮಾಹಿತಿ ಹಕ್ಕು ಕಾಯ್ದೆ (ಆರ್ ಟಿಐ)ಯಡಿ ಸಲ್ಲಿಸಿದ್ದ ಅರ್ಜಿಯೊಂದಕ್ಕೆ ಪ್ರತಿಕ್ರಿಯಿಸಿದ ಕೇಂದ್ರ ಸರ್ಕಾರ ನೇತಾಜಿ ಸಾವಿನ ಕುರಿತು ಹಬ್ಬಿದ್ದ ಎಲ್ಲಾ ಊಹಾಪೋಹಗಳಿಗೆ ತೆರೆಯೆಳೆದಿದೆ.
ನೇತಾಜಿ ಸಾವಿನ ಕುರಿತು ತನಿಖೆ ನಡೆಸುವುದಕ್ಕಾಗಿ ರಚಿಸಿದ್ದ ಶಾ ನವಾಜ್ ಸಮಿತಿ, ನ್ಯಾ.ಜೆ.ಡಿ.ಕೋಸ್ಲಾ ಸಮಿತಿ ಮತ್ತು ನ್ಯಾ. ಮುಖರ್ಜಿ ಸಮಿತಿ ನಡೆಸಿದ ತನಿಖೆಯ ವರದಿಯನ್ನು ಗಮನಿಸಿದ ಕೇಂದ್ರ ಸರ್ಕಾರ ಈ ಪ್ರತಿಕ್ರಿಯೆ ನೀಡಿದೆ.
ಮಾಹಿತಿ ಹಕ್ಕು ಕಾಯ್ದೆಯಡಿ ಸಾಯಕ್ ಸೇನ್ ಎನ್ನುವವರು ಅರ್ಜಿ ಸಲ್ಲಿಸಿದ್ದರು. ಉತ್ತರ ಪ್ರದೇಶದಲ್ಲಿ 1985 ರವರೆಗೂ ಬದುಕಿದ್ದ ಗುಮ್ನಾಮಿಬಾಬಾ ಅಥವಾ ಭಗವಾನ್ ಜಿಯೇ ಸುಭಾಷ್ ಚಂದ್ರ ಬೋಸ್ ಎಂದು ಹಲವು ವದಂತಿಗಳು ಹಬ್ಬಿದ್ದವು.
ಈ ಕುರಿತೂ ಸಾಯಕ್ ಸೇನ್ ತಮ್ಮ ಅರ್ಜಿಯಲ್ಲಿ ಉಲ್ಲೇಖಿಸಿದ್ದರು. ಆದರೆ ಗುಮ್ನಾಮಿಬಾಬಾ ಅಥವಾ ಭಗವಾನ್ ಜಿಗೂ ಸುಭಾಷ್ ಚಂದ್ರ ಬೋಸ್ ಗೂ ಯಾವುದೇ ಸಂಬಂಧವಿಲ್ಲ. ಅವರೇ ಬೇರೆ, ಇವರೇ ಬೇರೆ ಎಂದು ಇಂದು ಕೇಂದ್ರ ಸರ್ಕಾರ ಪ್ರತಿಕ್ರಿಯಿಸುವ ಮೂಲಕ ನೇತಾಜಿ ಸಾವಿನ ನಿಗೂಢತೆಗೆ ತೆರೆಯೆಳೆದಿದೆ.