ನೇತಾಜಿ ಸಾವಿನ ನಿಗೂಢತೆಗೆ ಇನ್ನೂ ಅಂತ್ಯ ಸಿಕ್ಕಿಲ್ಲ!
ಇದ್ದಕ್ಕಿದ್ದಂತೆಯೇ ಯೂಟರ್ನ್ ತೆಗೆದುಕೊಂಡಿರುವ ಕೇಂದ್ರ ಗೃಹ ಸಚಿವಾಲಯ, ನೇತಾಜಿ ಸಾವಿನ ಕುರಿತು ಆರ್ ಟಿ ಐ ಅರ್ಜಿಗೆ ನೀಡಿದ ಪ್ರತಿಕ್ರಿಯೆಯಲ್ಲಿ ಮುದ್ರಣ ದೋಷವಿದೆ ಎಂಬ ಹೊಸ ಬಾಂಬ್ ಸಿಡಿಸಿದೆ.
ನವದೆಹಲಿ, ಜೂನ್ 03: ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು 1945 ರಲ್ಲಿ ನಡೆದ ವಿಮಾನ ಅಪಘಾತದಲ್ಲೇ ಅಸುನಿಗಿದ್ದರು ಎಂದು ಕೇಂದ್ರ ಸರ್ಕಾರ ಮಾಹಿತಿ ಹಕ್ಕು ಕಾಯ್ದೆಯನ್ವಯ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಅರ್ಜಿಗೆ ಉತ್ತರಿಸಿತ್ತು ಎಂದು ಸುದ್ದಿಯಾಗಿತ್ತು.
ಆದರೆ ಇದೀಗ ಇದ್ದಕ್ಕಿದ್ದಂತೆಯೇ ಯೂಟರ್ನ್ ತೆಗೆದುಕೊಂಡಿರುವ ಕೇಂದ್ರ ಗೃಹ ಸಚಿವಾಲಯ, ನೇತಾಜಿ ಸಾವಿನ ಕುರಿತು ಆರ್ ಟಿ ಐ ಅರ್ಜಿಗೆ ನೀಡಿದ ಪ್ರತಿಕ್ರಿಯೆಯಲ್ಲಿ ಮುದ್ರಣ ದೋಷವಿದೆ ಎಂಬ ಹೊಸ ಬಾಂಬ್ ಸಿಡಿಸಿದೆ.[ನೇತಾಜಿ ಸಾವಿನ ನಿಗೂಢತೆಗೆ ತೆರೆ ಎಳೆದ ಕೇಂದ್ರ ಸರ್ಕಾರ]
ನೇತಾಜಿ ಸಾವಿನ ಕುರಿತು ತನಿಖೆ ನಡೆಸುವುದಕ್ಕಾಗಿ ರಚಿಸಿದ್ದ ಶಾ ನವಾಜ್ ಸಮಿತಿ, ನ್ಯಾ.ಜೆ.ಡಿ.ಕೋಸ್ಲಾ ಸಮಿತಿ ಮತ್ತು ನ್ಯಾ. ಮುಖರ್ಜಿ ಸಮಿತಿ ನಡೆಸಿದ ತನಿಖೆಯ ವರದಿಯನ್ನು ಗಮನಿಸಿದ ಕೇಂದ್ರ ಸರ್ಕಾರ ನೇತಾಜಿ ಅಸುನೀಗಿದ್ದು ವಿಮಾನಾಪಘಾತದಲ್ಲೇ 'ಎಂದಿತ್ತು' ಎನ್ನುವ ಬದಲು ಆರ್ ಟಿ ಐ ಪ್ರತಿಕ್ರಿಯೆಯಲ್ಲಿ 'ಎಂದಿದೆ' ಎಂದು ಮುದ್ರಿಸಲಾಗಿದ್ದು, ಈ ಮಾತು ವರ್ತಮಾನಕಾಲವನ್ನು ಸೂಚಿಸುವಂತಿದೆ.
ಆದರೆ ಹಾಲಿ ಗೃಹಸಚಿವಾಲಯ, 2006 ರಲ್ಲಿ ಸರ್ಕಾರ ನೇತಾಜಿ ಸಾವಿನ ಊಹಾಪೋಹಗಳಿಗೆ ಈ ರೀತಿ ಉಪಸಂಹಾರ ನೀಡಿತ್ತು ಎಂದಷ್ಟೇ ಹೇಳಿದೆಯೇ ಹೊರತು, ತನ್ನ ತೀರ್ಮಾನವನ್ನು ಇನ್ನೂ ಹೇಳಿಲ್ಲ ಎಂದು ಇದೀಗ ಸ್ಪಷ್ಟಪಡಿಸಿದೆ.
ನೇತಾಜಿ ಸಾವಿನ ಕುರಿತು ಮಾಹಿತಿ ಹಕ್ಕು ಕಾಯ್ದೆಯಡಿ ಸಾಯಕ್ ಸೇನ್ ಎನ್ನುವವರು ಅರ್ಜಿ ಸಲ್ಲಿಸಿದ್ದರು. ಉತ್ತರ ಪ್ರದೇಶದಲ್ಲಿ 1985 ರವರೆಗೂ ಬದುಕಿದ್ದ ಗುಮ್ನಾಮಿಬಾಬಾ ಅಥವಾ ಭಗವಾನ್ ಜಿಯೇ ಸುಭಾಷ್ ಚಂದ್ರ ಬೋಸ್ ಎಂದು ಹಲವು ವದಂತಿಗಳು ಹಬ್ಬಿದ್ದವು. ಈ ಕುರಿತೂ ಸಾಯಕ್ ಸೇನ್ ತಮ್ಮ ಅರ್ಜಿಯಲ್ಲಿ ಉಲ್ಲೇಖಿಸಿದ್ದರು.
ಕೇಂದ್ರ ಸರ್ಕಾರದ ಈ ದ್ವಂದ್ವ ತೀರ್ಮಾನದ ಬಗ್ಗೆ ಎಲ್ಲೆಡೆ ಚರ್ಚೆಯಾಗುತ್ತಿದ್ದು, ಗೃಹಸಚಿವಾಲಯದ ಈ ಹೇಳಿಕೆಯಿಂದಾಗಿ ನೇತಾಜಿ ಸಾವಿನ ನಿಗೂಢತೆ ಮತ್ತಷ್ಟು ಜಟಿಲವಾದಂತಾಗಿದೆ.