ಬೆಕ್ಕು ಹುಡುಕಿ ಕೊಟ್ಟವರಿಗೆ 15000 ರೂಪಾಯಿ ಬಹುಮಾನ!
ನವದೆಹಲಿ, ನವೆಂಬರ್.13: ಕೆಂಪು ಕಣ್ಣು, ಮೂಗಿನ ಮೇಲೆ ಕಂದು ಬಣ್ಣದ ಚುಕ್ಕೆ. ಈ ಗುರುತಿರುವ ಬೆಕ್ಕನ್ನು ಹುಡುಕಿ ಕೊಟ್ಟವರಿಗೆ 15000 ರೂಪಾಯಿ ಬಹುಮಾನ. ಇಂಥದೊಂದು ವಿಚಿತ್ರ ಆಫರ್ ಕೊಟ್ಟಿರುವುದು ನೇಪಾಳದ ಮಾಜಿ ಚುನಾವಣಾ ಆಯುಕ್ತರಾದ ಇಲಾ ಶರ್ಮಾ.
ಭಾರತೀಯ ಚುನಾವಣಾ ಆಯೋಗದ ಮಾಜಿ ಆಯುಕ್ತರಾದ ಎಸ್.ವೈ.ಖುರೇಷಿ ಅವರ ಪತ್ನಿಯೇ ಇಲಾ ಶರ್ಮಾ. ಕಳೆದ ಬುಧವಾರ ಗೋರಖ್ ಪುರ್ ನಲ್ಲಿ ತಾವು ಕಳೆದುಕೊಂಡಿರುವ ಬೆಕ್ಕನ್ನು ಹುಡುಕಿ ಕೊಟ್ಟವರಿಗೆ ವಿಶೇಷ ಬಹುಮಾನವನ್ನು ನೀಡುವುದಾಗಿ ಘೋಷಿಸಿದ್ದಾರೆ.
ಮನುಷ್ಯನಿಂದ ಅಂಟಿದ ಕೊರೊನಾವೈರಸ್ ನಿಂದ 10000 ಪ್ರಾಣಿಗಳು ಬಲಿ!
ರೈಲ್ವೆ ಹಾರ್ನ್ ಶಬ್ಧವನ್ನು ಕೇಳಿದ ಬೆಕ್ಕಿ ಗಾಬರಿಯಿಂದ ಓಡಿ ಹೋಗಿದ್ದು, ನಾಪತ್ತೆ ಆಗಿದೆ ಎಂದು ರೈಲ್ವೆ ಪೊಲೀಸ್ ಅಧಿಕಾರಿ ಬ್ರಿಜ್ಬನ್ ಪಾಂಡೆ ಹೇಳಿದ್ದಾರೆ. ಮೊದಲಿಗೆ ಬೆಕ್ಕು ಹುಡುಕಿ ಕೊಟ್ಟವರಿಗೆ 11,000 ಬಹುಮಾನ ನೀಡುವುದಾಗಿ ಇಲಾ ಶರ್ಮಾ ಘೋಷಿಸಿದ್ದರು. ಆದರೆ ತದನಂತರದಲ್ಲಿ ಈ ಮೊತ್ತವನ್ನು 15,000 ರೂಪಾಯಿಗೆ ಹೆಚ್ಚಿಸಿದ್ದಾರೆ ಎಂದು ತಿಳಿದು ಬಂದಿದೆ.
ಬೆಕ್ಕಿಗಾಗಿ ಗೋರಖ್ ಪುರ್ ನಲ್ಲೇ ವಾಸ್ತವ್ಯ:
ಕಳೆದ ಬುಧವಾರ ಉತ್ತರ ಪ್ರದೇಶದ ಗೋರಖ್ ಪುರ್ ನಿಂದ ನವದೆಹಲಿಗೆ ರೈಲ್ವೆ ಟಿಕೆಟ್ ಬುಕ್ ಮಾಡಿದ್ದ ಇಲಾ ಶರ್ಮಾ ಅವರು ತಮ್ಮ ಪುತ್ರಿ ಸಚಿ ಹಾಗೂ ಕಾರು ಚಾಲಕ ಸುರೀಂದರ್ ಜೊತೆಗೆ ರೈಲ್ವೆ ನಿಲ್ದಾಣದ 6ನೇ ಪ್ಲಾಟ್ ಫಾರ್ಮ್ ನಲ್ಲಿ ಕಾದು ಕುಳಿತಿದ್ದರು. ಅಂದು ಬೆಕ್ಕು ನಾಪತ್ತೆಯಾದ ಹಿನ್ನೆಲೆ ರೈಲ್ವೆ ಟಿಕೆಟ್ ರದ್ದುಗೊಳಿಸಿದ ಇಲಾ ಶರ್ಮಾ ಅವರು ಕಳೆದ ಮೂರು ದಿನಗಳಿಂದ ಗೋರಖ್ ಪುರದಲ್ಲಿಯೇ ವಾಸ್ತವ್ಯ ಹೂಡಿದ್ದಾರೆ.
ನಗರದ ಹಲವು ಕಡೆಗಳಲ್ಲಿ ಬೆಕ್ಕಿನ ಬಗ್ಗೆ ಪೋಸ್ಟರ್ ಗಳನ್ನು ಅಂಟಿಸಲಾಗಿದ್ದು, ನಾವೂ ಕೂಡಾ ಬೆಕ್ಕಿನ ಪತ್ತೆಯಾಗಿ ಶೋಧ ನಡೆಸುತ್ತಿದ್ದೇವೆ. ಆದರೆ ಇದುವರೆಗೂ ಬೆಕ್ಕು ಎಲ್ಲಿದೆ ಎಂಬುದು ಪತ್ತೆಯಾಗಿಲ್ಲ ಎಂದು ರೈಲ್ವೆ ಪೊಲೀಸ್ ಇನ್ಸ್ ಪೆಕ್ಟಟರ್ ಬ್ರಿಜ್ಬನ್ ಪಾಂಡೆ ಹೇಳಿದ್ದಾರೆ. ಇಲಾ ಶರ್ಮಾ ಅವರು ಯಾರ ವಿರುದ್ಧವೂ ಈ ಕುರಿತು ದೂರು ನೀಡಿಲ್ಲ. ಬದಲಿಗೆ ನಾಪತ್ತೆ ಆಗಿರುವ ತಮ್ಮ ಬೆಕ್ಕು ಹುಡುಕಿ ಕೊಡುವಂತೆ ಮನವಿ ಮಾಡಿಕೊಂಡಿದ್ದಾರೆ.