ನ್ಯಾಯಮೂರ್ತಿಗಳ ನಡುವೆ ಸಂಧಾನ, ವಿವಾದ ಇತ್ಯರ್ಥ
ನವದೆಹಲಿ, ಜನವರಿ 15: ದೇಶದ ಗಮನ ಸೆಳೆದಿದ್ದ ನಾಲ್ವರು ಸುಪ್ರಿಂಕೋರ್ಟ್ ನ್ಯಾಯಮೂರ್ತಿಗಳ ಐತಿಹಾಸಿಕ ಸುದ್ದಿಗೋಷ್ಠಿ ಮತ್ತು ಮುಖ್ಯನ್ಯಾಯಮೂರ್ತಿ ಮೇಲಿನ ಆರೋಪ ವಿವಾದ ಮೂರೇ ದಿನದಲ್ಲಿ ಸುಖಾಂತ್ಯ ಕಂಡಿದೆ.
ಬಂಡಾಯ ಎದ್ದಿದ್ದ ನ್ಯಾಯಮೂರ್ತಿಗಳು ಹಾಗೂ ಮುಖ್ಯನ್ಯಾಯಮೂರ್ತಿ ನಡುವೆ ಸಂಧಾನ ಮಾಡಿರುವ ಬಾರ್ ಕೌನ್ಸಿಲ್ ಆಫ್ ಇಂಡಿಯಾ ನ್ಯಾಯಮೂರ್ತಿಗಳ ನಡುವಿನ ಬಿಕ್ಕಟ್ಟನ್ನು ಶಮನ ಮಾಡಿವೆ.
ಇತಿಹಾಸದಲ್ಲಿ ಮೊದಲ ಬಾರಿಗೆ ಸುಪ್ರಿಂ ನ್ಯಾಯಮೂರ್ತಿಗಳಿಂದ ಪತ್ರಿಕಾಗೋಷ್ಠಿ
ಇಂದು ಬೆಳಿಗ್ಗೆ ಬಂಡಾಯ ಎದ್ದಿದ್ದ ನ್ಯಾಯಮೂರ್ತಿ ಚೆಲಮೇಶ್ವರ್, ರಂಜನ್ ಗೊಗೋಯಿ, ಮದನ್ ಲೋಕೂರ್, ಕುರಿಯನ್ ಜೋಸೆಫ್ ಅವರುಗಳು ಮುಖ್ಯನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರ ಜೊತೆ ಚಹಾ ಕುಡಿಯುವ ಮೂಲಕ ವಿವಾದಕ್ಕೆ ತೆರೆ ಎಳೆದಿದ್ದಾರೆ.
ಈ ವಿಷಯವನ್ನು ಸುದ್ದಿಗೋಷ್ಠಿ ನಡೆಸಿ ಹಂಚಿಕೊಂಡ ಬಾರ್ ಕೌನ್ಸಿಲ್ ಆಫ್ ಇಂಡಿಯಾದ ಅಧ್ಯಕ್ಷ ಮನನ್ ಮಿಶ್ರಾ, ನ್ಯಾಯಮೂರ್ತಿಗಳ ನಡುವಿನ ವಿವಾದ ಬಗೆಹರಿದಿದ್ದು, ನ್ಯಾಯಾಲಯ ಪ್ರಕ್ರಿಯೆ ಸಾಮಾನ್ಯದಂತೆ ನಡೆಯಲಿದೆ ಎಂದಿದ್ದಾರೆ.
ಮುಖ್ಯ ನ್ಯಾಯಮೂರ್ತಿ 'ಪದಚ್ಯುತಿ' ದೇಶ ನಿರ್ಧರಿಸಲಿ: ನ್ಯಾ. ಚೆಲಮೇಶ್ವರ್
ನ್ಯಾಯಾಂಗದ ವಿಷಯದಲ್ಲಿ ಯಾವುದೇ ಮೂರನೇ ವ್ಯಕ್ತಿಗಳು ಮಧ್ಯಪ್ರವೇಶಿಸುವುದು ಒಳ್ಳೆಯದಲ್ಲ, ರಾಜಕಾರಣಿಗಳು ನ್ಯಾಯಾಂಗದಲ್ಲಿ ಹಸ್ತಕ್ಷೇಪ ಮಾಡುವುದು ಸಲ್ಲ ಎಂದ ಅವರು ನ್ಯಾಯಾಂಗದ ಘನತೆಯನ್ನು ಎತ್ತಿ ಹಿಡಿಯುವ ಕಾರ್ಯವನ್ನು ಎಲ್ಲರೂ ಮಾಡಬೇಕಿದೆ ಎಂದಿದ್ದಾರೆ.
ಸಂಧಾನ ವಿಚಾರವಾಗಿ 15 ನ್ಯಾಯಮೂರ್ತಿಗಳನ್ನು ಭೇಟಿ ಮಾಡಿ ಮಾತುಕತೆ ನಡೆಸಿರುವ ಬಾರ್ ಕೌನ್ಸಿಲ್, ಮುಖ್ಯನ್ಯಾಯಮೂರ್ತಿಗಳ ವಿರುದ್ಧ ಬಂಡಾಯ ಎದ್ದಿದ್ದ ನಾಲ್ವರು ನ್ಯಾಯಾಧೀಶರನ್ನು ಮುಖ್ಯನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರೊಂದಿಗೆ ಎದುರು-ಬದುರು ಮಾಡಿಸಿ ಚರ್ಚೆ ಮೂಲಕ ವಿವಾದವನ್ನು ಇತ್ಯರ್ಥಗೊಳಿಸಿದ್ದಾರೆ.
ಸಂಧಾನದ ಬಳಿಕ ಇನ್ನು ಮುಂದೆ ಕೇಸುಗಳ ಹಂಚಿಕೆ ಹೇಗೆ ನಡೆಯಲಿದೆ ಎಂಬ ಕುತೂಹಲ ಇದ್ದು, ರೋಸ್ಟರ್ ಪದ್ಧತಿಯಲ್ಲಿ ಕೇಸುಗಳ ಹಂಚಿಕೆಯಾಗುತ್ತದೆಯೊ ಎಂಬುದು ಗಮನಿಸಬೇಕಾದ ಅಂಶ. ಸುದ್ದಿಗೋಷ್ಠಿ ಕರೆದಿದ್ದ ನ್ಯಾಯಮೂರ್ತಿಗಳು ನ್ಯಾ.ಲೋಯಾ ಅವರ ಸಾವಿನ ತನಿಖೆ ಬಗ್ಗೆ ಅಪಸ್ವರ ಎದ್ದಿದ್ದರು ಆದರೆ ನಿನ್ನೆ ಲೋಯಾ ಕುಟುಂಬದವರೆ 'ಲೋಯಾ ಸಾವಿನ ಬಗ್ಗೆ ಅನುಮಾನವಿಲ್ಲ' ಎಂದಿರುವ ಕಾರಣ ಸಾವಿನ ಮರುತನಿಖೆ ಮಾಡುವ ಸಾಧ್ಯತೆ ಇಲ್ಲ.