'ನೆಗಟಿವ್ ಪ್ರಚಾರ ಎಲ್ಲೆ ಮೀರಿದ್ದೇ ಕಾಂಗ್ರೆಸ್ ಸೋಲಿಗೆ ಕಾರಣ'
ನವದೆಹಲಿ, ಮೇ 24: 'ಮೋದಿ ಸರ್ಕಾರದ ಹುಳುಕುಗಳನ್ನು ಜನರ ಮುಂದಿಟ್ಟು, ವೋಟು ಕೇಳುವ ಬದಲು, ಮೋದಿ ವಿರುದ್ಧ ವೈಯಕ್ತಿಕ ನಿಂದನೆ ಮಾಡುವ ಮಟ್ಟಕ್ಕಿಳಿದಿದ್ದು ಕಾಂಗ್ರೆಸ್ ಸೋಲಿಗೆ ಮುಖ್ಯ ಕಾರಣ' ಎಂದು ಕಾಂಗ್ರೆಸ್ ನಾಯಕ ಮತ್ತು ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಮಗ ಅನಿಲ್ ಶಾಸ್ತ್ರಿ ಅಭಿಪ್ರಾಯಪಟ್ಟಿದ್ದಾರೆ.
ಪುಲ್ವಾಮಾ ಬಗ್ಗೆ ಕಾಂಗ್ರೆಸ್ ನಾಯಕರು ಸಾಕ್ಷಿ ಕೇಳಿದ್ದು ಜನರ ಮನಸ್ಸಿಗೆ ಹಿಡಿಸಲಿಲ್ಲ, ಚುನಾವಣೆ ಎಂದ ಮೇಲೆ, ನೆಗಟಿವ್ ಪ್ರಚಾರ ಇದ್ದಿದ್ದೆ, ಸರ್ಕಾರದ ಹುಳುಕುಗಳನ್ನು ತೋರಿಸುವುದು ವಿರೋಧ ಪಕ್ಷದ ಕರ್ತವ್ಯ, ಆದರೆ, ಇದು ಮಿತಿ ಮೀರಿದ್ದರಿಂದ ರಾಜಸ್ಥಾನ, ಛತ್ತೀಸ್ ಗಢ, ಮಧ್ಯಪ್ರದೇಶದಲ್ಲಿ ಅಧಿಕಾರದಲ್ಲಿದ್ದರೂ ಸಿಂಧಿಯಾ ಅವರು ಗೆಲ್ಲಲಿಲ್ಲ. ಎಲ್ಲಾ ಕಡೆಗಳಲ್ಲೂ ಈ ನಕಾರಾತ್ಮಕ ಧೋರಣೆ ಕಾಂಗ್ರೆಸ್ಸಿಗೆ ಯಶಸ್ಸು ತಂದುಕೊಡಲಿಲ್ಲ ಎಂದಿದ್ದಾರೆ.
ಪ್ರಧಾನಿ ಮೋದಿ ವಿರುದ್ಧ ನೆಗಟಿವ್ ಪ್ರಚಾರ ಮಾಡುವ ನಿಟ್ಟಿನಲ್ಲಿ 'ಚೌಕಿದಾರ್ ಚೋರ್ ಹೈ' ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಪದೇ ಪದೆ ಹೇಳುತ್ತಿದ್ದರು, ಇದು ಜನರು ಒಪ್ಪಿಗೆಯಾಗಲಿಲ್ಲ. ಈ ಕುರಿತಂತೆ ಕೋರ್ಟ್ ಮೆಟ್ಟಿಲೇರಬೇಕಾಯಿತು. ಸಾರ್ವಜನಿಕ ಸಮಸ್ಯೆಗಳನ್ನು ಗುರುತಿಸುವಲ್ಲಿ ಕಾಂಗ್ರೆಸ್ ವಿಫಲವಾಯಿತು. ನ್ಯಾಯ್ ಯೋಜನೆ ಬಗ್ಗೆ ಜನರಿಗೆ ಮನವರಿಕೆ ಮೆಚ್ಚುಗೆಯಾಗುವಷ್ಟರಲ್ಲಿ ಕಾಲ ಮೀರಿತ್ತು.
ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ವಿಜಯ ಸಾಧಿಸಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಕಾಂಗ್ರೆಸ್ ಸೋಲಿನ ಪರಾಮರ್ಶೆ, ಆತ್ಮಾವಲೋಕನ ನಡೆಯುತ್ತಿದೆ.