'ಪೆಗಾಸಸ್ ಬಗ್ಗೆ ನ್ಯಾಯಾಂಗ ತನಿಖೆ ಅಗತ್ಯ': ಪ್ರಧಾನಿಯನ್ನು ಭೇಟಿಯಾದ ಮಮತಾ
ನವದೆಹಲಿ, ಜು.27: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪ್ರಧಾನಿ ನರೇಂದ್ರ ಮೋದಿಯನ್ನು ಪ್ರಧಾನಿ ನಿವಾಸದಲ್ಲಿ ಭೇಟಿಯಾಗಿದ್ದಾರೆ. ಪರಸ್ಪರ ವಾಕ್ಸಮರಕ್ಕೆ ಕಾರಣವಾಗಿದ್ದ ಪಶ್ಚಿಮ ಬಂಗಾಳದ ಚುನಾವಣೆಯ ನಂತರ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯು ಪ್ರಧಾನಮಂತ್ರಿಯೊಂದಿಗೆ ನಡೆಸಿದ ಮೊದಲ ಸಭೆ ಇದಾಗಿದೆ.
ಮಮತಾ ಬ್ಯಾನರ್ಜಿ ಕೋವಿಡ್ ಲಸಿಕೆ ಸೇರಿದಂತೆ ರಾಜ್ಯಕ್ಕೆ ಕೇಂದ್ರ ಬಾಕಿ ಇರುವ ಹಣವನ್ನು ಬಿಡುಗಡೆ ಮಾಡುವುದನ್ನು ಖಚಿತಪಡಿಸಿಕೊಳ್ಳಲು ಪ್ರಧಾನ ಮಂತ್ರಿಯಲ್ಲಿ ಮನವಿ ಮಾಡಿರುವ ಸಾಧ್ಯತೆ ಇದೆ. ಸಭೆಯ ಬಳಿಕ ಮಾಧ್ಯಮವನ್ನು ಉದ್ದೇಶಿಸಿ ಮಾತನಾಡಿದ ಮಮತಾ ಬ್ಯಾನರ್ಜಿ, ವಿರೋಧ ಪಕ್ಷದ ನಾಯಕರು, ಇಬ್ಬರು ಕೇಂದ್ರ ಸಚಿವರು ಮತ್ತು 40 ಪತ್ರಕರ್ತರ ಮೇಲೆ ಬೇಹುಗಾರಿಕೆ ನಡೆಸಲಾಗಿದೆ ಎಂಬ ಪೆಗಾಸಸ್ ಹಗರಣದ ಬಗ್ಗೆ ಸುಪ್ರೀಂ ಕೋರ್ಟ್ ಮೇಲ್ವಿಚಾರಣೆ ನಡೆಸಬೇಕು ಎಂದು ಹೇಳಿದರು. ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಉತ್ತರವನ್ನು ಕೋರಿ ಈ ಪೆಗಾಸಸ್ ಹಗರಣ ಸಂಸತ್ತಿನ ಮಾನ್ಸೂನ್ ಅಧಿವೇಶನದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಪ್ರಧಾನಿ ಮೋದಿಯನ್ನು ಕಾಯಿಸಿದ ಆರೋಪ - ದೀದಿ ಹೇಳಿದ್ದೇನು?
ಮಮತಾ ಬ್ಯಾನರ್ಜಿಯ ಸೋದರಳಿಯ ಅಭಿಷೇಕ್ ಬ್ಯಾನರ್ಜಿಯ ಹೆಸರು ಕೂಡಾ ಪೆಗಾಸಸ್ ಪಟ್ಟಿಯಲ್ಲಿದೆ ಎಂದು ಭಾರತದ ದಿ ವೈರ್ ಸೇರಿಮಂತೆ ಹಲವಾರು ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿದೆ. ಈ ಹಿನ್ನೆಲೆ ಸೋಮವಾರವಷ್ಟೇ ಮಮತಾ ಬ್ಯಾನರ್ಜಿ ಸುಪ್ರೀಂ ತನಿಖೆಗೆ ಆಗ್ರಹಿಸಿದ್ದರು.
ಇನ್ನು ಪಿಎಂ ಸಭೆಯನ್ನು ಮುಖ್ಯಮಂತ್ರಿ ಬ್ಯಾನರ್ಜಿ, 'ಸೌಜನ್ಯ ಭೇಟಿ' ಎಂದು ಹೇಳಿದ್ದಾರೆ. ಕೋವಿಡ್ ಪರಿಸ್ಥಿತಿ, ರಾಜ್ಯಕ್ಕೆ ಲಸಿಕೆಗಳು ಮತ್ತು ಔಷಧಿಗಳ ಪೂರೈಕೆ ಮತ್ತು ಬಂಗಾಳವನ್ನು ಬಾಂಗ್ಲಾ ಎಂದು ಮರುನಾಮಕರಣ ಮಾಡುವ ಪ್ರಸ್ತಾಪವನ್ನು ಚರ್ಚಿಸಿದ್ದಾರೆ ಎಂದು ತಿಳಿಸಿದ್ದಾರೆ. ಇನ್ನು ಈ ಸಂದರ್ಭದಲ್ಲಿ ಮಾಧ್ಯಮಗಳು ಮತ್ತಷ್ಟು ಪ್ರಶ್ನೆ ಕೇಳಿದಾಗ, ''ಪ್ರಧಾನಿ ಏನು ಹೇಳಿದ್ದಾರೆ ಎಂಬುವುದನ್ನು ನಾನು ಹೇಳಬಾರದು,'' ಎಂದಿದ್ದಾರೆ.
"ನಾನು ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ರನ್ನೂ ಭೇಟಿಯಾಗಬೇಕಿತ್ತು. ಆದರೆ ಸಮಸ್ಯೆಯೆಂದರೆ, ರಾಷ್ಟ್ರಪತಿಯನ್ನು ಭೇಟಿಯಾಗುವ ಮೊದಲು ಆರ್ಟಿ-ಪಿಸಿಆರ್ ಪರೀಕ್ಷಾ ವರದಿ ಹೊಂದಿರಬೇಕು. ನನಗೆ ಎರಡೂ ಡೋಸ್ ಲಸಿಕೆ ಸಿಕ್ಕಿವೆ. ನಾನು ಇಲ್ಲಿಗೆ ಎಲ್ಲಿ ಹೋಗುತ್ತೇನೆ," ಎಂದು ಹೇಳಿದ್ದಾರೆ.
ಪೆಗಾಸಸ್ ಬಳಸಿ ಪ್ರಶಾಂತ್ ಕಿಶೋರ್ ಮೇಲೆ ಕಣ್ಗಾವಲು: ಮಮತಾ
ಈ ಹಿಂದೆ ಮೇ ತಿಂಗಳಲ್ಲಿ ಉಭಯ ನಾಯಕರು ಭೇಟಿಯಾಗಿದ್ದರು. ಪ್ರಧಾನಿ ಮೋದಿಯವರ ಚಂಡಮಾರುತ ಯಾಸ್ ಪರಿಶೀಲನಾ ಸಭೆಗೆ ಮಮತಾ ಹಾಜರಾಗದೆ ಇರುವುದು ಕೇಂದ್ರ ಸರ್ಕಾರ ಹಾಗೂ ಪಶ್ಚಿಮ ಬಂಗಾಳ ಸರ್ಕಾರದ ನಡುವಿನ ಸಂಘರ್ಷಕ್ಕೆ ಕಾರಣವಾಗಿತ್ತು. ಕೇಂದ್ರ ಸರ್ಕಾರವು ಪ್ರಧಾನಿಯನ್ನು ಮಮತಾ ಕಾಯಿಸಿದ್ದಾರೆ ಎಂದು ಆರೋಪ ಮಾಡಿದ್ದರೆ, ಮಮತಾ ಈ ಆರೋಪವನ್ನು ಅಲ್ಲಗಳೆದಿದ್ದರು.
''ಪ್ರಧಾನ ಮಂತ್ರಿ ಹೆಲಿಕಾಪ್ಟರ್ನಿಂದ ಇಳಿಯುತ್ತಾರೆ ಎಂದು ಹೇಳಿ, ನಮ್ಮನ್ನು 20 ನಿಮಿಷಗಳ ಕಾಲ ಕಾಯುವಂತೆ ಮಾಡಲಾಯಿತು. ನಾವು ತಾಳ್ಮೆಯಿಂದ ಕಾಯುತ್ತಿದ್ದೆವು. ಆದರೆ ಬಳಿಕ ಸಭೆ ನಡೆಯಬೇಕಾದ ಸ್ಥಳಕ್ಕೆ ತಲುಪುವಂತೆ ತಿಳಿಸದ ಕಾರಣ ನಾವು ಅಲ್ಲಿಂದ ಹೊರಟು ಸಭೆ ನಡೆಯುವ ಸ್ಥಳಕ್ಕೆ ಆಗಮಿಸಿದೆವು. ಆದರೆ ಅಷ್ಟರಲ್ಲೇ ಪ್ರಧಾನಿ ಅಲ್ಲಿಗೆ ಆಗಮಿಸಿ, ಸಭೆ ನಡೆಸುತ್ತಿದ್ದರು. ಆದರೆ ನಮಗೆ ಪ್ರಧಾನಿ ಅಲ್ಲಿಗೆ ತಲುಪಿದ, ಸಭೆ ಆರಂಭವಾದ ವಿಷಯವೇ ತಿಳಿಸಿರಲಿಲ್ಲ,'' ಎಂದು ಸ್ಪಷ್ಟನೆ ನೀಡಿದ್ದಾರೆ.
''ನಾವು ನಮ್ಮ ವರದಿಯನ್ನು ಪ್ರಧಾನ ಮಂತ್ರಿಗೆ ಸಲ್ಲಿಸಲು ನಿರ್ಧರಿಸಿದೆವು. ಬಳಿಕ ಪ್ರಧಾನಿ ಅನುಮತಿ ಪಡೆದು ದಿಘಾಗೆ ಹೋದೆವು. ನಾನು ಮೂರು ಬಾರಿ ಪ್ರಧಾನಮಂತ್ರಿಯ ಅನುಮತಿ ಕೋರಿದ್ದೆ. 'ಸರ್, ನಿಮ್ಮ ಅನುಮತಿಯೊಂದಿಗೆ, ನಾನು ದಯವಿಟ್ಟು ತೆರಳಬಹುದೇ?, ಸಮೀಕ್ಷೆಗಾಗಿ ದಿಘಾಗೆ ಹೋಗಬೇಕಾಗಿದೆ, ಹವಾಮಾನವೂ ತುಂಬಾ ಉತ್ತಮವಾಗಿಲ್ಲ' ಎಂದು ಕೋರಿದೆವು. ಬಳಿಕ ಅಲ್ಲಿಂದ ತೆರಳಿದೆವು,'' ಎಂದು ಕೂಡಾ ಮಮತಾ ಬ್ಯಾನರ್ಜಿ ತಿಳಿಸಿದ್ದರು.
ಈ ಎಲ್ಲಾ ಘಟನೆಯಲ್ಲಿ ನಡುವೆ ಸಿಲುಕಿ ಬಿದ್ದ ಪಶ್ಚಿಮ ಬಂಗಾಳ ಮುಖ್ಯ ಕಾರ್ಯದರ್ಶಿ ಅಲಪನ್ ಬಂಡೋಪಾಧ್ಯಾಯ್ ಕೇಂದ್ರವು ವಾಪಸ್ ಕರೆಸಿಕೊಂಡರೂ ಮೇ 31 ರಂದು ನಿವೃತ್ತರಾದ ಅಲಪನ್ ಬಂಗಾಳ ಮುಖ್ಯಮಂತ್ರಿಯ ವಿಶೇಷ ಸಲಹೆಗಾರರಾದರು.
ಮಂಗಳವಾರ ದೆಹಲಿಗೆ ಭೇಟಿ ನೀಡಿದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಕಾಂಗ್ರೆಸ್ ಮುಖಂಡ ಕಮಲ್ ನಾಥ್ರನ್ನು ಭೇಟಿಯಾದರು. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಜೊತೆ ಸಭೆಯನ್ನು ಕೂಡಾ ಮಮತಾ ನಡೆಸಲಿದ್ದಾರೆ. ತನ್ನ ಮೂರು ದಿನಗಳ ದೆಹಲಿ ಭೇಟಿಯಲ್ಲಿ ಮಮತಾ ಹಲವಾರು ವಿಪಕ್ಷ ನಾಯಕರನ್ನು ಭೇಟಿಯಾಗಲಿದ್ದಾರೆ. ಸಮಾಜವಾದಿ ಪಕ್ಷದ ಮುಖಂಡ ಅಖಿಲೇಶ್ ಯಾದವ್ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕೂಡ ಅವರನ್ನು ಭೇಟಿ ಮಾಡುವ ನಿರೀಕ್ಷೆಯಿದೆ.
ಇನ್ನು ಮಮತಾ ಸಂಸದರಲ್ಲದಿದ್ದರೂ ಕಳೆದ ವಾರ ತೃಣಮೂಲ ಸಂಸದೀಯ ಪಕ್ಷದ ನಾಯಕರಾಗಿ ಆಯ್ಕೆಯಾಗಿದ್ದರು.
(ಒನ್ಇಂಡಿಯಾ ಸುದ್ದಿ)