ಮೀಸಲಾತಿ ಕುರಿತು ಸೌಹಾರ್ದಯುತ ಚರ್ಚೆ ಅಗತ್ಯ: ಮೋಹನ್ ಭಾಗವತ್
ನವದೆಹಲಿ, ಆಗಸ್ಟ್ 19: ಮೀಸಲಾತಿಯ ಪರವಾಗಿರುವವರು ಮತ್ತು ಅದನ್ನು ವಿರೋಧಿಸುವವರ ನಡುವೆ ಸೌಹಾರ್ದಯುತ ವಾತಾವರಣದಲ್ಲಿ ಚರ್ಚೆ ನಡೆಯುವ ಅಗತ್ಯವಿದೆ ಎಂದು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಭಾನುವಾರ ಹೇಳಿದರು.
'ನಾನು ಮೀಸಲಾತಿ ಕುರಿತು ಈ ಹಿಂದೆಯೂ ಹೇಳಿಕೆ ನೀಡಿದ್ದೆ. ಆದರೆ, ಅದು ಸಾಕಷ್ಟು ಗದ್ದಲ ಸೃಷ್ಟಿಸಿತು. ವಾಸ್ತವ ವಿಚಾರದಿಂದ ಚರ್ಚೆ ಬೇರೆಡೆಗೆ ಹೊರಳಿತು. ಮೀಸಲಾತಿಯ ಪರ ವಾದಿಸುತ್ತಿರುವವರು ಅದರ ವಿರುದ್ಧ ಇರುವವರ ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು ಮಾತನಾಡಬೇಕು. ಹಾಗೆಯೇ ಅದನ್ನು ವಿರೋಧಿಸುವವರು ಪರವಾಗಿರುವವರ ಹಿತಾಸಕ್ತಿಗಳನ್ನು ಪರಿಗಣಿಸಬೇಕು' ಎಂದರು.
ಚುನಾವಣೆ ಬಳಿಕ ರಾಮ ಮಂದಿರ ವಿಚಾರ ಕೆದಕಿದ ಆರೆಸ್ಸೆಸ್
ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ನಡೆದ 'ಜ್ಞಾನ ಉತ್ಸವ' ಕಾರ್ಯಕ್ರಮದ ಸಮಾರೋಪದಲ್ಲಿ ಮಾತನಾಡಿದ ಅವರು, ಮೀಸಲಾತಿಯ ಕುರಿತು ಚರ್ಚೆಗಳು ಪ್ರತಿಬಾರಿಯೂ ತೀಕ್ಷ್ಣವಾದ ಕ್ರಿಯೆ ಮತ್ತು ಪ್ರತಿಕ್ರಿಯೆಯ ಫಲಿತಾಂಶ ಹೊಂದಿರುತ್ತದೆ. ಈ ವಿಚಾರವಾಗಿ ಸಮಾಜದ ವಿವಿಧ ವರ್ಗಗಳ ನಡುವೆ ಸೌಹಾರ್ದತೆ ಇರಬೇಕಾದ ಅಗತ್ಯವಿದೆ ಎಂದು ಹೇಳಿದರು.
ಮೀಸಲಾತಿ ನೀತಿಯನ್ನು ಪರಾಮರ್ಶೆಗೆ ಒಡ್ಡಬೇಕಾದ ಅಗತ್ಯವಿದೆ ಎಂದು ಈ ಹಿಮದೆ ಭಾಗವತ್ ಹೇಳಿದ್ದರು. ಅದಕ್ಕೆ ವಿವಿಧ ಪಕ್ಷಗಳು ಮತ್ತು ಜಾತಿ ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿದ್ದವು.
ರಾಮಮಂದಿರ ನಿರ್ಮಾಣಕ್ಕಾಗಿ ಕಾನೂನಿನ ಅಗತ್ಯವಿದೆ: ಭಾಗವತ್
ಆರೆಸ್ಸೆಸ್, ಬಿಜೆಪಿ ಮತ್ತು ಪಕ್ಷ ಮುನ್ನಡೆಸುತ್ತಿರುವ ಸರ್ಕಾರ, ಮೂರೂ ವಿಭಿನ್ನ ಸಂಸ್ಥೆಗಳಾಗಿವೆ. ಒಂದು ತೆಗೆದುಕೊಳ್ಳುವ ಕ್ರಮಕ್ಕೆ ಇನ್ನೊಂದನ್ನು ಹೊಣೆಗಾರನನ್ನಾಗಿ ಮಾಡಲು ಸಾಧ್ಯವಿಲ್ಲ ಎಂದು ಭಾಗವತ್ ಹೇಳಿದರು.ನರೇಂದ್ರ ಮೋದಿ ಸರ್ಕಾರದ ಮೇಲೆ ಆರೆಸ್ಸೆಸ್ನ ಪ್ರಭಾವದ ಕುರಿತ ಅಭಿಪ್ರಾಯಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿ ಮತ್ತು ಈ ಸರ್ಕಾರದಲ್ಲಿ ಸಂಘದ ಕಾರ್ಯಕರ್ತರು ಇರುವುದರಿಂದ ಅವರು ಆರೆಸ್ಸೆಸ್ ಅಭಿಪ್ರಾಯ ಕೇಳುತ್ತಾರೆ. ಆದರೆ ಅವರು ನಮ್ಮ ಮಾತನ್ನು ಒಪ್ಪಿಕೊಳ್ಳಬೇಕೆನ್ನುವುದು ಕಡ್ಡಾಯವಲ್ಲ. ಅದಕ್ಕೆ ಅವರು ಅಸಮ್ಮತಿಯನ್ನೂ ವ್ಯಕ್ತಪಡಿಸಬಹುದು ಎಂದರು.
ಒಮ್ಮೆ ಪಕ್ಷವು ಅಧಿಕಾರಕ್ಕೆ ಬಂದಾಗ ಆರೆಸ್ಸೆಸ್ಗೆ ಸರ್ಕಾರ ಮತ್ತು ರಾಷ್ಟ್ರೀಯ ಹಿತಾಸಕ್ತಿ ಆದ್ಯತೆ ಆಗುತ್ತದೆ ಎಂದು ಹೇಳಿದರು.