ಕರಿದ ಕೋಳಿ ಮಾಂಸ ಮಾರದಂತೆ ರೆಸ್ಟೊರೆಂಟ್ ಗಳಿಗೆ ದೆಹಲಿ ಪಾಲಿಕೆ ಸೂಚನೆ
ನವದೆಹಲಿ, ಜನವರಿ 12: ಸುಮಾರು ಹತ್ತು ಹದಿನೈದು ದಿನಗಳಿಂದೀಚೆಗೆ ದೇಶದ ಹಲವೆಡೆ ವಲಸೆ ಹಕ್ಕಿಗಳು, ಕೋಳಿ, ಬಾತುಕೋಳಿಗಳು ಸಾವಿರಾರು ಸಂಖ್ಯೆಯಲ್ಲಿ ಇದ್ದಕ್ಕಿದ್ದಂತೆ ಸಾವನ್ನಪ್ಪಿದ್ದು, ಪರೀಕ್ಷೆ ನಂತರ, ಹತ್ತು ರಾಜ್ಯಗಳಲ್ಲಿ ಹಕ್ಕಿ ಜ್ವರದ ಪ್ರಕರಣಗಳಿರುವುದು ದೃಢಪಟ್ಟಿದೆ. ಇದರಿಂದಾಗಿ ಎಲ್ಲೆಡೆ ಕಟ್ಟೆಚ್ಚರ ವಹಿಸಲು ಕೇಂದ್ರ ಸೂಚನೆ ನೀಡಿದೆ.
ಕೇರಳ, ರಾಜಸ್ಥಾನ, ಹಿಮಾಚಲ ಪ್ರದೇಶ, ಗುಜರಾತ್, ಹರಿಯಾಣ, ಪಂಜಾಬ್, ಉತ್ತರ ಪ್ರದೇಶ, ಮಧ್ಯ ಪ್ರದೇಶ ಹಾಗೂ ಮಹಾರಾಷ್ಟ್ರದಲ್ಲಿ ಹಕ್ಕಿ ಜ್ವರ ಪ್ರಕರಣ ದೃಢಪಟ್ಟಿದ್ದು, ದೆಹಲಿಯಲ್ಲಿಯೂ ಸೋಮವಾರ ಹಕ್ಕಿ ಜ್ವರದ ಪ್ರಕರಣ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಉತ್ತರ ದೆಹಲಿ ನಗರ ಪಾಲಿಕೆಯ ಸಾರ್ವಜನಿಕ ಆರೋಗ್ಯಾಧಿಕಾರಿಗಳು ರೆಸ್ಟೊರೆಂಟ್ ಗಳಿಗೆ ಕೋಳಿ ಮಾಂಸ ಮಾರಾಟದ ಕುರಿತಂತೆ ಸೂಚನೆ ಹೊರಡಿಸಿದ್ದಾರೆ. ಮುಂದೆ ಓದಿ...
ಕರಿದ ಕೋಳಿ ಮಾಂಸ ಮಾರದಂತೆ ಸೂಚನೆ
ನವದೆಹಲಿಯಲ್ಲಿ ಸೋಮವಾರ ಹಕ್ಕಿ ಜ್ವರ ದೃಢಪಟ್ಟ ಹಿನ್ನೆಲೆಯಲ್ಲಿ ಉತ್ತರ ದೆಹಲಿ ನಗರ ಪಾಲಿಕೆಯು ಸೋಮವಾರ ಸಭೆ ನಡೆಸಿದ್ದು, ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು. ಹಕ್ಕಿ ಜ್ವರ ನಿವಾರಣೆಗೆ ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಚರ್ಚೆ ನಡೆಸಿ ಉತ್ತರ ದೆಹಲಿಯ ಆರು ವಲಯಗಳಲ್ಲಿ ಮೇಲ್ವಿಚಾರಣಾ ಸಮಿತಿ ರಚನೆ ಹಾಗೂ ಜಾನುವಾರು ಮಾರುಕಟ್ಟೆ ಮೇಲೆ ನಿಗಾ ವಹಿಸಲು ಸಮಿತಿ ರಚನೆಗೆ ತಿರ್ಮಾನಿಸಿರುವುದಾಗಿ ತಿಳಿಸಿದರು.
ಭಾರತದಲ್ಲಿ ಹಕ್ಕಿಜ್ವರ; ವಿಜ್ಞಾನಿಗಳಿಂದ ಬಂತು ಹೈ ಅಲರ್ಟ್
ಹಕ್ಕಿ ಜ್ವರ ತಗ್ಗುವವರೆಗೂ ನಿಯಮ ಪಾಲಿಸಲು ಮನವಿ
ಪ್ರತಿ ವಾರ್ಡ್ ನ ಸಾರ್ವಜನಿಕ ಆರೋಗ್ಯಾಧಿಕಾರಿಗಳಿಗೆ ವಾರ್ಡ್ ನಲ್ಲಿನ ರೆಸ್ಟೊರೆಂಟ್ ಗಳಿಗೆ ಹಕ್ಕಿ ಜ್ವರದ ಪ್ರಕರಣಗಳು ತಗ್ಗುವವರೆಗೂ ಕರಿದ ಕೋಳಿ ಮಾಂಸವನ್ನು ಮಾರದೇ ಇರುವಂತೆ ಸೂಚಿಸಲು ತಿಳಿಸಿರುವುದಾಗಿ ಮೇಯರ್ ಜೈ ಪ್ರಕಾಶ್ ಮಾಹಿತಿ ನೀಡಿದರು.
ಮಾಂಸವನ್ನು ಸರಿಯಾಗಿ ಬೇಯಿಸಿ ತಿನ್ನುವಂತೆ ಸೂಚನೆ
ಹಕ್ಕಿ ಜ್ವರದ ಪ್ರಕರಣಗಳು ಹೆಚ್ಚಾಗುತ್ತಿದ್ದಂತೆ ಜನರಲ್ಲಿ ಆತಂಕ ಸೃಷ್ಟಿಯಾಗಿರುವ ಕುರಿತು ಪ್ರತಿಕ್ರಿಯಿಸಿರುವ ಕೇಂದ್ರ ಹೈನುಗಾರಿಕಾ ಸಚಿವ ಗಿರಿರಾಜ್ ಸಿಂಗ್, "ಹಕ್ಕಿ ಜ್ವರದಿಂದ ಜನರು ಆತಂಕ ಪಡುವ ಅಗತ್ಯವಿಲ್ಲ" ಎಂದಿದ್ದಾರೆ. ಜನರು ಆತಂಕ ಪಡುವ ಅಗತ್ಯವಿಲ್ಲ. ಈ ಸೋಂಕಿನ ಕುರಿತು ಯಾವುದೇ ವದಂತಿಗಳಿಗೆ ಕಿವಿಗೊಡಬೇಡಿ. ಕೋಳಿ ಮಾಂಸ, ಉತ್ಪನ್ನಗಳನ್ನು ಸೂಕ್ತ ರೀತಿ ಬೇಯಿಸಿ ಸೇವಿಸಿದರೆ ಮನುಷ್ಯರಿಗೆ ಯಾವುದೇ ರೀತಿ ತೊಂದರೆ ಇಲ್ಲ ಎಂದು ಜನರಲ್ಲಿ ಮನವಿ ಮಾಡಿದ್ದಾರೆ.
85 ರೂ.ಗೆ 1 ಕೆಜಿ ಕೋಳಿ ಮಾಂಸ: ಇದು ಹಕ್ಕಿಜ್ವರದ ಪ್ರಭಾವ
ಸಿಎಂಗಳಿಗೆ ಪ್ರಧಾನಿ ಮೋದಿ ಸಲಹೆ
ಕೊರೊನಾ ಲಸಿಕೆ ಸಂಬಂಧಿ ಸೋಮವಾರ ಕರೆದಿದ್ದ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಹಕ್ಕಿ ಜ್ವರ ಪ್ರಕರಣಗಳ ಕುರಿತೂ ಪ್ರಸ್ತಾಪಿಸಿದರು. ಇದುವರೆಗೂ ಹತ್ತು ರಾಜ್ಯಗಳಲ್ಲಿ ಹಕ್ಕಿ ಜ್ವರದ ಪ್ರಕರಣಗಳು ಕಂಡುಬಂದಿದ್ದು, ಕೋಳಿ ಸಾಗಣೆ, ಮೃಗಾಲಯ, ನೀರಿನ ಸ್ಥಳಗಳನ್ನು ನಿರಂತರವಾಗಿ ನಿಗಾ ವಹಿಸುವಂತೆ ಸೂಚಿಸಿದರು. ಕೇರಳ, ರಾಜಸ್ಥಾನ, ಹಿಮಾಚಲ ಪ್ರದೇಶ, ಗುಜರಾತ್, ಹರಿಯಾಣ, ಪಂಜಾಬ್, ಉತ್ತರ ಪ್ರದೇಶ, ಮಧ್ಯ ಪ್ರದೇಶ, ದೆಹಲಿ ಹಾಗೂ ಮಹಾರಾಷ್ಟ್ರದಲ್ಲಿ ಹಕ್ಕಿ ಜ್ವರ ಪ್ರಕರಣ ದೃಢಪಟ್ಟಿರುವುದಾಗಿ ತಿಳಿಸಿದರು.